ಮೂಡುಬಿದಿರೆ ಪ್ಲೆಸ್ಕ್ಲಬ್ನಿಂದ 'ಮಾಧ್ಯಮ ಹಬ್ಬ' : ಹಿರಿಯ ಪತ್ರಕರ್ತರಿಗೆ ಸನ್ಮಾನ
ಮೂಡುಬಿದಿರೆ, ಜು. 1 : ಉತ್ತಮ ಸಮಾಜದ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾದುದು. ದೇಶದಲ್ಲಿ ಹಸಿವು, ಆರ್ಥಿಕ ಸಾರತಮ್ಯ, ಆಡಳಿತ, ಅಸ್ಪೃಶ್ಯತೆ ಮುಂತಾದ ಸಮಸ್ಯೆಗಳಿವೆ. ಆದರೆ ಇಂದು ಈ ವಿಚಾರಗಳ ಬಗ್ಗೆ ತಿಳಿಸದೆ ಜನರ ಗಮನವನ್ನು ಬೇರೆಡೆಗೆ ತಿರುಗಿಸುವಂತಹ ಕೆಲಸಗಳು ಸಮಾಜದಲ್ಲಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸಮಾಜಕ್ಕೆ ಪ್ರಸ್ತುತವಾಗಿ ಬೇಕಾಗುವ ವಿಷಯಗಳ ಬಗ್ಗೆ ಗಮನ ಹರಿಸಿ ಜನರಿಗೆ ತೋರಿಸಿಕೊಡುವಂತಹ ಕೆಲಸಗಳನ್ನು ಮಾಡಬೇಕು ಎಂದು 'ವಾರ್ತಾಭಾರತಿ' ದೈನಿಕದ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ ಹೇಳಿದರು.
ಮೂಡುಬಿದಿರೆ ಪ್ರೆಸ್ಕ್ಲಬ್, ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ರವಿವಾರ ಸಮಾಜಮಂದಿರದಲ್ಲಿ ನಡೆದ ‘ಮಾಧ್ಯಮ ಹಬ್ಬ’ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಪತ್ರಕರ್ತ ಜಿತೇಂದ್ರ ಕುಂದೇಶ್ವರ್ ಅವರು ಸದಾನಂದ ಹೆಗಡೆಕಟ್ಟೆ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತರ ನಿಂದನೆಯ ಪ್ರವೃತ್ತಿ ಹೆಚ್ಚಾಗುತ್ತಿರುವ ಈ ಕಾಲಘಟದಲ್ಲಿ ತನಿಖಾ ಪತ್ರಿಕೋದ್ಯಮ ಅಸ್ತ್ರದ ಮುಖೇನ ಭ್ರಷ್ಟಾಚಾರದ ಹೋರಾಟ ಮಾಡುವ ಪತ್ರಕರ್ತರ ಕೆಲಸ ಲೋಕೋದ್ಧಾರ ಕೆಲಸವಾಗಿದೆ. ಪರ್ತಕ್ರರ್ತರು ನಿರ್ದಿಷ್ಠ ಸಿದ್ಧಾಂತಗಳಿಗೆ ಜೋತು ಬೀಳದೆ ಪ್ರತಿ ವಿಷಯಗಳನ್ನು ಸತ್ಯ, ನ್ಯಾಯದ ದೃಷ್ಟಿಕೋನದಲ್ಲಿ ನೋಡುವುದೇ ನಿಜವಾದ ಪತ್ರಿಕಾ ಧರ್ಮ ಎಂದು ಹೇಳಿದರು.
ಪ್ರೆಸ್ಕ್ಲಬ್ ಅಧ್ಯಕ್ಷ ಜೈಸನ್ ತಾಕೋಡೆ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಿಗಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರೆಸ್ಕ್ಲಬ್ನಲ್ಲಿ ನಿರ್ವಾಹಕಿಯಾಗಿ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಂಧ್ಯಾ ಶೆಟ್ಟಿ ಅಲಂಗಾರು ಅವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ನವೀನ್ ಸಾಲ್ಯಾನ್ ಸ್ವಾಗತಿಸಿದರು. ಸದಸ್ಯ ವೇಣುಗೋಪಾಲ್ ಸನ್ಮಾನ ಪತ್ರ ವಾಚಿಸಿದರು. ಸದಸ್ಯ ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ವಂದಿಸಿದರು. ಬಳಿಕ ಸಂಘದ ಸದಸ್ಯ ದೀವಿತ್ ಎಸ್.ಕೋಟ್ಯಾನ್ ಅವರಿಂದ ವಿನೂತನ ಶೈಲಿಯಲ್ಲಿ ಏಕವ್ಯಕ್ತಿ ಯಕ್ಷ ಪ್ರಯೋಗ ಹಾಗೂ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸದಸ್ಯ ಪ್ರಸನ್ನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.