ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಆಯುಷ್ ವೈದ್ಯರ ನೇಮಕ-ಶ್ರೀಪಾದ್ ಯಶೋನಾಯಕ್
ತಲಪಾಡಿ ದೇವಿನಗರದಲ್ಲಿ ಶಾರದಾ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

ಮಂಗಳೂರು, ಜು .1: ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೂ ಆಯುಷ್ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ಯಶೋನಾಯಕ್ ತಿಳಿಸಿದ್ದಾರೆ.
ತಲಪಾಡಿಯ ದೇವಿ ನಗರದಲ್ಲಿ ಶಾರದ ಸಮೂಹ ಸಂಸ್ಥೆಗಳ ಮೂಲಕ ನಿರ್ಮಾಣಗೊಂಡ 100 ಹಾಸಿಗೆಗಳ ಶಾರದಾ ಆಯುರ್ವೇದ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಳೆದ ಕೆಲವು ದಶಕಗಳಿಂದ ಯರೋಪಿನ ದೇಶಗಳಲ್ಲಿ ಆಯುರ್ವೇದ ಹೆಚ್ಚು ಪ್ರಚಾರ ಪಡೆಯುತ್ತಿದೆ. ಭಾರತದಲ್ಲಿ ಹುಟ್ಟಿದ ಈ ವೈದ್ಯ ಪದ್ಧತಿ ಇಲ್ಲಿ ಮರೆಯಾಗಬಾರದು ಪ್ರಕೃತಿಗೆ ಹತ್ತಿರವಾದ ಈ ಚಿಕಿತ್ಸಾ ಪದ್ದತಿಗೆ ಪ್ರಾಮುಖ್ಯತೆ ನೀಡುವ ದೃಷ್ಟಿಯಲ್ಲಿ .ತುಳುನಾಡ್ ಟ್ರಸ್ಟ್ ಮೂಲಕ ಶಾರದಾ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಸಂಸ್ಥೆ ಮರಳಿ ಪ್ರಕೃತಿಯ ಕಡೆಗೆ ಹೋಗುವ ನಿಟ್ಟಿನಲ್ಲಿ ಆಯುರ್ವೇದ ಪದ್ಧತಿ ಮುಖ್ಯವಾಹಿನಿಗೆ ಬರಬೇಕು .ಈ ನಿಟ್ಟಿನಲ್ಲಿ ಶಾರದಾ ಆಯುರ್ವೇದ ಆಸ್ಪತ್ರೆ ಆರಂಭಿಸಿರುವುದು ಶ್ಲಾಘನೀಯ ಎಂದು ಶ್ರೀಪಾದ್ ಯಶೋ ನಾಯಕ್ ತಿಳಿಸಿದ್ದಾರೆ.
ನೀಟ್ ಮೂಲಕ ಆಯುಷ್ ಕಲಿಕೆಗೆ ಅವಕಾಶ:- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರವೇಶ ಪರೀಕ್ಷೆಯ ಮೂಲಕ (ನೀಟ್) ಭಾರತೀಯ ವೈದ್ಯಪದ್ಧತಿಯ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀಪಾದ್ ಯಶೋನಾಯಕ್ ತಿಳಿಸಿದ್ದಾರೆ.
ಆಯುಷ್ ಚಿಕಿತ್ಸಾ ಪದ್ಧತಿಯ ಆಯ್ಕೆ ಕೊನೆಯ ಆಯ್ಕೆಯಾಗ ಬಾರದು:- ಬಹುತೇಕ ಜನರು ಯಾವೂದಾದರೂ ಕಾಯಿಲೆ ಬಂದಾಗ ಮೊದಲು ಅಲೋಪಥಿ ವೈದ್ಯಪದ್ಧತಿಗೆ ಮೊರೆಹೋಗುತ್ತಾರೆ ಅಲ್ಲಿ ಎಲ್ಲಿಯೂ ಗುಣವಾಗದೆ ಇದ್ದಾಗ ಆಯುರ್ವೇದ ಚಿಕಿತ್ಸೆ ಪಡೆಯಲು ಬರುತ್ತಾರೆ. ಆಯುರ್ವೇದ ಪದ್ದತಿಯಂತಹ ರೋಗ ಗುಣಪಡಿಸುವ ಚಿಕಿತ್ಸೆ ನಮ್ಮ ಕೊನೆಯ ಆಯ್ಕೆಯಾಗಬಾರದು ಎಂದು ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಪ್ರಕೃತಿಯಿಂದ ದೂರವಾದಾಗ ರೋಗ ಮನುಷ್ಯನಿಗೆ ಹತ್ತಿರವಾಗುತ್ತದೆ. ಯಾವೂದೇ ಪದ್ಧತಿಯ ಚಿಕಿತ್ಸೆಯ ಮೂಲಕವಾದರೂ ರೋಗಿಯ ರೋಗ ಗುಣಪಡಿಸುವುದು ಮುಖ್ಯ.ದೇಶದಲ್ಲಿ ಆಯುಷ್ ವೈದ್ಯರ ಕೊರತೆ ಇದೆ. ಜರ್ಮನಿಯಲ್ಲೂ ಆಯುಷ್ ವೈದ್ಯರ ಬೇಡಿಕೆ ಇದೆ. ಶಾರದಾ ವಿದ್ಯಾಸಂಸ್ಥೆಯಿಂದ ಆಯುರ್ವೇದ ಕಾಲೇಜು ಆದಷ್ಟು ಶೀಘ್ರವಾಗಿ ಸ್ಥಾಪನೆಯಾದರೆ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ನಾನು ಪ್ರತಿನಿಧಿಸುವ ಮಂಗಳೂರು ವಿಧಾನ ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ಶಾರದಾ ಆಸ್ಪತ್ರೆ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುಸಜ್ಜಿತ ಶಾರದಾ ಆಯುರ್ವೇದ ಆಸ್ಪತ್ರೆ ಕರಾವಳಿಗೆ ದೊಡ್ಡ ಕೊಡುಗೆಯಾಗಿದೆ. ಪ್ರಾಚೀನ ಜ್ಞಾನುಗಳ ಮೂಲಕ ಬಂದಿರುವ ವಿಧ್ಯೆ ಉಳಿಯಬೇಕಾದರೆ ಆಯುರ್ವೇದ, ಯೋಗ,ಸಂಸ್ಕೃತಿ ಭಾಷೆಯ ಉಳಿವು ಅಗತ್ಯ. ಭಾರತೀಯರ ಕೊಡುಗೆಯಾಗಿ ಬಂದ ವಿಧ್ಯೆ ನಾಶವಾಗಿಲ್ಲ ,ಅದನ್ನು ಉಳಿಸಬೇಕಾಗಿದೆ ಎಂದು ಪೇಜಾವರ ಶ್ರೀ ತಿಳಿಸಿದರು.
ದೇಹದ ಆರೋಗ್ಯ ದೃಷ್ಟಿಯಿಂದ ಪ್ರಕೃತಿಯ ಚಿಕಿತ್ಸೆ ಹಾಗೂ ಗಿಡಮೂಲಿಕೆಗಳ ಸಂರಕ್ಷಣೆ ಮುಖ್ಯ ಎಂದು ಕೊಂಡೆವೂರು ಕ್ಷೇತ್ರದ ಯೋಗಾನಂದ ಸರಸ್ವತಿ ತಿಳಿಸಿದರು. ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಅಸ್ರಣ್ಣ ಶುಭ ಹಾರೈಸಿದರು.
ಬ್ರಿಟೀಷರ ಕಾಲದಲ್ಲಿ ನಿರ್ಲಕ್ಷಕ್ಕೀಡಾದ ಭಾರತೀಯ ವೈದ್ಯಪದ್ಧತಿಯ ಬಗ್ಗೆ ಜನ ಜಾಗೃತಿ ಹಾಗೂ ಬಳಸುವ ದೃಷ್ಟಿಯಿಂದ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಒದಗಿಸುವ ಹಿನ್ನೆಲೆಯಲ್ಲಿ ತಲಪಾಡಿಯಲ್ಲಿ ಆಯುರ್ವೇದ ಶಿಕ್ಷಣ ಸಂಸ್ಥೆಗಳನ್ನು ಮತ್ತು ಈಗ ಆಸ್ಪತ್ರೆಯನ್ನು ನಿರ್ಮಾಣ ಮಾಡಿರುವುದಾಗಿ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಶಾರದಾ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ಕೆ.ಎಸ್.ಕಲ್ಲೂರಾಯ, ಟ್ರಸ್ಟಿ ಎಚ್.ಸೀತಾರಾಮ ಉಪಸ್ಥಿತರಿದ್ದರುಸಮಾರಂಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು..ಶಾರದಾ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ರವಿ ಗಣೇಶ್ ಸ್ವಾಗತಿಸಿದರು. ಟ್ರಸ್ಟಿ ಪ್ರದೀಪ್ ಕುಮಾರ್ ಕಲ್ಕೂರ ವಂದಿಸಿದ್ದಾರೆ.







