ಸಮಾಜ ಘಾತುಕರಿಂದ ಸೌಹಾರ್ದತೆಗೆ ಧಕ್ಕೆ: ಲಾಲಾಜಿ ಮೆಂಡನ್
ಕಾಪು, ಜು.1: ಇತ್ತೀಚಿನ ದಿನಗಳಲ್ಲಿ ಪರಸ್ಪರ ತಪ್ಪು ಅಭಿಪ್ರಾಯದಿಂದ ಕ್ಷುಲ್ಲಕ ಕಾರಣಗಳಿಗಾಗಿ ಸಮಾಜದಲ್ಲಿ ಸೌಹಾರ್ದತೆಗೆ ಭಂಗ ತರಲಾಗುತ್ತಿದೆ. ಇದನ್ನು ಎಸಗುವವರು ಸಮಾಜ ಘಾತುಕರು. ಅವರ ಬಗ್ಗೆ ನಾಗರಿಕರು ಎಚ್ಚರ ದಿಂದ ಇರಬೇಕೆಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ವತಿಯಿಂದ ಕಾಪು ಪುರಸಭೆಯವರಿಗೆ ಇತ್ತೀಚೆಗೆ ಆಯೋಜಿಸಲಾದ ಈದ್ ಸೌಹಾರ್ದ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಸದ್ಭಾವನಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಮಾತನಾಡಿ, ಹಿಂದೆ ಯಾವುದೇ ಹಬ್ಬಗಳು ಬಂದರೂ ಎಲ್ಲ ಧರ್ಮದವರು ಸಂಭ್ರಮ ಪಡುತ್ತಿದ್ದರು. ಮನುಷ್ಯನಿಗೆ ಗೌರವ ನೀಡುತ್ತ ಅನ್ಯಾಯ ಎಸಗಬಾರದು ಎಂದು ಎಲ್ಲ ಧರ್ಮಗಳು ಬೋಧಿಸುತ್ತವೆ. ಅದರಂತೆ ನಾವು ಜೀವನ ನಡೆಸಬೇಕು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ವಿಪಕ್ಷ ನಾಯಕ ಅರುಣ್ ಶೆಟ್ಟಿ, ಮುಖ್ಯಾಧಿಕಾರಿ ರಾಯಪ್ಪ ಶುಭಹಾರೈಸಿದರು. ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಾಂತಲಾ ಶೆಟ್ಟಿ, ಜಮಿಯ್ಯತುಲ್ ಫಲಾಹ್ ಅಧ್ಯಕ್ಷ ಶಭಿ ಕಾಝಿ, ಉದ್ಯಮಿ ಮುಸ್ತಾಕ್ ಇಬ್ರಾಹಿಂ ಉಪಸ್ಥಿತರಿದ್ದರು.
ಮೌಲಾನಾ ದಾನಿಶ್ ರಝಾ ಕುರಾನ್ ಪಠಿಸಿದರು. ಕಾಪು ವರ್ತುಲದ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಮುಹಮ್ಮದ್ ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.