ನವಯುಗ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು
ರಾ.ಹೆ. ಅಧಿಕಾರಿಗಳಿಗೆ ಸಂಸದೆ ಶೋಭಾ ಸೂಚನೆ

ಉಡುಪಿ, ಜು.2: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯಲ್ಲಿ ವಿಳಂಬ ಮಾಡುತ್ತಿರುವ ನವಯುಗ ಗುತ್ತಿಗೆ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸರಕಾರದ ಸಂಬಳ ಪಡೆಯುವ ಅಧಿಕಾರಿಗಳು ಖಾಸಗಿ ಕಂಪೆನಿಯಾಗಿರುವ ನವಯುಗ ಪರವಾಗಿ ನಿಲ್ಲದೆ, ಅದನ್ನು ಕಪ್ಪು ಪಟ್ಟಿಗೆ ಸೇರಿಸುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನವಯುಗ ಕಂಪೆನಿ ಕಾಮಗಾರಿ ಪೂರ್ಣಗೊಳಿಸುವ ಬದಲು ಗಡುವನ್ನು ವಿಸ್ತರಣೆ ಮಾಡಿಕೊಂಡು ಹೋಗುತ್ತಿದೆ. ಈ ಸಂಬಂಧ ಯಾವುದೇ ಸಮಸ್ಯೆಗಳಿದ್ದರೆ ನನ್ನ ಜೊತೆ ದೆಹಲಿಗೆ ಬಂದರೆ ಸಹಾಯ ಮಾಡಲಾಗುವುದು ಎಂದು ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ತಿಳಿಸಿದರು.
ನವಯುಗ ಕಂಪೆನಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಉಚ್ಚಿಲ ಮತ್ತು ಉದ್ಯಾವರಕ್ಕೆ ಸರ್ವಿಸ್ ರಸ್ತೆ ಮಂಜೂರು ಆಗಿದ್ದು, ಪಡುಬಿದ್ರೆ ಮತ್ತು ಕರಾವಳಿ ಬೈಪಾಸ್ ಕಾಮಗಾರಿಯು ಈ ವರ್ಷದ ಡಿಸೆಂಬರ್ ಹಾಗೂ ಕುಂದಾಪುರ ಮೇಲ್ಸೇತುವೆ ಕಾಮಗಾರಿಯು ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
1694 ಮನೆಗಳಿಗೆ ವಿದ್ಯುತ್:
ಜಿಲ್ಲೆಯಲ್ಲಿ ಸರ್ವೆ ನಡೆಸಿ 2926 ವಿದ್ಯುತ್ ಇಲ್ಲದ ಮನೆಗಳನ್ನು ಗುರುತಿಸಲಾಗಿದೆ. ಅದರಲ್ಲಿ 1694 ಮನೆಗಳಿಗೆ 7.15ಕೋಟಿ ರೂ. ವೆಚ್ಚದಲ್ಲಿ ದೀನ್ ದಯಾಳ್ ವಿದ್ಯುದೀಕರಣ ಯೋಜನೆಯಡಿ ವಿದ್ಯುತ್ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ 180 ಕೋಟಿ ರೂ. ವೆಚ್ಚದಲ್ಲಿ 16 ಸಿಆರ್ಎಫ್ ರಸ್ತೆಗಳ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ 13 ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ. ಕಾರ್ಕಳದ ಎರಡು ರಸ್ತೆಗಳ ಕಾಮಗಾರಿಯನ್ನು ಮಳೆಗಾಲ ಮುಗಿದ ಬಳಿಕ ಆರಂಭಿಸಲಾಗುವುದು ಎಂದು ಸಂಬಂಧಪಟ್ಟ ಇಲಾಖಾ ಧಿಕಾರಿ ತಿಳಿಸಿದರು. ಕಾಮಗಾರಿ ಪೂರ್ಣಗೊಂಡ ಬಳಿಕ ಸಿಆರ್ಎಫ್ ರಸ್ತೆ ಎಂಬುದಾಗಿ ಫಲಕ ಹಾಕಿ, ಉದ್ಘಾಟನೆ ಮಾಡಲು ನನಗೆ ಮಾಹಿತಿ ನೀಡಬೇಕು ಎಂದು ಸಂಸದೆ ಹೇಳಿದರು.
ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ನಗರ ಪ್ರದೇಶಕ್ಕೆ ಒಟ್ಟು 384 ಮನೆಗಳು ಮಂಜೂರಾಗಿದ್ದು, ಆಶ್ರಯ ಸಮಿತಿ ಸಭೆಯಲ್ಲಿ ನಿವೇಶನ ಹೊಂದಿದ 184 ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆ ಕಾಮಗಾರಿ ನಡೆಸಲಾಗುತ್ತಿದೆ. ಉಳಿದ ಫಲಾನುಭವಿಗಳನ್ನು ಒಂದು ತಿಂಗಳೊಳಗೆ ಆಯ್ಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕಿ ನಯನಾ ಮಾತನಾಡಿ, ಗ್ರಾಮೀಣ ಪ್ರದೇಶ ದಲ್ಲಿ 2016-17ನೆ ಸಾಲಿನಲ್ಲಿ 103 ಮನೆಗಳ ಗುರಿ ಹೊಂದಿದ್ದು, ಇದರಲ್ಲಿ 50 ಪೂರ್ಣಗೊಂಡಿದ್ದು, 38 ಪ್ರಗತಿಯಲ್ಲಿದೆ. 2017-18ರಲ್ಲಿ 30 ಗುರಿಯಲ್ಲಿ 21 ಪೂರ್ಣಗೊಂಡಿದ್ದು, 3 ಪ್ರಗತಿಯಲ್ಲಿದೆ ಎಂದರು.
ಖಾತೆಗೆ ಹಣ ಜಮೆ:
ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಅಂಗನವಾಡಿ ಕೇಂದ್ರಗಳಿಗೆ ಬರಲು ತೊಂದರೆಯಾಗುವುದರಿಂದ ಮಕ್ಕಳೊಂದಿಗೆ ಬಾಕ್ಸ್ಗಳಲ್ಲಿ ಊಟ ಕಳುಹಿಸಲಾಗುತ್ತಿದೆ. ಈಗ ಉಡುಪಿ ಜಿಲ್ಲೆಯಲ್ಲಿ ಕುಚ್ಚಲಕ್ಕಿಯನ್ನು ನೀಡಲಾಗುತ್ತಿದೆ. ಕೇಂದ್ರ ಮಾತೃ ವಂದನಾ ಯೋಜನೆಯಡಿ ಅರ್ಜಿ ಹಾಕಿದ 22,456 ಮಂದಿಯ ಬ್ಯಾಂಕ್ ಖಾತೆಗೆ ತಲಾ 5000 ರೂ. ಹಣ ಪಾವತಿ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲಿಸ್ ತಿಳಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮಾತೃಪೂರ್ಣ ಯೋಜನೆಯಲ್ಲಿ ಗರ್ಭಿಣಿಯರು ಅಂಗನವಾಡಿ ಕೇಂದ್ರಕ್ಕೆ ತೆರಳಿ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆಗಳಲ್ಲಿ ರಿಕ್ಷಾದವರು ಕೂಡ ಹೋಗಲ್ಲ. ಆದುದರಿಂದ ಪ್ರತಿಯೊಬ್ಬ ಗರ್ಭಿಣಿಯರ ಖರ್ಚಿನ ಹಣವನ್ನು ಅವರವರ ಖಾತೆಗಳಿಗೆ ಹಾಕುವ ವ್ಯವಸ್ಥೆ ತಂದರೆ ಅನುಕೂಲವಾಗುತ್ತದೆ. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.
78 ಕೋಟಿ ರೂ. ವೆಚ್ಚದಲ್ಲಿ ಗಂಗೊಳ್ಳಿ ಬಂದರು ಕಾಮಗಾರಿ ಪೂರ್ಣಗೊಳಿಸಿದ್ದು, ಕೇಂದ್ರದಿಂದ ಹಣ ಬರಲು ಬಾಕಿ ಇದೆ. ಅದೇ ರೀತಿ 138.6 ಕೋಟಿ ರೂ. ವೆಚ್ಚದಲ್ಲಿ ಹೆಜಮಾಡಿ ಬಂದರು ಕಾಮಗಾರಿಗೆ ಸಂಬಂಧಿಸಿ ಪ್ರೊಜೆಕ್ಟ್ ಕ್ಲೀಯರ್ ಆಗಿದ್ದು, ಇನ್ನು ಎಂಒಯು ತಯಾರಿಸಿ ಕೇಂದ್ರಕ್ಕೆ ಕಳುಹಿಸ ಬೇಕಾಗಿದೆ ಎಂದು ಬಂದರು ಇಲಾಖೆಯ ಇಂಜಿನಿಯರ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಅಧ್ಯಕ್ಷ ದಿನಕರ ಬಾಬು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮೊದಲಾದವರು ಹಾಜರಿದ್ದರು.
28 ಟವರ್ಗಳು ತ್ರೀಜಿ ಆಗಿ ಮೇಲ್ದರ್ಜೆಗೆ
ಉಡುಪಿ ಜಿಲ್ಲೆಯಲ್ಲಿ 165 ತ್ರೀಜಿ ಹಾಗೂ 215 ಟೂಜಿ ಬಿಎಸ್ಎನ್ಎಲ್ ಟವರ್ಗಳಿದ್ದು, ಈಗಿರುವ ಟೂಜಿ ಟವರ್ಗಳಲ್ಲಿ 28 ಟವರ್ಗಳನ್ನು ತ್ರೀಜಿ ಆಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾಜಕ ಕ್ಷೇತ್ರ ಹಾಗೂ ಅತ್ತೂರು ಚರ್ಚ್ ಪ್ರದೇಶಕ್ಕೆ ಹೊಸ ಎರಡು ಟವರ್ ಮಂಜೂರಾಗಿದೆ. ರಟ್ಟಾಡಿ ಹಾಗೂ ತೊಂಬಟ್ಟುವಿನಲ್ಲಿ ಹೊಸ ಟವರ್ಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಹೆಚ್ಚಿನ ಕಡೆಗಳಲ್ಲಿ ಸರ್ವರ್ ಸಮಸ್ಯೆಯ ಬಗ್ಗೆ ತಾಪಂ ಅಧ್ಯಕ್ಷ ನಳಿನಿ ಪ್ರದೀಪ್ ರಾವ್ ಸಭೆಯಲ್ಲಿ ದೂರಿದರು. ಸ್ಥಿರ ದೂರವಾಣಿ ಸರಿಯಾಗಿ ಕಾರ್ಯನಿರ್ವ ಹಿಸದ ಬಗ್ಗೆ ಹಲವು ದೂರುಗಳು ಬರುತ್ತಿರುವುದಾಗಿ ಸಂಸದೆ ಕರಂದ್ಲಾಜೆ ತಿಳಿಸಿದರು. ಇವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದರು.
11.33 ಕೋಟಿ ವೆಚ್ಚದಲ್ಲಿ ಇಂದ್ರಾಳಿ ನೂತನ ರೈಲ್ವೆ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, 2019ರ ಮಾರ್ಚ್ಗೆ ಪೂರ್ಣಗೊಳ್ಳಲಿದೆ. ಎರಡು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮಕೃಷ್ಣ ಹೆಗಡೆ ತರಬೇತಿ ಕೇಂದ್ರದ ಕಾಮಗಾರಿಯು ಈ ವರ್ಷ ನವೆಂಬರ್ ತಿಂಗಳಲ್ಲಿ ಮುಗಿಯಲಿದೆ. 317 ಕೋಟಿ ವೆಚ್ಚದಲ್ಲಿ ವೆರ್ಣಾ ತೋಕೂರು ರೈಲ್ಚೆ ಮಾರ್ಗ ವಿದ್ಯುದೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಇಲಾಖೆಯ ಕಟ್ಟಡ ವಿಸ್ತರಣೆಗೆ 4 ಕೋಟಿ ರೂ. ಅಗತ್ಯ ವಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ಸಭೆಗೆ ತಿಳಿಸಿದರು.