ಸಂಗಬೆಟ್ಟು ಗ್ರಾಮ ಸಭೆ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿಗೆ ಆಗ್ರಹ

ಬಂಟ್ವಾಳ, ಜು.2: ಸಂಗಬೆಟ್ಟು ಗ್ರಾಪಂ ವ್ಯಾಪ್ತಿಯ ಸಿದ್ದಕಟ್ಟೆ ಪ್ರದೆಶವು ಬೆಳೆಯುತ್ತಿರುವ ನಗರವಾಗಿದ್ದು, ಸುತ್ತಮುತ್ತಲಿನ ಐದಾರು ಗ್ರಾಮಗಳ ಜನರಿಗೆ ಸಂಪರ್ಕ ಪ್ರದೇಶವಾಗಿದೆ. ಈ ನಿಟ್ಟಿನಲ್ಲಿ ಹಲವಾರು ಗ್ರಾಮ ಸಭೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಂಜೂರಾತಿಗೆ ನಿರ್ಣಯ ಕೈಗೊಂಡರೂ, ಇದುವೆರಗೂ ಮಂಜೂರಾತಿ ಆಗದಿರುವುದು ಜನಪ್ರತಿನಿಧಿಗಳ ನಿರುತ್ಸಾಹಕ್ಕೆ ಕಾರಣವಾಗಿದೆ. ಆದ್ದರಿಂದ ವೈದ್ಯಾಧಿಕಾರಿಗಳೆ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೋಮವಾರ ನಡೆದ ಗ್ರಾಮ ಸಭೆಯಲ್ಲಿ ಆಗ್ರಹಿಸಲಾಯಿತು. ಇದಕ್ಕೆ ಗ್ರಾಮಸ್ಥರು ಧ್ವನಿಗೂಡಿಸಿದರು.
ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಮಾತನಾಡಿ, ಜನಸಂಖ್ಯೆಯ ಅಧಾರದ ಮೇಲೆ ಮತ್ತು ಈಗಾಗಲೇ ಹತ್ತಿರದಲ್ಲೆೀ ರಾಯಿಯಲ್ಲಿರುವುದರಿಂದ ಮಂಜೂರಾತಿಗೆ ಅವಕಾಶ ಕಡಿಮೆ, ಮುಂದಿನದ್ದು ಶಾಸಕರಿಗೆ ಮತ್ತು ಸರಕಾರಕ್ಕೆ ಬಿಟ್ಟ ವಿಚಾರ ಎಂದರು.
ಮತ್ತೊಮ್ಮೆ ಮಂಜೂರಾತಿಗೆ ನೂತನ ಶಾಸಕರಿಗೆ ಹಾಗೂ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಲಾಯಿತು.
ಆಧಾರ್ಕಾರ್ಡ್ ಕೇಂದ್ರವನ್ನು ಸಿದ್ದಕಟ್ಟೆ ಪಂಚಾಯತ್ನಲ್ಲಿ ಪ್ರಾರಂಭಿಸಬೇಕು. ಲೋಕೋಪಯೋಗಿ ರಸ್ತೆ ಬದಿ ಚರಂಡಿ ಕಾಮಗಾರಿ, ಮೆಸ್ಕಾಂ ಸಮಸ್ಯೆ ಪರಿಹರಿಸುವ ಒತ್ತಾಯ, ಗಾಡಿ ಪಲ್ಕೆ ಹಿಂದೂ ರುದ್ರಭೂಮಿ ಅಭಿವೃದ್ಧಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣ ಕಾರ್ಯಗತ ಮಾಡಲು ಅಧಿಕಾರಿಗಳಿಗೆ ಒತ್ತಡ, ಪುಚ್ಚಮೊಗರು ಸೇತುವೆ ಗುಣಮಟ್ಟ ಪರಿಶೀಲನೆ ಮಾಡಲು ಸೂಚನೆ ನೀಡಬೇಕು ಮುಂತಾದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದರು.
ತಾಪಂ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ಪ್ರತಿ ಗ್ರಾಮ ಸಭೆ ಯಶಸ್ವಿಯಾಗಬೇಕಾದರೆ ಜನರ ಸಂಪೂರ್ಣ ಸಹಭಾಗಿತ್ವದೊಂದಿಗೆ ಗ್ರಾಮಾಭಿವೃದ್ಧಿಯ ಬಗ್ಗೆ ಸಲಹೆ ಸೂಚನೆ, ಇಲಾಖಾ ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ತಿಳಿಸಿದರು.
ಸಭೆಯಲ್ಲಿ ಮಾಜಿ ತಾಪಂ ಸದಸ್ಯ ರತ್ನಾಕುಮಾರ್ ಚೌಟ, ಸತೀಶ್ ಪೂಜಾರಿ, ಮುಹಮ್ಮದ್ ಆಲಿ, ರತ್ನಾಕರ ಪೂಜಾರಿ, ಉಮನಾಥ ನಾಯಕ್, ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು
ಗ್ರಾಪಂ ಅಧ್ಯಕ್ಷೆ ಗುಲಾಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿ, ಜಿಪಂ ಇಂಜಿನಿಯರ್ ಕೃಷ್ಣ ಸಭೆಯ ನೇತೃತ್ವ ವಹಿಸಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು. ಗ್ರಾಪಂ ಸದಸ್ಯರಾದ ಮಾದವ ಶೆಟ್ಟಿಗಾರ್, ಉಷಾ, ಪದ್ಮಲತಾ ವಿಮಲ ಮೋಹನ್, ಎಸ್.ಪಿ. ಶ್ರೀಧರ್, ಸುಲೋಚನಾ, ಮಯ್ಯದಿ, ಸುರೇಶ್ ಕುಲಾಲ್, ನಳಿನಿ, ದೇವಪ್ಪ ಕರ್ಕೇರ, ಶಾರದ, ಸುಭಾಷಿಣಿ ಮೊದಲಾದವರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿಲ್ವಿಯಾ ಫರ್ನಾಂಡಿಸ್ ಸ್ವಾಗತಿಸಿ, ಪಂಚಾಯತ್ ಸಿಬ್ಬಂದಿ ಮಹಾಬಲ ನಾಯ್ಕ, ಸುರೇಶ್, ವರದಿ ಮಂಡಿಸಿದರು. ಗ್ರಾಪಂ ಸದಸ್ಯ ಶೇಖರ್ ನಾಯ್ಕ ವಂದಿಸಿದರು.







