ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಧ್ಯಮರಂಗದಿಂದಾಗಲಿ -ನಳಿನ್ ಕುಮಾರ್
ದ.ಕ ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ಮಂಗಳೂರು, ಜು. 2: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಸಮಾಜದ ಜನರನ್ನು ಒಂದುಗೂಡಿಸುವ ,ಸೂಕ್ತ ಮಾರ್ಗದರ್ಶನ ನೀಡುವಂತಾಗಲಿ ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ ಹೋರಾಟಗಾರರದ ಬಾಲ ಗಾಂಗಾಧರ ತಿಲಕ್ ಅವರು ಕೇಸರಿ ಪತ್ರಿಕೆ, ಮಹಾತ್ಮ ಗಾಂಧೀಜಿ ಹರಿಜನ ಪತ್ರಿಕೆಯ ಮೂಲಕ ಜನಜಾಗೃತಿಗೆ ಒತ್ತು ನೀಡಿದ್ದರು. ಸ್ವಾತಂತ್ರ್ಯ ಪೂರ್ವದಿಂದಲೂ ಮಾಧ್ಯಮಗಳು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶದ ಜನಕ್ಕೆ ಅನ್ಯಾಯವಾದಾಗಲೆಲ್ಲಾ ಪತ್ರಿಕೆಗಳು ಧ್ವನಿಯೆತ್ತಿವೆ. ಜನತೆಯನ್ನು ಹೋರಾಟದ ಹಾದಿಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರೇರೇಪಿಸಿವೆ. ದೇಶ ಸ್ವಾತಂತ್ರ್ಯ ಕಂಡ ಬಳಿಕವೂ ಮಾಧ್ಯಮಗಳು ಸರಿ -ತಪ್ಪುಗಳ ಬಗ್ಗೆ ತಿಳಿಸುತ್ತಾ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿದೆ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.
ಪ್ರಸಕ್ತ ಪತ್ರಿಕಾ ಮಾಧ್ಯಮದ ಜೊತೆ ಮತ್ತು ನವ ಮಾಧ್ಯಮಗಳಲ್ಲಿ ದೃಶ್ಯ ಮಾಧ್ಯಮಗಳು ಸೇರ್ಪಡೆಗೊಂಡಿವೆ. ಟಿಆರ್ಪಿ ಹಿಂದೆ ಓಡುವ ದೃಶ್ಯ ಮಾಧ್ಯಮಗಳು ಕೆಲವೊಮ್ಮೆ ಮಾಧ್ಯಮದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಆದರೆ ಮುದ್ರಣ ಮಾಧ್ಯಮಗಳು ಮಾತ್ರ ಇಂದಿಗೂ ಜನತೆಯ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ಮಾಧ್ಯಮಗಳ ಮೂಲ ಆಶಯವನ್ನು ಉಳಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ ಎಂದು ನಳಿನ್ ಕುಮಾರ್ ಹೇಳಿದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರು ‘ಸಮಾಜ ಮತ್ತು ಮಾಧ್ಯಮದ ಜವಾಬ್ದಾರಿಗಳು’ ವಿಷಯದ ಕುರಿತಂತೆ ಮಾತನಾಡುತ್ತಾ , ಜಗತ್ತಿನಲ್ಲಿ ಹಲವಾರು ಭೃಷ್ಟಾಚಾರ ಪ್ರಕರಣಗಳನ್ನು ಪತ್ರಿಕೆಗಳು ಬಯಲು ಮಾಡಿದೆ. ಅತೀ ರಂಜಿತ, ವೈಭವೀಕೃತ ಸುದ್ದಿಗಳಿಗೆ ಮಹತ್ವ ನೀಡದೆ. ಸಮಾಜದ ಅಭಿವೃದ್ಧಿಯ ವೇಗ ವರ್ಧಕಗಳಾಗಿ ಪತ್ರಿಕೆಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಇದೆ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅವರು ರಚಿಸಿರುವ 48 ವರ್ಷಗಳ ತುಳು ಸಿನಿಮಾ ರಂಗದ ಕುರಿತಾದ ‘ಸಿನಿಮಾವಲೋಕನ’ ಕೃತಿಯನ್ನು ಸಂಸದರಿಗೆ ಹಸ್ತಾಂತರಿಸಿದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಅತಿಥಿಗಳಾಗಿ ಭಾಗವಹಿಸಿದ್ದರು.ಸಂಘದ ಪ್ರಧಾನಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು. ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.







