ಆಕ್ಯುಪೆನ್ಸಿ ಸರ್ಟಿಫಿಕೇಟ್ ಇಲ್ಲದ ಲೈವ್ ಬ್ಯಾಂಡ್ಗಳಿಗೆ ಹೈಕೋರ್ಟ್ ತಡೆ

ಬೆಂಗಳೂರು, ಜು.2: ಕರ್ನಾಟದಲ್ಲಿನ ಲೈವ್ ಬ್ಯಾಂಡ್ಗಳು ಆಕ್ಯುಪೆನ್ಸಿ ಸರ್ಟಿಫಿಕೇಟ್(ಅಧಿಭೋಗ ಪ್ರಮಾಣಪತ್ರ) ಹೊಂದಿರುವುದು ಕಡ್ಡಾಯ, ಅದಿಲ್ಲದೆ ಇರುವ ಲೈವ್ ಬ್ಯಾಂಡ್ ಗಳ ಕಾರ್ಯಾಚರಣೆ ನಿಲ್ಲಿಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ.
ಲೈವ್ ಬ್ಯಾಂಡ್ ನಡೆಸಲು ಆಕ್ಯುಪೆನ್ಸಿ ಸರ್ಟಿಫಿಕೇಟ್ ಕಡ್ಡಾಯವೆಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ನೀಡಿದ್ದ ನೋಟಿಸ್ ಪ್ರಶ್ನಿಸಿ ರೆಸಿಡೆನ್ಸಿ ರಸ್ತೆಯಲ್ಲಿರುವ ನರ್ತಕಿ ಬಾರ್ ಅಂಡ್ ರೆಸ್ಟೋರೆಂಟ್, ಕೆ.ಜಿ ರಸ್ತೆಯ ಕೋಸ್ಟಾರಿಕಾ ಬಾರ್ ಅಂಡ್ ರೆಸ್ಟೋರೆಂಟ್, ಟೌನ್ಹಾಲ್ ಸಮೀಪವಿರುವ ಲವರ್ ನೈಟ್ ಪಬ್ಸ್ ಪ್ರತಿನಿಧಿ ಪಿ.ಆರ್.ನರೇಂದ್ರ ಬಾಬು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ನ್ಯಾಯಪೀಠ, ಲೈವ್ ಬ್ಯಾಂಡ್ ನಡೆಸಲು ಆಕ್ಯುಪೆನ್ಸಿ ಸರ್ಟಿಫಿಕೇಟ್ ಕಡ್ಡಾಯವೆಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಸರ್ಟಿಫಿಕೇಟ್ ಹೊಂದಿದ ಲೈವ್ ಬ್ಯಾಂಡ್ಗಳ ಕಾರ್ಯಾಚರಣೆಗೆ ಸಮ್ಮತಿ ಸೂಚಿಸಿದೆ.
ಕಟ್ಟಡದ ಪ್ರತಿ ಅಂತಸ್ತಿಗೆ ಸಹ ಪ್ರತ್ಯೇಕ ಪ್ರಮಾಣಪತ್ರ ಅಗತ್ಯವಿದೆ ಎಂದಿರುವ ಕೋರ್ಟ್ ಸರ್ಟಿಫಿಕೇಟ್ ಪಡೆಯುವುದಕ್ಕಾಗಿ ಸಮಯಾವಕಾಶ ನಿಗದಿಪಡಿಸುವಂತೆ ಹೇಳಿದೆ. ಇದೇ ವೇಳೆ 1977 ಹಾಗೂ ಅದಕ್ಕೆ ಮುಂಚಿನ ಕಟ್ಟಡಗಳಿಗೆ ಸರ್ಟಿಫಿಕೇಟ್ ನಿಡುವುದು ಆಯಾ ಇಲಾಖೆಗೆ ಬಿಟ್ಟ ವಿಷಯವೆಂದು ನ್ಯಾಯಾಲಯ ತಿಳಿಸಿದೆ.





