ವೆನ್ಲಾಕ್ ಆಸ್ಪತ್ರೆಯಿಂದ ಹೊರದಬ್ಬಿದರು: ರೋಗಿಯ ಆರೋಪ
ಹೊರದಬ್ಬಲಿಲ್ಲ-ನಿಯಮ ಪಾಲಿಸಲು ಸೂಚಿಸಿದ್ದೇವೆ: ಡಿಎಂಒ

ಮಂಗಳೂರು, ಜು.3: ಇಬ್ಬರು ಪುಟ್ಟ ಮಕ್ಕಳು, ಹೆಂಡತಿ ಹಾಗೂ ತಾಯಿ ತನ್ನೊಂದಿಗಿರುತ್ತಾರೆ ಎಂಬ ಏಕೈಕ ಕಾರಣಕ್ಕೆ ತನ್ನನ್ನು ಅಮಾನವೀಯವಾಗಿ ಹೊರಗೆ ದಬ್ಬಲಾಗಿದೆ ಎಂದು ಕಳೆದ ನಾಲ್ಕು ದಿನದಿಂದ ವೆನ್ಲಾಕ್ ಆಸ್ಪತ್ರೆಯಿಂದ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರು ಸಮೀಪದ ಪೆರ್ಲಂಪಾಡಿಯ ರಾಜ್ಕುಮಾರ್ ಆರೋಪಿಸಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ತಾನು ಜೆಸಿಬಿ ಆಪರೇಟರ್ ಆಗಿ ಬೈಕಂಪಾಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಜೂ. 28ರ ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಆ್ಯಂಬುಲೆನ್ಸ್ನಲ್ಲಿ ಕರೆತಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನನ್ನೊಂದಿಗೆ ಒಂದುವರೆ ವರ್ಷ ಪ್ರಾಯದ ಹೆಣ್ಮಗು, 5 ವರ್ಷದ ಗಂಡು ಮಗು ಇದ್ದಾರೆ. ಹಗಲಲ್ಲಿ ಹೆಂಡತಿ ಕೆಲಸಕ್ಕೆ ಹೋದರೆ ರಾತ್ರಿ ಬರುತ್ತಾರೆ. ಆವಾಗ ನನ್ನ ತಾಯಿ ಹಾಗೂ ಇಬ್ಬರು ಮಕ್ಕಳು ನನ್ನೊಂದಿಗೆ ಇರುತ್ತಾರೆ. ರಾತ್ರಿ ಹೆಂಡತಿ ಬರುವಾಗ ಮಕ್ಕಳು ಮತ್ತು ತಾಯಿ ಸಮೀಪದ ಛತ್ರದಲ್ಲಿ ಆಶ್ರಯ ಪಡೆಯುತ್ತಾರೆ. ಇದನ್ನೇ ನೆಪವಾಗಿಟ್ಟುಕೊಂಡು ಕನಿಷ್ಠ ನನ್ನನ್ನು ಡಿಸ್ಜಾರ್ಜ್ ಕೂಡಾ ಮಾಡದೆ ಇಂದು ಕೈಗೆ ಚುಚ್ಚಿದ ಸಿರಿಂಜ್ ಸಮೇತ ಅಮಾನವೀಯವಾಗಿ ಹೊರದಬ್ಬಿದ್ದಾರೆ’ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಎಂಒ ಡಾ. ರಾಜೇಶ್ವರಿ ದೇವಿ, ಒಬ್ಬ ರೋಗಿಯನ್ನು ಉಪಚರಿಸಲು ಒಂದು ಪಾಸ್ ನೀಡುತ್ತೇವೆ. ಪುರುಷ ಇರುವಲ್ಲಿ ಪುರುಷರಿಗೆ ಮತ್ತು ಮಹಿಳೆ ಇರುವಲ್ಲಿ ಮಹಿಳೆಯರು ಮಾತ್ರ ಇರಲು ಅವಕಾಶವಿದೆ. ಇದು ಆಸ್ಪತ್ರೆಯ ನಿಯಮ. ಇದನ್ನು ಪಾಲಿಸುವುದು ರೋಗಿಯ ಕರ್ತವ್ಯವಾಗಿದೆ. ಪೆರ್ಲಂಪಾಡಿಯ ರಾಜ್ಕುಮಾರ್ರ ಕುಟುಂಬ ಜೂ. 28ರಿಂದ ವೆನ್ಲಾಕ್ನಲ್ಲೇ ಇದ್ದಾರೆ. ಇದು ನಿಯಮಕ್ಕೆ ವಿರುದ್ಧವಾಗಿದೆ. ಅಲ್ಲದೆ, ಪುರುಷ ವಾರ್ಡ್ನಲ್ಲಿ ಮಹಿಳೆಯರು ರಾತ್ರಿ ತಂಗಲು ಅವಕಾಶವಿಲ್ಲ. ಈ ನಿಯಮವನ್ನು ಪಾಲಿಸುವಂತೆ ಸೂಚಿಸಿದ್ದಕ್ಕೆ ಸ್ವತಃ ಅವರೇ ಹೊರಗೆ ಹೋಗಿ ವೆನ್ಲಾಕ್ ಆಸ್ಪತ್ರೆಯ ವಿರುದ್ಧ ಆರೋಪಿಸುತ್ತಿದ್ದಾರೆ. ಈ ಆರೋಪದಲ್ಲಿ ಹುರುಳಿಲ್ಲ ಮತ್ತು ನಾವು ರೋಗಿಯನ್ನು ಹೊರದಬ್ಬಲೂ ಇಲ್ಲ ಎಂದಿದ್ದಾರೆ.