ಕಾವಳಮೂಡೂರು ಗ್ರಾಮದ ಕೊಡ್ಯಮಲೆ ರಕ್ಷಿತಾರಣ್ಯದಲ್ಲಿ ಅಕ್ರಮ ಜಲ್ಲಿ ಕ್ರಷರ್: ಆರೋಪ

ಬಂಟ್ವಾಳ, ಜು. 3: ತಾಲೂಕಿನ ಕಾವಳಮೂಡೂರು ಗ್ರಾಮದ ಕೊಡ್ಯಮಲೆ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಜಲ್ಲಿ ಕ್ರಷರ್ ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಸಹಿತ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ಬಂಟ್ವಾಳ ಘಟಕದ ಕಾರ್ಯದರ್ಶಿ ಪದ್ಮನಾಭ ಮಯ್ಯ ಆರೋಪಿಸಿದ್ದಾರೆ.
ಮಂಗಳವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ 2008ರಿಂದ ಕೊಡ್ಯಮಲೆ ರಕ್ಷಿತಾರಣ್ಯದ ಸರ್ವೇ ಸಂಖ್ಯೆ 164/2 ಹಾಗೂ 172/2ಪಿ1ರಲ್ಲಿ ಅಕ್ರಮವಾಗಿ ಜಲ್ಲಿ ಕ್ರಷರ್ ನಡೆಯುತ್ತಿದೆ. ಇದರಿಂದ ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಹಿತ ಸುತ್ತಮುತ್ತಲಿನ ಪರಸರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಅವರು ಕ್ರಷರ್ ಉದ್ಯಮದವರೊಂದಿಗೆ ಶಾಮಿಲಾಗಿರುವುದಾಗಿ ಅವರು ಆರೋಪಿಸಿದರು.
ಈ ಬಗ್ಗೆ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ನ್ಯಾಯಲಯದ ಆದೇಶದಂತೆ ಮಂಗಳವಾರ ಅಧಿಕಾರಿಗಳು ತೆರಳಿ ಬೀಗ ಹಾಕಿದ್ದಾರೆ. 2008ರಿಂದ ಸುಮಾರು 400 ಕೋಟಿ ರೂ. ಈ ಹಗರಣದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದು, ಅವರಿಗೂ ಶಿಕ್ಷೆ ಆಗಬೇಕೆಂದು ಅವರು ಆಗ್ರಹಿಸಿದರು.