ಉಡುಪಿ ಶ್ರೀಕೃಷ್ಣ ಮಠದೊಳಗೆ ಹೊಗೆಯಾಡುತ್ತಿದೆ ಇನ್ನೊಂದು ವಿವಾದ
ಶಿರೂರು ಮಠದ ಪಟ್ಟದ ದೇವರಿಗಾಗಿ ಹಗ್ಗ-ಜಗ್ಗಾಟ

ಶಿರೂರು ಮಠದ ಪಟ್ಟದ ದೇವರ ಮೂರ್ತಿ
ಉಡುಪಿ, ಜು.3: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇನ್ನೊಂದು ವಿವಾದದ ಕಿಡಿ ಹೊತ್ತಿಕೊಂಡಿದ್ದು, ಸೌಹಾರ್ದಯುತವಾಗಿ ಬಗೆಹರಿಯದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ.
ಈಗ ಶ್ರೀಕೃಷ್ಣ ಮಠದಲ್ಲಿರುವ ಶಿರೂರು ಮಠದ ಪಟ್ಟದ ದೇವರ ಮೂರ್ತಿ (ಅನ್ನ ವಿಠಲ)ಯನ್ನು ಹಸ್ತಾಂತರಿಸಲು ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀ ತಮ್ಮ ಮಠಕ್ಕೆ ಶಿಷ್ಯನನ್ನು (ಕಿರಿಯ ಸ್ವಾಮಿ) ಸ್ವೀಕರಿಸಬೇಕೆಂಬ ಶರ್ತವನ್ನು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀ ನೇತೃತ್ವದಲ್ಲಿ ಉಳಿದ ಮಠಗಳ ಸ್ವಾಮೀಜಿಗಳು ವಿಧಿಸಿದ್ದಾರೆಂಬ ಸುದ್ದಿಯೇ ಈ ವಿವಾದಕ್ಕೆ ಮೂಲ ಕಾರಣ.
ರವಿವಾರ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀ ನೇತೃತ್ವದಲ್ಲಿ ತುರ್ತು ಸಭೆ ನಡೆದಿರುವುದನ್ನು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಒಪ್ಪಿಕೊಂಡರೂ, ಅಲ್ಲಿ ಯಾವುದೇ ತೀರ್ಮಾನವಾಗಿಲ್ಲ. ಅಂದು ಪೇಜಾವರಶ್ರೀ ಅವಸರದಲ್ಲಿದ್ದ ಕಾರಣ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. 3-4ದಿನಗಳಲ್ಲಿ ಪೇಜಾವರ ಶ್ರೀ ಹಿರಿತನದಲ್ಲಿ ಮತ್ತೊಮ್ಮೆ ಸಭೆ ಸೇರಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದವರು ಸಂಜೆ ಮಠದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಶಿರೂರು ಮಠದ ಪಟ್ಟದ ದೇವರನ್ನು ಹಿಂದಿರುಗಿಸಲು ಶಿಷ್ಯನನ್ನು ಸ್ವೀಕರಿಸಬೇಕೆಂಬ ಶರ್ತ ವಿಧಿಸಿದ್ದೀರಾ ಎಂದು ಪ್ರಶ್ನಿಸಿದಾಗ, ನಾವು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಗ್ಗೆ ಇನ್ನಷ್ಟೇ ವಿಸ್ತೃತ ಚರ್ಚೆ ನಡೆಯಬೇಕು. ತೀರ್ಮಾನ ತೆಗೆದುಕೊಂಡ ಬಳಿಕವಷ್ಟೇ ಏನನ್ನೂ ತಿಳಿಸಬಹುದು ಎಂದರು.
ಶಿರೂರು ಮಠದ ಪಟ್ಟದ ದೇವರು ಹೆಚ್ಚಾಗಿ ಶ್ರೀಕೃಷ್ಣ ಮಠದಲ್ಲೇ ಇರುತ್ತದೆ. ಹೆಚ್ಚಾಗಿ ಎಲ್ಲಾ ಮಠಗಳ ಪಟ್ಟದ ದೇವರು ಆಯಾ ಸ್ವಾಮೀಜಿಗಳು ಉಡುಪಿಯಲ್ಲಿದ್ದಾಗ ಕೃಷ್ಣಮಠದಲ್ಲೇ ಇದ್ದು, ಇಲ್ಲೇ ಅದಕ್ಕೆ ಪೂಜೆ ಮಾಡಲಾಗುತ್ತದೆ. ಮಧ್ವಾಚಾರ್ಯರೇ ಎಂಟು ಮಠಗಳನ್ನು ಸ್ವಾಪಿಸುವಾಗ ತನ್ನ ಶಿಷ್ಯರಿಗೆ ನೀಡಿದ ಪಟ್ಟದ ದೇವರಿಗೆ ಪ್ರತಿದಿನ ಪೂಜೆ ಅಷ್ಟ ಮಠಗಳ ಸ್ವಾಮೀಜಿ ಗಳಿಂದಲೇ ನಡೆಯಬೇಕಿದ್ದು, ಹೆಚ್ಚಾಗಿ ಸ್ವಾಮೀಜಿಗಳು ತಾವು ಪ್ರವಾಸ ಕೈಗೊಳ್ಳುವಾಗ ಪಟ್ಟದ ದೇವರನ್ನು ತಮ್ಮಾಂದಿಗೆ ಕೊಂಡೊಯ್ಯುತ್ತಾರೆ ಎಂದು ಪರ್ಯಾಯ ಸ್ವಾಮೀಜಿ ನುಡಿದರು.
ಆದರೆ ಶಿರೂರು ಶ್ರೀಗಳು ಹೆಚ್ಚಾಗಿ ಪ್ರವಾಸಕ್ಕೆ ಹೋಗದೇ ಉಡುಪಿಯಲ್ಲೇ ಇರುವುದರಿಂದ ಪಟ್ಟದ ದೇವರು ಹೆಚ್ಚಾಗಿ ಕೃಷ್ಣ ಮಠದಲ್ಲೇ ಇರುತ್ತದೆ. ಅದಕ್ಕೆ ನಾವೇ ಪ್ರತಿದಿನ ಪೂಜೆ ನೆರವೇರಿಸುತ್ತೇವೆ. ಒಮ್ಮೆ ಶಿರೂರು ರಥೋತ್ಸವಕ್ಕೆ ಪಟ್ಟದ ದೇವರನ್ನು ಕೊಂಡೊಯ್ದು ಮತ್ತೆ ಇಲ್ಲಿಗೆ ತಂದಿದ್ದರು ಎಂದು ಪಲಿಮಾರು ಶ್ರೀಗಳು ನುಡಿದರು.
ಶಿರೂರು ಶ್ರೀ ಹೇಳಿಕೆ
ವಿವಾದಕ್ಕೆ ಸಂಬಂಧಿಸಿದಂತೆ ತನ್ನನ್ನು ಸಂಪರ್ಕಿಸಿದ ವರದಿಗಾರರಿಗೆ ಪ್ರತಿಕ್ರಿಯಿಸಿರುವ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥರು, ಈ ವಿವಾದವನ್ನು ನಮ್ಮೊಳಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರಲ್ಲದೇ, ಇದು ಸಾಧ್ಯವಾಗದಿದ್ದರೆ ಕಾನೂನು ಕ್ರಮಕ್ಕೆ ಮೊರೆ ಹೋಗುವುದಾಗಿ ತಿಳಿಸಿದರು.
ಸ್ವಾಮೀಜಿಗಳ ಸಭೆ: ಕಳೆದ ರವಿವಾರ ಪೇಜಾವರ ಶ್ರೀ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಈಗ ಪ್ರವಾಸದಲ್ಲಿರುವ ಕಾಣಿಯೂರು ಶ್ರೀ ಹಾಗೂ ವಿದೇಶದಲ್ಲಿರುವ ಪುತ್ತಿಗೆ ಶ್ರೀ ಹೊರತು ಪಡಿಸಿ ಉಳಿದೆಲ್ಲಾ ಐದು ಮಠಗಳ ಸ್ವಾಮೀಜಿ ಭಾಗವಹಿಸಿದ್ದರು. ಸಭೆಯಲ್ಲಿ ತನ್ನ ಮಠದ ಪಟ್ಟದ ದೇವರನ್ನು ಹಿಂದಿರುಗಿಸುವಂತೆ ಕೇಳಿದ ಶಿರೂರು ಶ್ರೀ ಬೇಡಿಕೆಯ ಕುರಿತು ಚರ್ಚೆ ನಡೆಯಿತೆಂದು ಹೇಳಲಾಗಿದೆ.
ಮಠದ ಮೂಲವೊಂದು ತಿಳಿಸಿರುವಂತೆ ಕೆಲ ಸಮಯದ ಹಿಂದೆ ಶಿರೂರು ಶ್ರೀ ಅನಾರೋಗ್ಯದಿಂದ ಬಳಲುತಿದ್ದಾಗ, ಪಟ್ಟದ ದೇವರಿಗೆ ಪ್ರತಿದಿನ ಪೂಜೆ ಗಾಗಿ ಸಂಪ್ರದಾಯದಂತೆ ಅಷ್ಟಮಠದ ಸ್ವಾಮೀಜಿಗಳಲ್ಲೊಬ್ಬರಾದ ಅದಮಾರು ಶ್ರೀಗಳಿಗೆ ಹಸ್ತಾಂತರಿಸಿದ್ದರು. ಅದಮಾರುಶ್ರೀಗಳು ಅದನ್ನು ಪರ್ಯಾಯ ಪಲಿಮಾರುಶ್ರೀಗಳಿಗೆ ಹಸ್ತಾಂತರಿಸಿದ್ದು, ಅವರು ಶ್ರೀಕೃಷ್ಣ ಮಠದಲ್ಲಿ ಶಿರೂರು ಮಠದ ಪಟ್ಟದ ದೇವರಾದ ಅನ್ನ ವಿಠಲನಿಗೆ ಪ್ರತಿದಿನ ಪೂಜೆ ನೆರವೇರಿಸುತಿದ್ದರು.
ಇತ್ತೀಚೆಗೆ ಶಿರೂರುಶ್ರೀ ಪಟ್ಟದ ದೇವರನ್ನು ಹಿಂದಿರುಗಿಸಲು ಕೇಳಿದಾಗ, ನೀಡಲು ಮೀನಮೇಷ ಎಣಿಸಿದ್ದು, ಇದರಿಂದ ಶಿರೂರುಶ್ರೀ ಕೆರಳಿದ್ದರೆಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ರವಿವಾರ ಪೇಜಾವರ ಶ್ರೀ ನೇತೃತ್ವದಲ್ಲಿ ವಿಷಯದ ಕುರಿತು ಚರ್ಚಿಸಲು ತುರ್ತು ಸಭೆಯನ್ನು ಕರೆಯಲಾಗಿತ್ತು. ಇದೀಗ ಈ ವಾರದಲ್ಲಿ ಪೇಜಾವರಶ್ರೀ ನೇತೃತ್ವದಲ್ಲಿ ಇನ್ನೊಮ್ಮೆ ನಡೆಯುವ ಸಭೆಯತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಅಷ್ಟಮಠಗಳ ಪೈಕಿ ಉಳಿದ ಸ್ವಾಮೀಜಿಗಳ ಬಹುಮತದ ತೀರ್ಮಾನವನ್ನು ಶಿರೂರು ಶ್ರೀಗಳು ಒಪ್ಪಿಕೊಳ್ಳುವರೇ, ಅಥವಾ ತನ್ನ ಪಟ್ಟದ ದೇವರ ಸ್ವಾಧೀನಕ್ಕಾಗಿ ನ್ಯಾಯಾಲಯದ ಮೆಟ್ಟಲು ಹತ್ತುವರೇ ಎಂಬುದನ್ನು ಕಾದುನೋಡಬೇಕಾಗಿದೆ.
ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿ ವಿವಾದಕ್ಕೆ ತುತ್ತಾದ ಶಿರೂರು ಶ್ರೀ, ಅದಕ್ಕಿಂತ ಮುನ್ನ ಅಷ್ಟಮಠಗಳ ಸ್ವಾಮೀಜಿಗಳ ವೈಯಕ್ತಿಕ ಬದುಕಿನ ಕುರಿತು ನೀಡಿದ ಹೇಳಿಕೆಯೂ ಉಳಿದ ಸ್ವಾಮೀಜಿಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗಿತ್ತು. ಈ ವಿವಾದಗಳು ಇನ್ನೂ ಪೂರ್ಣವಾಗಿ ಬಗೆಹರಿಯುವ ಮೊದಲೇ ಇದೀಗ ಇನ್ನೊಂದು ವಿವಾದದ ಕಿಡಿ ಹತ್ತಿಕೊಂಡಿದೆ.