ಪುಚ್ಚಮೊಗರು : ಬಾಣಂತಿ ಮಹಿಳೆ ಆತ್ಮಹತ್ಯೆ
ಮೂಡುಬಿದಿರೆ, ಜು. 3: ಬಾಣಂತಿ ಮಹಿಳೆಯೋರ್ವರು ತನ್ನ ತವರು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಚ್ಚ ಮೊಗರಿನ ಶಾಂತಿರಾಜ್ ಕಾಲನಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಉಜಿರೆ ಕುವೆತ್ತರ್ ರಂಜಿತ್ ಅವರ ಪತ್ನಿ ದಿವ್ಯಾ(24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಗೆ ಮೂರು ತಿಂಗಳ ಹೆಣ್ಣು ಮಗುವಿದ್ದು ಬಾಣಂತಿ ಹಿನ್ನೆಲೆಯಲ್ಲಿ ಇವರು ಪುಚ್ಚೆಮೊಗರಿನ ಶಾಂತಿರಾಜ ಕಾಲನಿಯಲ್ಲಿ ತನ್ನ ತಾಯಿ ಜತೆ ವಾಸವಾಗಿದ್ದರು. ಮಗುವಿಗೆ ಹಾಲುಣಿಸಲು ಈಕೆಯಲ್ಲಿ ಎದೆ ಹಾಲಿನ ಕೊರತೆ ಇದ್ದುದರಿಂದ ಈ ಬಗ್ಗೆ ಆಗಾಗ್ಗೆ ತನ್ನ ತಾಯಿ ಜತೆ ಹೇಳಿ ಬೇಸರ ವ್ಯಕ್ತಪಡಿಸುತ್ತಿದ್ದರೆನ್ನಲಾಗಿದೆ. ಇವರ ತಾಯಿ ಸೋಮವಾರ ಮಧ್ಯಾಹ್ನ ಸಾಮಾನು ತರಲು ಸಿದ್ಧಕಟ್ಟೆಗೆ ಹೋದ ಸಂದರ್ಭ ಮನೆಯಲ್ಲಿ ಏಕಾಂಗಿಯಾಗಿದ್ದ ದಿವ್ಯಾ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.
ಸಿದ್ಧಕಟ್ಟೆಯಿಂದ ತಾಯಿ ವಾಪಾಸಾದಾಗ ಮನೆಯ ಬಾಗಿಲು ಹಾಕಿದ್ದು ಒಳಗಡೆ ಮಗು ಅಳುತಿತ್ತೆನ್ನಲಾಗಿದೆ. ದಿವ್ಯಾ ಮನೆಯ ಬಾಗಿಲು ತೆರೆಯದಿದ್ದಾಗ ಸ್ಥಳೀಯರ ನೆರವಿನಿಂದ ಮನೆಯ ಹೆಂಚು ತೆಗೆದು ನೋಡಿದಾಗ ದಿವ್ಯಾ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.