ಮಾನಸ ಸರೋವರ ಯಾತ್ರಿಗಳಿಗೆ ಸೂಕ್ತ ವ್ಯವಸ್ಥೆ: ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್
ಮೈಸೂರು,ಜು.3: ಮಾನಸ ಸರೋವರಕ್ಕೆ ತೆರಳಿದ್ದ ಯಾತ್ರಿಗಳ ಪರದಾಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಯಾತ್ರಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಯಾವುದೇ ರೀತಿಯ ಅತಂಕ ಬೇಡ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಯಾತ್ರಿಗಳ ಜೊತೆ ದೆಹಲಿಯ ರಾಯಭಾರಿ ಕಚೇರಿಯ ಅಧಿಕಾರಿಗಳು ಮಾತನಾಡಿದ್ದಾರೆ. ಯಾತ್ರಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನೀರು, ಊಟ ಹಾಗೂ ಮೆಡಿಸನ್ ವ್ಯವಸ್ಥೆ ಮಾಡಲಾಗಿದೆ. ಹವಾಮಾನ ವೈಪರೀತ್ಯದಿಂದ ಸಮಸ್ಯೆ ಉಂಟಾಗಿದೆ. ಹಾಗಾಗಿ 4 ದಿನದಿಂದ ನೇಪಾಳದ ಸಿಮಿಕೋಟ್ನಲ್ಲೇ ಯಾತ್ರಿಗಳು ಸಿಲುಕಿದ್ದಾರೆ. ಒಂದೇ ಕಡೆ ಇರುವ ಕಾರಣ ಅವರಿಗೆ ಭಯವಾಗಿದೆ ಅಷ್ಟೇ ಎಂದರು.
ಮೈಸೂರಿನವರು ಎಷ್ಟಿದ್ದಾರೆಂದು ಗೊತ್ತಿಲ್ಲ. ಆದರೆ ಎಲ್ಲರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ದೆಹಲಿ ಕಚೇರಿಯಿಂದ ಯಾತ್ರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ದೂರವಾಣಿ ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಯಾತ್ರಿಗಳ ಕುಟುಂಬದ ಜೊತೆ ಮಾತಾಡಲು ಸಾಧ್ಯವಾಗಿಲ್ಲ. ನಾನೂ ಕೂಡ ದೆಹಲಿ ರಾಯಭಾರಿ ಕಚೇರಿಯ ಜೊತೆ ಸಂಪರ್ಕದಲ್ಲಿದ್ದೇನೆ. ಇಂದು ಬೆಳಿಗ್ಗೆಯಿಂದ ನೇಪಾಳ ಆರ್ಮಿಯಿಂದ ಯಾತ್ರಿಗಳನ್ನು ರಕ್ಷಿಸುವ ಕೆಲಸ ನಡೆಯಲಿದೆ. ಯಾತ್ರಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಿ ಎಂದಿದ್ದೇವೆ. ಅದರಂತೆ ನೇಪಾಳ ಸರ್ಕಾರದ ರಾಯಭಾರಿ ಕಚೇರಿಯಿಂದ ಕ್ರಮ ವಹಿಸುತ್ತಿದ್ದಾರೆ ಎಂದು ತಿಳಿಸಿದರು.