ಉತ್ತರ ಪ್ರದೇಶ: ಎಂಟನೇ ತರಗತಿ ಪಾಸಾದವನಿಂದ ಶಸ್ತ್ರಕ್ರಿಯೆ !
ಶಾಮ್ಲಿ, ಜು. 4 : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಉತ್ತರ ಪ್ರದೇಶದ ಶಾಮ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ರೋಗಿಯೊಬ್ಬನಿಗೆ ಶಸ್ತ್ರಕ್ರಿಯೆ ನಡೆಸುತ್ತಿರುವುದು ಕಾಣಿಸುತ್ತದೆ.
ಈ ಎಂಟನೇ ತರಗತಿ ಪಾಸಾದವನಾದ ನರದೇವ್ ಸಿಂಗ್ ಎಂಬಾತ ಆರ್ಯನ್ ಆಸ್ಪತ್ರೆಯ ಮಾಲಕನೂ ಆಗಿದ್ದು, ಅಲ್ಲಿಯೇ ಆತ ರೋಗಿಗೆ ಶಸ್ತ್ರಕ್ರಿಯೆ ನಡೆಸಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಮಹಿಳಾ ಕಂಪೌಂಡರ್ ಒಬ್ಬಳು ರೋಗಿಗೆ ಮೊದಲು ಅನೆಸ್ತೇಶಿಯಾ ನೀಡುತ್ತಿರುವುದು ವೀಡಿಯೊದಲ್ಲಿ ಕಾಣಿಸುತ್ತದೆ. ನಂತರ ವಿದ್ಯಾರ್ಥಿ ಶಸ್ತ್ರಕ್ರಿಯೆಗೆ ಮುಂದಾಗಿರುವುದೂ ಕಾಣಿಸುತ್ತದೆ.
ಅಕ್ರಮ ವ್ಯವಹಾರಗಳಿಗಾಗಿ ಈ ಆಸ್ಪತ್ರೆ ಈ ಹಿಂದೆ ಕೂಡ ಸೀಲ್ ಮಾಡಲ್ಪಟ್ಟಿತ್ತು ಎಂದು ಹಂಗಾಮಿ ಮುಖ್ಯ ವೈದ್ಯಾಧಿಕಾರಿ ಅಶೋಕ್ ಕುಮಾರ್ ಹಂಡಾ ವಿವರಿಸಿದ್ದಾರೆ. ಒಟ್ಟು ಮೂರು ಬಾರಿ ಆಸ್ಪತ್ರೆಗೆ ಸೀಲ್ ಮಾಡಲಾಗಿತ್ತಾದರೂ ಅದರ ಮಾಲಕನ ರಾಜಕೀಯ ನಂಟಿನಿಂದಾಗಿ ಅದು ಮತ್ತೆ ತೆರೆದುಕೊಂಡಿತ್ತು ಎಂದು ಹಂಡಾ ಹೇಳಿದ್ದಾರೆ.
ವೀಡಿಯೊದಲ್ಲಿ ಕಾಣಿಸಿರುವುದು ಅಕ್ರಮ ಹಾಗೂ ಅದು ನಿಜವೆಂದಾದರೆ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಈ ಆಸ್ಪತ್ರೆಯಲ್ಲಿ 20ಕ್ಕೂ ಅಧಿಕ ರೋಗಿಗಳು ಸಾವಿಗೀಡಾಗಿದ್ದಾರೆ. ಐದು ರೋಗಿಗಳ ಕುಟುಂಬಗಳು ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಸೆಕ್ಷನ್ 304 ಅನ್ವಯ ಪ್ರಕರಣ ದಾಖಲಿಸಿವೆ.