ಬಂಟ್ವಾಳದ ಸಿಂಧೂರ ಯುನೆಸ್ಕೋ ಸಭೆಯಲ್ಲಿ ಭಾಗಿ

ಬಂಟ್ವಾಳ, ಜು. 4: ಯುನೆಸ್ಕೋ ಅಂತಾರಾಷ್ಟ್ರೀಯ ಸಭೆಯಲ್ಲಿ ಜರ್ಮನಿಯ ಬಿಟಿಯು ವಿಶ್ವವಿದ್ಯಾಲಯದಿಂದ ಭಾರತದ ಬಂಟ್ವಾಳ ಮೂಲದ ಸಿಂಧೂರ ಟಿ.ಪಿ. ಅವರು ಪ್ರತಿನಿಧಿಸುತ್ತಿದ್ದಾರೆ.
ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ ವತಿಯಿಂದ ವಿಶ್ವ ಪರಂಪರಾ ಪಟ್ಟಿಗೆ ನಾನಾ ರಾಷ್ಟ್ರಗಳ ಐತಿಹಾಸಿಕ ನಿವೇಶನಗಳನ್ನು ಸೇರ್ಪಡೆಗೊಳಿಸುವ ಮಹಾಸಭೆಯು ಬಹಾರಿನ್ನ ಮನಾಮದಲ್ಲಿ ನಡೆಯುತ್ತಿದೆ. ಈ ಸಭೆಗೆ ಜರ್ಮನಿಯ ಕೊಟ್ಟಸ್ ಬಿಟಿಯು ವಿಶ್ವವಿದ್ಯಾಲಯವನ್ನು ಸಿಂಧೂರ ಟಿ.ಪಿ. ಪ್ರತಿನಿಧಿಸುತ್ತಿದ್ದಾರೆ.
ಅವರು ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರದ ಪ್ರೊ. ತುಕಾರಾಮ ಪೂಜಾರಿ ಮತ್ತು ಡಾ. ಆಶಾಲತಾ ಸುವರ್ಣ ಅವರ ಪುತ್ರಿ.
ವಿಶ್ವ ಪರಂಪರಾ ಪಟ್ಟಿಗೆ ಭಾರತದ ಮುಂಬೈನ ವಿಕ್ಟೋರಿಯನ್ ಗೋಥಿಕ್ ಮತ್ತು ಆರ್ಟ್ ಡೆಕೊ ಎನ್ಸೆಂಬೆಲ್ಸ್ ಆಯ್ಕೆಗೊಂಡಿವೆ. 10 ದಿನಗಳ ಕಾಲ ಈ ಸಭೆ ನಡೆಯಲಿದೆ.
ತನ್ನ ಮಗಳು ಜರ್ಮನಿಯ ಕೊಟ್ಟಸ್ ಬಿಟಿಯು ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದು, ಯುನೆಸ್ಕೋ ಅಂತಾರಾಷ್ಟ್ರೀಯ ಸಭೆಗೆ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಈಕೆಯೂ ಒಬ್ಬಳು. ಈ ಸಭೆಗೆ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು, ತನಗೆ ಸಂತಸ ತಂದಿದೆ. ಸಭೆಗೆ ಭಾಗವಹಿಸುವ ಬಗ್ಗೆ, ಮಗಳು ಕರೆ ಮಾಡಿ ತಿಳಿಸಿದ್ದಾಳೆ. ಈ ಸಭೆಯಲ್ಲಿ 23 ದೇಶಗಳು ಭಾಗವಹಿಸಲಿದ್ದು, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿವೆ.
-ಪ್ರೊ. ತುಕಾರಾಮ ಪೂಜಾರಿ, ಸಿಂಧೂರ ಅವರ ತಂದೆ