ಜು. 8: ‘ರಾಷ್ಟ್ರೀಯ ತುಳು ಯಕ್ಷಯಾನ’ ಸಮಿತಿ ಸಭೆ
ಮಂಗಳೂರು, ಜು.4: ನಗರದಲ್ಲಿ ‘ರಾಷ್ಟ್ರೀಯ ತುಳು ಯಕ್ಷಯಾನ 2018’ ಕಾರ್ಯಕ್ರಮ ಆಯೋಜಿಸಿ ದೇಶದ ವಿವಿಧ ರಾಜ್ಯಗಳಲ್ಲಿ ತುಳು ಯಕ್ಷಗಾನ ಪ್ರದರ್ಶನದ ತಿರುಗಾಟ ನಡೆಸಲು ತೀರ್ಮಾನಿಸಿದೆ. ಉರ್ವಸ್ಟೋರ್ ಸಮೀಪದ ತುಳುಭವನದಲ್ಲಿ ಜು.8ರಂದು ಮಧ್ಯಾಹ್ನ 3:30ಕ್ಕೆ ಸ್ವಾಗತ ಸಮಿತಿ ಸಭೆ ನಡೆಯಲಿದೆ.
ತುಳುನಾಡಿನಲ್ಲಿ ತುಳುಭಾಷೆಯ ಬೆಳವಣಿಗೆಗೆ ತುಳುಭಾಷೆ, ಸಾಹಿತ್ಯ, ಜನಪದ, ಸಂಸ್ಕತಿಯನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ. ಭಾಷೆ, ಸಾಹಿತ್ಯ ಮತ್ತು ಜನಪದ ಸಂಸ್ಕತಿಯ ಒಟ್ಟು ರೂಪವೇ ತುಳುನಾಡಿನ ಯಕ್ಷಗಾನ. ಆದರೆ ಇಂದು ಯಕ್ಷಗಾನವು ತುಳುಭಾಷೆಯಿಂದ ತುಂಬಾ ದೂರವಾದಂತಿದೆ. ಹಾಗೆಯೇ ತುಳುಭಾಷೆಯ ಯಕ್ಷಗಾನಗಳು ತುಂಬಾ ಕಡಿಮೆಯಾಗುತ್ತಿದೆ. ಅಲ್ಲದೆ, ಕೇವಲ ಹಾಸ್ಯಕ್ಕೆ ಮಾತ್ರ ಇದು ಸೀಮಿತಗೊಳ್ಳುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ದೊರಕುವ ಪಿಂಚಣಿ, ಸಂಬಳ ಹಾಗೂ ಇನ್ನಿತರ ಸಹಾಯ- ಸೌಲಭ್ಯಗಳನ್ನು ಯಕ್ಷಗಾನ ಕಲಾವಿದರಿಗೆ ಲಭಿಸುವಂತೆ ಪ್ರಯತ್ನಿಸುವುದು, ಯಕ್ಷಗಾನ ಕಲಾವಿದ ಮತ್ತು ಕಲಾವಿದ ನೌಕರರನ್ನು ಉದ್ಯೊಗ ಖಾತ್ರಿ ಯೋಜನೆಯಡಿ ತರುವುದು, ಪೌರಾಣಿಕ ಹಾಗೂ ಚಾರಿತ್ರಿಕ ಆಟಗಳು, ಯಕ್ಷಗಾನದ ಸಾಹಿತ್ಯ ಛಂದಸ್ಸುಗಳು ತುಳುಭಾಷೆಯಲ್ಲಿಯೂ ಬರಬೇಕು ಎನ್ನುವ ಉದ್ದೇಶದಿಂದ ‘ತುಳುನಾಡು ಯಕ್ಷಯಾನ ಫೌಂಡೇಶನ್ ಕುಡ್ಲ’ ಎಂಬ ಸಂಘಟನೆಗೆ ರೂಪು ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







