ರಾಜ್ಯ ಬಜೆಟ್: ಉಡುಪಿಯ ರಾಜಕೀಯ ಮುಖಂಡರ ಪ್ರತಿಕ್ರಿಯೆ
ಕರಾವಳಿಗೆ ಅನ್ಯಾಯ: ಶಾಸಕ ರಘುಪತಿ ಭಟ್
ಉಡುಪಿ, ಜು.5: ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಮಂಡಿಸಿದ ಬಜೆಟ್ ನಿರಾಶದಾಯಕವಾಗಿದ್ದು, ಕಳೆದ 15 ವರ್ಷಗಳಲ್ಲಿ ಮಂಡನೆಯಾದ ಬಜೆಟ್ಗಳ ಪೈಕಿ ಈ ಬಜೆಟ್ ಅತ್ಯಂತ ಕೆಟ್ಟ ಬಜೆಟ್ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಿಗೆ ಒಂದೂ ಯೋಜನೆ ಕೊಡದೆ ಕೇವಲ 3-4 ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಇದಾಗಿದೆ. ವಿಶೇಷವಾಗಿ ಮೀನುಗಾರರಿಗೆ ಯಾವುದೇ ಯೋಜನೆ ಇದರಲ್ಲಿಲ್ಲ. ರೈತರ ಸಾಲ ಮನ್ನಾ ಕೂಡ ಅಸಮರ್ಪಕ. ಶಂಕರಾಚಾರ್ಯರ ಜನ್ಮ ದಿನಾಚರಣೆ ಸ್ವಾಗತಾರ್ಹ. ಆದರೆ ಕರಾವಳಿಯ ದಾರ್ಶನಿಕ ಮಧ್ವಾಚಾರ್ಯರ ಜನ್ಮದಿನಾಚರಣೆಯ ಘೋಷಣೆ ಮಾಡಬೇಕಿತ್ತು. ಕರಾವಳಿಯಲ್ಲಿ ಜೆಡಿಎಸ್ ಪಕ್ಷ ಠೇವಣಿ ಕಳೆದುಕೊಂಡಿದಕ್ಕೆ ಕುಮಾರಸ್ವಾಮಿ ಸೇಡು ತೀರಿಸಿಕೊಂಡಂತಿದೆ ಎಂದು ಕೆ.ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಸಿಹಿ-ಕಹಿ ಸಮ್ಮಿಲನದ ಬಜೆಟ್: ಕಾಂಗ್ರೆಸ್
ಸಕಾಲದಲ್ಲಿ ಮರುಪಾವತಿ ಮಾಡಿದ ರೈತರ 2 ಲಕ್ಷದವ ರೆಗಿನ ಸಾಲ ಮನ್ನಾ. ಪೆಟ್ರೊಲ್ ಹಾಗೂ ಡೀಸೆಲ್ ಸೆಸ್ ಏರಿಕೆಯಾದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ. ಸಿದ್ದರಾಮಯ್ಯ ಸರಕಾರದ ಎಲ್ಲಾ ಯೋಜನೆಗಳ ಮುಂದುವರಿಕೆಯಿಂದ ಸಮಗ್ರ ಕರ್ನಾಟಕ ಚಿಂತನೆ ಕಾರ್ಯರೂಪಕ್ಕೆ. ಒಟ್ಟಿನಲ್ಲಿ ಇದು ಸಿಹಿ-ಕಹಿಯ ಸಮ್ಮಿಶ್ರದ ಬಜೆಟ್ ಎಂಬುದರಲ್ಲಿ ಸಂಶಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ನ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿದ್ದಾರೆ.
ಸರ್ವಾಂಗೀಣ ಅಭಿವೃದ್ಧಿಯ ಬಜೆಟ್: ಜೆಡಿಎಸ್
ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿ 34,000 ಕೋಟಿ ರೂ. ರೈತ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡುವ ಮೂಲಕ ನುಡಿದಂತೆ ನಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಮಹಾನ್ ರೈತ ನಾಯಕರಾಗಿ ಮೂಡಿಬಂದಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗಿಶ್ ಶೆಟ್ಟಿ ಕಾಪು ನುಡಿದ್ದಾರೆ.
ಜನಪರ ಹಾಗೂ ದೂರದೃಷ್ಟಿ ಹೊಂದಿರುವ ಎಲ್ಲಾ ವರ್ಗಗಳ ಜನರೊಂದಿಗೆ ಮಹಿಳೆಯರಿಗೆ ಹಾಗೂ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ ಬಜೆಟ್ ಇದಾಗಿದೆ. ಹಿರಿಯ ನಾಗರಿಕರ ಮಾಸಾಶನವನ್ನು 600ರಿಂದ 1,000ರೂ.ಗಳಿಗೆ ಏರಿಸಿರುವುದು ಪ್ರಶಂಸಾರ್ಹ ಕ್ರಮ. ಒಟ್ಟಿನಲ್ಲಿ ಇದೊಂದು ದೂರದೃಷ್ಟಿ ಇರುವ ಬಜೆಟ್ ಆಗಿದೆ ಎಂದು ಯೋಗಿಶ್ ಶೆಟ್ಟಿ ತಿಳಿಸಿದ್ದಾರೆ.
ರಾಜ್ಯ ಕಂಡ ಅತ್ಯಂತ ಕೆಟ್ಟ ಬಜೆಟ್: ಮಟ್ಟಾರ್
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ 2018-19ರ ಸಾಲಿನ ರಾಜ್ಯದ ಬಜೆಟ್ ರಾಜ್ಯದ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದು, ಬಹುತೇಕ ಕರ್ನಾಟಕವನ್ನು ಮತ್ತು ಕರಾವಳಿ ಭಾಗವನ್ನು ಪೂರ್ಣವಾಗಿ ನಿರ್ಲಕ್ಷಿಸಿದ ಅತ್ಯಂತ ಕೆಟ್ಟ ಬಜೆಟ್ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಈ ಬಜೆಟ್ ಕೇವಲ ಹಾಸನ, ಮಂಡ್ಯ, ತುಮಕೂರು, ರಾಮನಗರ ಮತ್ತು ಭಾಗಶ: ಮೈಸೂರು ಜಿಲ್ಲೆಗಳಿಗೆ ಸಂಬಂಧಿಸಿದ ಬಜೆಟಾಗಿದ್ದು, ಮುಖ್ಯಮಂತ್ರಿಗಳು ತಾನು ಆ ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿ ಎಂದು ತನ್ನನ್ನು ಸೀಮಿತಗೊಳಿಸಿಕೊಂಡಿದ್ದಾರೆ ಎಂದವರು ಹೇಳಿದ್ದಾರೆ.
ಬಜೆಟ್ನಲ್ಲಿ ಕರಾವಳಿ ಜಿಲ್ಲೆ ಕಡೆಗಣನೆ: ಉದಯಕುಮಾರ್ ಶೆಟ್ಟಿ
ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಮಂಡಿಸಿ ರುವುದು ರಾಜ್ಯ ಬಜೆಟ್ ಅಲ್ಲ. ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಎಂದು ಬಿಜೆಪಿ ರಾಜ್ಯಕಾರಿಣಿ ಸದಸ್ಯ, ಮಂಗಳೂರು ವಿಭಾಗ ಪ್ರಬಾರಿ ಕೆ.ಉದಯ ಕುಮಾರ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಪೆಟ್ರೋಲ್ ಬೆಲೆ ರೂ.1.14, ಡೀಸೆಲ್ಗೆ ರೂ.1.12 ಏರಿಕೆ ಆಗಿದೆ. ಮುಖ್ಯಮಂತ್ರಿಗೆ ಇಡೀ ಕರ್ನಾಟಕದ ಪರಿಜ್ಞಾನವಿಲ್ಲ. ತಮ್ಮ ಪಕ್ಷ ಎಲ್ಲಿ ಅಸ್ತಿತ್ವ ದಲ್ಲಿದೆಯೋ ಅದನ್ನೇ ಸೀಮಿತವಾಗಿ ಯೋಜಿಸಿ ಮಂಡಿಸಿದ ಬಜೆಟ್. ಕರಾವಳಿ ಭಾಗವನ್ನು ಪೂರ್ತಿಯಾಗಿ ಕಡೆಗಾಣಿಸಿದ್ದಾರೆ. ರೈತರ ಸಾಲ ಮನ್ನಾ ಸ್ವಾಗತಾರ್ಹವಾದರೂ ಮೀನುಗಾರರ, ಸಹಕಾರ ಸಂಘಟನೆಯ ಸಾಲ ಮನ್ನಾ ಮಾಡಿಲ್ಲ ಎಂದವರು ಟೀಕಿಸಿದ್ದಾರೆ.
ಮೀನುಗಾರರಿಗೆ ಅನ್ಯಾಯ: ಯಶ್ಪಾಲ್ ಸುವರ್ಣ
ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಮಂಡಿಸಿದ ರಾಜ್ಯ ಬಜೆಟ್ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದು, ಇನ್ನುಳಿದ ಜಿಲ್ಲೆಗಳಿಗೆ ಅವರು ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಮೀನುಗಾರ ಮುಖಂಡ ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಕರಾವಳಿಯ ಪ್ರಮುಖ ಉದ್ದಿಮೆಯಾಗಿರುವ ಮೀನುಗಾರಿಕೆ ಇಂದು ನಷ್ಟ ದಲ್ಲಿದೆ. ಇದನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿವೆ. ಇವುಗಳ ಕಷ್ಟಗಳಿಗೆ ಸ್ಪಂಧಿಸುವಂತೆ ಆಗ್ರಹಿಸಿ ಕರಾವಳಿಯ ಜನಪ್ರತಿನಿಧಿಗಳು ಸೇರಿ ಮುಖ್ಯಮಂತ್ರಿಗೆ ಇತ್ತೀಚೆಗೆ ಮನವಿ ಕೊಟ್ಟು ಆಗ್ರಹಿಸಿದ್ದೆವು. ಆದರೆ ಮೀನುಗಾರರ ಬೇಡಿಕೆಗಳಿಗೆ ಅವರು ಯಾವುದೇ ಸ್ಪಂದನೆ ತೆರಿಸಿಲ್ಲ ಎಂದು ಸುವರ್ಣ ದೂರಿದ್ದಾರೆ.
ಕರಾವಳಿಯ ಪ್ರಮುಖ ಉದ್ದಿಮೆಯಾಗಿರುವ ಮೀನುಗಾರಿಕೆ ಇಂದು ನಷ್ಟ ದಲ್ಲಿದೆ. ಇದನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿವೆ. ಇವುಗಳ ಕಷ್ಟಗಳಿಗೆ ಸ್ಪಂಧಿಸುವಂತೆ ಆಗ್ರಹಿಸಿ ಕರಾವಳಿಯ ಜನಪ್ರತಿನಿಧಿಗಳು ಸೇರಿ ಮುಖ್ಯಮಂತ್ರಿಗೆ ಇತ್ತೀಚೆಗೆ ಮನವಿ ಕೊಟ್ಟು ಆಗ್ರಹಿಸಿದ್ದೆವು. ಆದರೆ ಮೀನುಗಾರರ ಬೇಡಿಕೆಗಳಿಗೆ ಅವರು ಯಾವುದೇ ಸ್ಪಂದನೆ ತೋರಿಸಿಲ್ಲ ಎಂದು ಸುವರ್ಣ ದೂರಿದ್ದಾರೆ. *ರಾಜ್ಯದ ಸರ್ವಾಂಗೀಣ ಅಭಿವೃದಿಗೆ ಪೂರಕವಾದ ಮತ್ತು ದೂರದೃಷ್ಟಿ ಇರುವ ಬಜೆಟ್ ಇದಾಗಿದೆ.
-ಜಯಕುಮಾರ್ ಪರ್ಕಳ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ.







