ಪಟ್ಟದ ದೇವರ ಹಸ್ತಾಂತರ ವಿವಾದ: ನ್ಯಾಯಾಲಯಕ್ಕೆ ಕೆವಿಯಟ್ ಸಲ್ಲಿಸಿದ ಶಿರೂರುಶ್ರೀ

ಉಡುಪಿ, ಜು.5: ಶಿರೂರು ಮಠದ ಪಟ್ಟದ ದೇವರನ್ನು ತನಗೆ ಮರಳಿಸಲು ಶಿಷ್ಯ ಸ್ವೀಕಾರವೂ ಸೇರಿದಂತೆ ವಿವಿಧ ಶರ್ತಗಳನ್ನು ವಿಧಿಸಿದ ಉಡುಪಿಯ ಅಷ್ಟಮಠಗಳ ಉಳಿದ ಸ್ವಾಮೀಜಿಗಳ ನಿರ್ಧಾರದ ಹಿನ್ನೆಲೆಯಲ್ಲಿ ಶಿರೂರು ಮಠ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಇದೀಗ ನ್ಯಾಯಾಲಯದ ಮೆಟ್ಟಿಲು ಏರಿದ್ದು, ಉಡುಪಿಯ ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ.
ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಹೊರತು ಪಡಿಸಿ ಉಳಿದ ಆರು ಮಠಗಳ -ಸೋದೆ, ಕಾಣಿಯೂರು, ಅದಮಾರು, ಪಲಿಮಾರು, ಪೇಜಾವರ ಹಾಗೂ ಕೃಷ್ಣಾಪುರ- ಮಠಾಧೀಶರುಗಳ ವಿರುದ್ಧ ಈ ಕೆವಿಯಟ್ ಸಲ್ಲಿಸಲಾಗಿದೆ.
ಅಷ್ಟಮಠಗಳ ಸ್ವಾಮೀಜಿಗಳಲ್ಲಿ ಯಾರಾದರೂ, ತಮ್ಮ ಪಟ್ಟದ ದೇವರನ್ನು ಹಸ್ತಾಂತರಿಸುವ ವಿಷಯದಲ್ಲಿ ಕೆಲವು ನಿರ್ಬಂಧಗಳನ್ನು ಕೋರಿ ನ್ಯಾಯಾಲಯ ದಲ್ಲಿ ದಾವೆ ಹೂಡಿದರೆ ಏಕಪಕ್ಷೀಯ ಆದೇಶ ನೀಡಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಶಿರೂರು ಶ್ರೀಗಳು ಈ ಕೆವಿಯಟ್ ಸಲ್ಲಿಸಿದ್ದಾರೆ.
ಕೆವಿಯಟ್ನ ಅವಧಿ 3 ತಿಂಗಳು ಇರುವುದರಿಂದ ಚಾತುರ್ಮಾಸ್ಯಕ್ಕೆ ಮುನ್ನ (ಜು. 23) ಶಿರೂರು ಶ್ರೀಗಳ ವಿರುದ್ಧ ಕ್ರಮಕೈಗೊಳ್ಳುವ ಮಠಾಧೀಶರ ಉದ್ದೇಶಕ್ಕೆ ಹಿನ್ನಡೆಯಾದಂತಾಗಿದೆ ಎಂದು ಹೇಳಲಾಗುತ್ತಿದೆ.
ಶ್ರೀ ಕೃಷ್ಣ ಮಠದಲ್ಲಿ ನೂರಾರು ವರ್ಷಗಳ ಸಂಪ್ರದಾಯದಂತೆ ಶಿರೂರು ಶ್ರೀಗಳು ಕೆಲ ತಿಂಗಳ ಹಿಂದೆ ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ಮಠದ ಪಟ್ಟದ ದೇವರು, ವಿಠಲ ಸೇರಿದಂತೆ ನಾಲ್ಕು ಮೂರ್ತಿಗಳನ್ನು ದೈನಂದಿನ ಪೂಜೆಗಾಗಿ ಅದಮಾರುಶ್ರೀಗಳಿಗೆ ನೀಡಿದ್ದು, ಅವರದನ್ನು ಪರ್ಯಾಯ ಪಲಿಮಾರು ಮಠಕ್ಕೆ ಒಪ್ಪಿಸಿದ್ದರು. ಆ ಬಳಿಕ ಮೂರ್ತಿಗಳಿಗೆ ಕೃಷ್ಣ ಮಠದಲ್ಲೇ ಪೂಜೆ ಸಲ್ಲುತ್ತಿದೆ.
ಆದರೆ ಇತ್ತೀಚೆಗೆ ಶಿರೂರುಶ್ರೀ ಮೂರ್ತಿಗಳನ್ನು ಹಿಂದಿರುಗಿಸುವಂತೆ ಕೇಳಿದಾಗ, ಶಿಷ್ಯ ಸ್ವೀಕಾರ ಮಾಡಿದರೆ ಮಾತ್ರ ಅವುಗಳನ್ನು ಹಿಂದಿರುಗಿಸುವ ನಿರ್ಧಾರವನ್ನು ಆರು ಸ್ವಾಮೀಜಿಗಳು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇದು ಈಗ ಕಗ್ಗಂಟಿನ ವಿವಾದವಾಗಿ ಬೆಳೆದು ನಿಂತಿದೆ.