ಮಂಗಳೂರು: ರಾಜ್ಯ ಸೀನಿಯರ್, ಮಾಸ್ಟರ್ಸ್ ಪವರ್ಲಿಫ್ಟಿಂಗ್ ಸ್ವರ್ಧೆಗೆ ಚಾಲನೆ

ಮಂಗಳೂರು, ಜು.6: ನಗರದ ಮೋರ್ಗನ್ಸ್ಗೇಟ್ನಲ್ಲಿರುವ ನ್ಯೂ ಬಾಲಮಾರುತಿ ಜಿಮ್ನಾಶಿಯಂ 25ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಸ್ಕೌಟ್ಯ್ ಆ್ಯಂಡ್ ಗೈಡ್ಸ್ ಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ 44ನೇ ಪುರುಷರ ಹಾಗೂ 36ನೇ ವನಿತೆಯರ ವಿಭಾಗದ ರಾಜ್ಯ ಸೀನಿಯರ್ ಹಾಗೂ ಮಾಸ್ಟರ್ಸ್ ಪವರ್ಲಿಫ್ಟಿಂಗ್ ಸ್ವರ್ಧೆ ಶುಕ್ರವಾರ ಆರಂಭಗೊಂಡಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಪವರ್ ಲಿಫ್ಟಿಂಗ್ನಲ್ಲಿ ಕರಾವಳಿ ಜಿಲ್ಲೆಯು ರಾಜ್ಯ, ರಾಷ್ಟ್ರ ಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ. ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹ ದೊರೆಯುವಂತಾಗಬೇಕು ಎಂದರು.
ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಪಾಲಿಕೆಯ ಆದಾಯದಲ್ಲಿ ಶೇ.2ರಷ್ಟನ್ನು ಕ್ರೀಡಾ ಚಟುವಟಿಕೆಗಳಿಗೆ ಮೀಸಲು ಇಡಬೇಕು ಎಂಬ ನಿಯಮವಿದೆ. ಆದರೆ ಅದಕ್ಕೊಂದು ಸರಿಯಾದ ನೀತಿ ನಿಯಮಗಳು ಇಲ್ಲ. ಸರಕಾರಗಳು ಇಂತಹ ಕ್ರೀಡಾಕೂಟಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಪಾಲಿಕೆ ಅದಕ್ಕೊಂದು ಸ್ವಷ್ಟವಾದ ನಿಯಾಮವಳಿಗಳನ್ನು ಮಾಡಿದರೆ ಉತ್ತಮ ಎಂದರು.
ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ನ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಮಾತನಾಡಿ, ಕರಾವಳಿಯಲ್ಲಿರುವ ಸಾಕಷ್ಟು ಪವರ್ ಲಿಫ್ಟರ್ಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ನಡೆಯುತ್ತಿರುವ ಸ್ಟೇಟ್ ಸೀನಿಯರ್ ಆ್ಯಂಡ್ ಮಾಸ್ಟರ್ಸ್ ಸ್ಪರ್ಧೆಯಲ್ಲಿ ವಿಜೇತರಾಗುವವರು ಆಗಸ್ಟ್ 25ರಿಂದ 29ರವರೆಗೆ ನಡೆಯಲಿರುವ ರಾಷ್ಟ್ರೀಯ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದರು.
ಪವರ್ ಲಿಫ್ಟಿಂಗ್ ಇಂಡಿಯಾ ಸಂಸ್ಥೆಯ ಪ್ರೋತ್ಸಾಹದಿಂದಾಗಿ ಅನೇಕ ಪವರ್ ಲಿಫ್ಟರ್ ಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಸಾಧ್ಯವಾಗಿದೆ. ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ಅನೇಕ ಮಂದಿಯಿದ್ದಾರೆ ಎಂದ ಅವರು ಸೆಪ್ಟೆಂಬರ್ ತಿಂಗಳಲ್ಲಿ ದುಬೈಯಲ್ಲಿ ನಡೆಯುವ ಏಷ್ಯನ್ ಬೆಂಚ್ ಪ್ರೆಸ್ನಲ್ಲಿ ಈ ಭಾಗದಿಂದ 21 ಪವರ್ ಲಿಫ್ಟರ್ಗಳು ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಇದೇ ಸಂದರ್ಭ ನ್ಯೂ ಬಾಲಮಾರುತಿ ಜಿಮ್ನಾಶಿಯಂನ ಅವರ ಪರವಾಗಿ ಸದಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘಟನಾ ಕಾರ್ಯದರ್ಶಿ ಕೆ. ಹರೀಶ್ ಕುಮಾರ್, ಕಾರ್ತಿಕ್ರಾಜ್, ಭೂಷಣ್ರಾಜ್, ಮಾಜಿ ಮೇಯರ್ ಪುರಂದರ ದಾಸ್ ಕೂಳೂರು, ಮಾಜಿ ಕಾರ್ಪೊರೇಟರ್ ಭಾಸ್ಕರ ರಾವ್ ಸೇರಿದಂತೆ ಸಂಘಟನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಮಧುಚಂದ್ರ ಸ್ವಾಗತಿಸಿದರು. ಎಂ. ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.