ಉಡುಪಿ; ಹಲವು ಮನೆಗಳಿಗೆ ಹಾನಿ: 4.45 ಲಕ್ಷ ರೂ. ನಷ್ಟ

ಉದ್ಯಾವರ ಶೇಖರ ಪೂಜಾರಿಯ ಮನೆ ಕುಸಿದು ಬಿದ್ದಿರುವುದು
ಉಡುಪಿ, ಜು.7: ತಾಲೂಕಿನ ಉದ್ಯಾವರ ಗ್ರಾಮದ ಮೇಲುಪೇಟೆ ಎಂಬಲ್ಲಿ ಇಂದು ಬೆಳಗ್ಗೆ ಭಾರಿ ಮಳೆಗೆ ಶೇಖರ ಪೂಜಾರಿ ಎಂಬವರ ವಾಸ್ತವ್ಯದ ಮನೆ ಸಂಪೂರ್ಣ ಕುಸಿದು ಬಿದ್ದು ಸುಮಾರು ಎರಡು ಲಕ್ಷ ರೂ. ನಷ್ಟ ಉಂಟಾ ಗಿರುವ ಬಗ್ಗೆ ವರದಿಯಾಗಿದೆ.
ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್, ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷೆ ರಿಯಾಝ್ ಪಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರದ ಭರವಸೆಯನ್ನು ನೀಡಿದರು.
ಮೂಡುತೋನ್ಸೆ ಗ್ರಾಮದ ಜಾನಕಿ ಬೆಲ್ಚಡ್ತಿ ಎಂಬವರ ವಾಸ್ತವ್ಯದ ಮನೆಯ ಗೋಡೆ ಕುಸಿದು ಸುಮಾರು 35ಸಾವಿರ ರೂ., 41 ಶಿರೂರು ಗ್ರಾಮದ ಕೊಡ್ಲರ ಬೆಟ್ಟು ಎಂಬಲ್ಲಿ ತುಕ್ರ ನಾಯಕ್ ಎಂಬವರ ಮನೆಗೆ ಹಾನಿಯಾಗಿ 40 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿಯ ಮೂಲಗಳು ತಿಳಿಸಿವೆ.
ಬ್ರಹ್ಮಾವರ ಮಟಪಾಡಿ ಗ್ರಾಮದ ವನಿತಾ ಶೆಟ್ಟಿ ಎಂಬವರ ವಾಸ್ತವ್ಯದ ಮನೆ ಮತ್ತು ದನದಕೊಟ್ಟಿಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿ 70ಸಾವಿರ ರೂ. ಹಾಗೂ ವಡ್ಡರ್ಸೆ ಗ್ರಾಮದ ಶೇಖರ ಶೆಟ್ಟಿ ಎಂಬವರ ಮನೆಯ ಬಾವಿ ಗಾಳಿ ಮಳೆಯಿಂದ ಕುಸಿದ ಪರಿಣಾಮ ಸುಮಾರು ಒಂದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.