ಮಂಗಳೂರು: ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಜೆಡಿಎಸ್ ಮನವಿ

ಮಂಗಳೂರು, ಜು.7: ತೊಕ್ಕೊಟ್ಟು-ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಮಂಗಳೂರು ವಿಧಾನಸಭಾ ಕ್ಷೇತ್ರದ ನಿಯೋಗವು ಶನಿವಾರ ಅಪರ ಜಿಲ್ಲಾಧಿಕಾರಿ ಕುಮಾರ್ರಿಗೆ ಮನವಿ ಸಲ್ಲಿಸಿತು.
ತಲಪಾಡಿಯಿಂದ ಪಂಪ್ವೆಲ್ವರೆಗಿನ ಚತುಷ್ಪಥ ರಸ್ತೆಯ ಜೊತೆಗೆ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು, ಸರ್ವಿಸ್ ರಸ್ತೆ ನಿರ್ಮಿಸಬೇಕು, ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹಿಸಬಾರದು ಎಂದು ನಿಯೋಗ ಒತ್ತಾಯಿಸಿದೆ.
8 ವರ್ಷಗಳಿಂದ ನಡೆಯುತ್ತಿರುವ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ಹೆದ್ದಾರಿ ಸುತ್ತಮುತ್ತಲಿನ ರಸ್ತೆಗಳೆಲ್ಲಾ ತಡೆಗಳಿಂದ ಕೂಡಿದೆ. ಕಾಮಗಾರಿಯ ಸೊತ್ತುಗಳು, ಮಣ್ಣು, ತಗಡಿನ ರಾಶಿ, ಕಬ್ಬಿಣದ ತುಂಡುಗಳು ರಾ.ಹೆ. ಬದಿಯಲ್ಲೇ ಇರುವುದರಿಂದ ಸಂಚರಿಸುವುದು ಅಪಾಯಕಾರಿಯಾಗಿದೆ. ನಿತ್ಯ ಟ್ರಾಫಿಕ್ ಜಾಮ್ ಸಂಭವಿಸಿ, 2 ತಾಸಿಗೂ ಅಧಿಕ ಕಾಲ ಜನರು ತತ್ತರಿಸುತ್ತಿದ್ದಾರೆ. ಗುತ್ತಿಗೆದಾರರು ಫ್ಲೈಓವರಿನ ಕಾಮಗಾರಿಯನ್ನು ಶೀಘ್ರವಾಗಿ ನಡೆಸಿಕೊಡುವಂತೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮೋಹನದಾಸ್ ಶೆಟ್ಟಿ, ಮುಖಂಡರಾದ ನಝೀರ್ ಉಳ್ಳಾಲ್, ದಿನಕರ್ ಉಳ್ಳಾಲ್, ಎಚ್.ಸಾಲಿ, ಪುತ್ತುಮೋನು ಹುಸೈನ್, ಗಂಗಾಧರ್ ಉಳ್ಳಾಲ್, ಖಲೀಲ್ ಮುಕ್ಕಚ್ಚೇರಿ, ಇಬ್ರಾಹೀಂ ಉಳ್ಳಾಲ ಬೆಳ್ಮ ಗ್ರಾಪಂ ಮಾಜಿ ಅಧ್ಯಕ್ಷ ಅಕ್ಸಾ ಉಸ್ಮಾನ್ ಉಪಸ್ಥಿತರಿದ್ದರು.