ಕಾರ್ಕಳ ಯುವತಿಯ ಅತ್ಯಾಚಾರ: ಆರೋಪಿಗೆ 7 ವರ್ಷ ಜೈಲು ಶಿಕ್ಷೆ

ಉಡುಪಿ, ಜು.7: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಣೂರು ಗ್ರಾಮದಲ್ಲಿ ಎಂಟು ವರ್ಷಗಳ ಹಿಂದೆ ಯುವತಿಯನ್ನು ವಂಚಿಸಿ ಅತ್ಯಾಚಾರಗೈದ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಏಳು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕೇಮಾರು ಸಸಿಹಿತ್ಲು ಪಾಲಡ್ಕ ನಿವಾಸಿ ಯೋಗೀಶ್ (25) ಶಿಕ್ಷೆಗೆ ಗುರಿಯಾದ ಆರೋಪಿ. ವಿವಾಹಿತನಾಗಿರುವ ಯೋಗೀಶ್ 19 ವರ್ಷ ವಯಸ್ಸಿನ ಯುವತಿ ಯನ್ನು ಮದುವೆಯಾಗುವುದಾಗಿ ನಂಬಿಸಿ 2010ರ ಜ.18ರಂದು ಮಧ್ಯಾಹ್ನ 12.30ರ ಸುಮಾರಿಗೆ ಸಾಣೂರು ಗ್ರಾಮದ ಬಾರಾಡಿ ಕ್ರಾಸ್ ಬಳಿಯ ಹಾಡಿ ಯಲ್ಲಿ ಅತ್ಯಾಚಾರ ಎಸಗಿ ಕೊಲೆ ಬೆದರಿಕೆಯೊಡ್ಡಿದ್ದನು.
ಅಲ್ಲದೆ ಯುವತಿಯ ಅಶ್ಲೀಲ ಚಿತ್ರಗಳನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದು ಪದೇ ಪದೇ ದೈಹಿಕ ಸಂಪರ್ಕ ನಡೆಸಲು ಬರುವಂತೆ ಆಕೆಯನ್ನು ಒತ್ತಾಯಿಸು ತ್ತಿದ್ದನು. ಬಾರದಿದ್ದರೆ ಮೊಬೈಲ್ನಲ್ಲಿ ಫೋಟೋವನ್ನು ಎಲ್ಲರಿಗೂ ಹಂಚಿ ಮಾನ ಕಳೆಯುವುದಾಗಿ ಬೆದರಿಕೆ ಒಡ್ಡಿದ್ದನು. ಅಲ್ಲದೆ ಈತ ಆಕೆಗೆ ತಾನು ಮದುವೆಯಾಗಿರುವುದನ್ನು ಮರೆಮಾಚಿ ವಂಚಿಸಿದ್ದನು. ಈ ಬಗ್ಗೆ 2011ರ ಮೇ 22ರಂದು ಆರೋಪಿ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 376, 292, 420, 506 ಐಪಿಸಿ ಮತ್ತು ಕಲಂ 67(ಎ) ಐಟಿ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಆಗಿನ ಕಾಪು ವೃತ್ತ ನಿರೀಕ್ಷಕ ಸುನೀಲ್ ನಾಯ್ಕ 2015ರ ಮೇ 25ರಂದು ನ್ಯಾಯಾಲಯ ಆರೋಪ ಪಟ್ಟಿ ಸಲ್ಲಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಆತನಿಗೆ 376ರ ಅಡಿ 7ವರ್ಷ ಜೈಲು ಹಾಗೂ 10ಸಾವಿರ ರೂ. ದಂಡ, 292 ಮತ್ತು 506ರಡಿಯಲ್ಲಿ ತಲಾ ಆರು ತಿಂಗಳು ಜೈಲು ಮತ್ತು ಒಂದು ಸಾವಿರ ರೂ. ದಂಡ, ಐಟಿ ಕಾಯಿದೆಯಡಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದರು.
ಸರಕಾರಿ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದಿಸಿದ್ದರು. ಅಪರಾಧಿ ಯೋಗೀಶ್ ಈಗಾಗಲೇ ಗಂಧ ಕಳವು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಬೆಳಗಾವಿ ಜೈಲಿನಲ್ಲಿದ್ದಾನೆ.