ಸೋಮವಾರಪೇಟೆ: ಎಸಿಬಿ ಬಲೆಗೆ ಬಿದ್ದ ಬ್ಯಾಡಗೊಟ್ಟ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷ
ಸೋಮವಾರಪೇಟೆ,ಜು.7: ಆಶ್ರಯ ಯೋಜನೆ ಮನೆಗಳ ಮಂಜೂರಾತಿಗೆ ಫಲಾನುಭವಿಗಳಿಂದ ಲಂಚ ಸ್ವೀಕರಿಸುತ್ತಿದ್ದ ತಾಲೂಕಿನ ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ ಸುಂದರ್ ಮತ್ತು ಉಪಾಧ್ಯಕ್ಷ ಅಹಮ್ಮದ್ ಅವರುಗಳನ್ನು ವಶಕ್ಕೆ ಪಡೆದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ತಡರಾತ್ರಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಸರ್ಕಾರದಿಂದ ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ 36 ಮಂದಿ ಫಲಾನುಭವಿಗಳಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾಗಿದ್ದು, ಇವರಿಗೆ ಗ್ರಾ.ಪಂ.ನಿಂದ ಮಂಜೂರಾತಿ ನೀಡಲು ಅಧ್ಯಕ್ಷೆ ನಿರ್ಮಲ ಮತ್ತು ಉಪಾಧ್ಯಕ್ಷ ಅಹಮ್ಮದ್ ಅವರುಗಳು ತಲಾ 5 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಹೇಳಲಾಗಿದ್ದು, ಈ ಬಗ್ಗೆ ಹಾರೋಹಳ್ಳಿ ಗ್ರಾಮ ನಿವಾಸಿ ಚಂದ್ರಶೇಖರ್ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ನಿನ್ನೆ ಸಂಜೆ ವೇಳೆಗೆ ಅಧ್ಯಕ್ಷೆ ನಿರ್ಮಲ ಅವರು ತನ್ನ ಮನೆಯಲ್ಲಿಯೇ ದೂರುದಾರ ಚಂದ್ರಶೇಖರ್ ಅವರಿಂದ ರೂ. 5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಚಂದ್ರಶೇಖರ್ ಅವರ ದೂರಿನ ಮೇರೆಗೆ ಉಪಾಧ್ಯಕ್ಷ ಅಹಮ್ಮದ್ ಅವರನ್ನೂ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಪೂರ್ಣಚಂದ್ರ ತೇಜಸ್ವಿ, ಇನ್ಸ್ ಪೆಕ್ಟರ್ ಶೇಖರ್ ಸೇರಿದಂತೆ ಕೊಡಗು ಎಸಿಬಿ ಘಟಕದ 10ಕ್ಕೂ ಅಧಿಕ ಸಿಬ್ಬಂದಿಗಳು ಭಾಗವಹಿಸಿದ್ದರು.