ರಹೀಂ ಉಚ್ಚಿಲ್ ಗನ್ಮ್ಯಾನ್ ಅಮಾನತು: ಮಂಗಳೂರು ಪೊಲೀಸ್ ಕಮಿಷನರ್ ಆದೇಶ

ಮಂಗಳೂರು, ಜು.7: ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಮುಖಂಡ ರಹೀಂ ಉಚ್ಚಿಲ್ ಅವರ ಗನ್ಮ್ಯಾನ್ ಮಲ್ಲಿಕಾರ್ಜುನ ಅವರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಟಿ.ಕೆ. ಸುರೇಶ್ ಆದೇಶ ಹೊರಡಿಸಿದ್ದಾರೆ.
ವಿಐಪಿ ಜತೆ ಫೋಟೊ ಮತ್ತು ಸೆಲ್ಫಿ ತೆಗೆಸಿಕೊಂಡಿರುವುದು ಮತ್ತು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಹಾಗೂ ಮೇಲಾಧಿಕಾರಿಗಳಿಗೆ ತಿಳಿಸದೆ, ರಜೆ ಅರ್ಜಿಯನ್ನೂ ಸಲ್ಲಿಸದೆ ರಜೆಯಲ್ಲಿ ಹೋದ ಆರೋಪದ ಮೇಲೆ ಈ ಕ್ರಮ ಜರಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ: ರಹೀಂ ಉಚ್ಚಿಲ್ ಕಳೆದ ಜೂ. 23ರಂದು ದುಬೈಗೆ ತೆರಳುವ ಸಂದರ್ಭ ಗನ್ಮ್ಯಾನ್ ಜತೆ ನಿಂತು ಫೋಟೊ ತೆಗೆಸಿಕೊಂಡಿದ್ದರು. ಬಳಿಕ ಅದಕ್ಕೆ ಶೀರ್ಷಿಕೆ ಸೇರಿಸಿ, ತಾನು ದುಬೈಗೆ ಹೋಗುವುದಾಗಿ ಫೇಸ್ಬುಕ್ನಲ್ಲಿ ಬರೆದು ಫೋಟೊಗಳನ್ನು ಅಪ್ಲೋಡ್ ಮಾಡಿದ್ದರು. ಇದಾದ ಬಳಿಕ ಗನ್ಮ್ಯಾನ್ ಸಶಸ್ತ್ರ ಮೀಸಲು ಪಡೆಗೆ ತನ್ನ ಗನ್ ಒಪ್ಪಿಸಿ, ಯಾರಲ್ಲೂ ಹೇಳದೆ ಕೇಳದೆ ತನ್ನ ಊರಿಗೆ ಹೊರಟು ಹೋಗಿದ್ದರು. ರಜೆ ಅರ್ಜಿಯನ್ನು ಕೂಡ ಅವರು ನೀಡಿರಲಿಲ್ಲ ಎಂದು ತಿಳಿದುಬಂದಿದೆ.
ಇದು ಮೇಲಾಧಿಕಾರಿಗಳ ಗಮನಕ್ಕೆ ಬಂದು ಗನ್ಮ್ಯಾನ್ ಮಲ್ಲಿಕಾರ್ಜುನ ಅವರನ್ನು ವಿಚಾರಿಸಿದ್ದರು. ಆಗ ತಾನು ರಹೀಂ ಉಚ್ಚಿಲ್ ಜತೆ ಉಡುಪಿಯಲ್ಲಿ ಇರುವುದಾಗಿ ಗನ್ಮ್ಯಾನ್ ಹೇಳಿದ್ದರು. ಆದರೆ ವಿದೇಶಕ್ಕೆ ತೆರಳಿದ್ದ ಫೋಟೊವನ್ನು ರಹೀಂ ಉಚ್ಚಿಲ್ ಫೇಸ್ಬುಕ್ನಲ್ಲಿ ಹಾಕಿದ್ದನ್ನು ಗಮನಿಸಿದ ಪೊಲೀಸರು ಗನ್ಮ್ಯಾನ್ ಸುಳ್ಳು ಹೇಳುತ್ತಿದ್ದಾರೆ ಎನ್ನುವುದನ್ನು ಖಚಿತ ಪಡಿಸಿಕೊಂಡಿದ್ದರು.
ಭದ್ರತಾ ನಿಯಮದ ಪ್ರಕಾರ ಅಂಗರಕ್ಷಕರು ಈ ರೀತಿ ವಿಐಪಿಗಳ ಜತೆ ಫೋಟೊ ತೆಗೆಸಿಕೊಳ್ಳುವಂತಿಲ್ಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಈ ಬಗ್ಗೆ ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಅವರಿಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಅಮಾನತು ಆದೇಶ ಹೊರಡಿಸಲಾಗಿದೆ.
ರಹೀಂ ಉಚ್ಚಿಲ್ ಅವರು ಬ್ಯಾರಿ ಅಕಾಡಮಿ ಅಧ್ಯಕ್ಷರಾಗಿದ್ದಾಗ 2012 ಮಾ.15ರಂದು ಅಕಾಡಮಿ ಕಚೇರಿಯಲ್ಲಿಯೇ ಅವರನ್ನು ಕೊಲೆ ಮಾಡಲು ಯತ್ನ ನಡೆದಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೆಟ್ ವತಿಯಿಂದ ರಕ್ಷಣೆಗೆ ಗನ್ಮ್ಯಾನ್ ಸೌಲಭ್ಯ ಒದಗಿಸಲಾಗಿತ್ತು. ಮಲ್ಲಿಕಾರ್ಜುನ ಗನ್ಮ್ಯಾನ್ ಆಗಿ ನೇಮಕಗೊಂಡಿದ್ದರು.
ನಿಯಮ ಉಲ್ಲಂಘನೆಗಾಗಿ ಅಮಾನತು ಶಿಕ್ಷೆ
ಗನ್ಮ್ಯಾನ್ ವ್ಯವಸ್ಥೆಗೆ ಸಂಬಂಧಿಸಿ ಅದರದೇ ಆದ ನಿಯಮಾವಳಿಗಳಿವೆ. ಅದರಂತೆ ಅವರು ವಿಐಪಿಗಳ ಜತೆ ಫೋಟೊ ತೆಗೆಸಿಕೊಳ್ಳುವಂತಿಲ್ಲ ಮತ್ತು ಅದನ್ನು ಜಾಲತಾಣಗಳಲ್ಲಿ ಹಾಕುವಂತಿಲ್ಲ. ನಿಯಮ ಉಲ್ಲಂಘನೆಯ ಜತೆಗೆ ಮೇಲಾಧಿಕಾರಿಗಳ ಅನುಮತಿ ಪಡೆಯದೆ ರಜೆ ಹಾಕಿರುವ ಕಾರಣ ಅಮಾನತು ಮಾಡಲಾಗಿದೆ. ರಹೀಂ ಉಚ್ಚಿಲ್ ಅವರಿಗೆ ಬೇರೆ ಗನ್ಮ್ಯಾನ್ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ.