ಶೋಷಿತ ಸಮುದಾಯ ಜಾಗೃತಗೊಳ್ಳಬೇಕಿದೆ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ

ಬೆಂಗಳೂರು, ಜು. 8: ಶೋಷಿತ ಸಮುದಾಯಗಳಲ್ಲಿ ಸರಿಯಾದ ಜಾಗೃತಿಯಿಲ್ಲದಿದ್ದರಿಂದಲೇ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಪರಶುರಾಮ್ ವಾಗ್ಮೋರೆಯಂತಹವರು ಹುಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸತ್ತಿಗೆ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಮಾಯಣ್ಣ ಸ್ವಾಮಿ ಕಿರಂಗೂರು ಅವರ ಕಂಡಾಯ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೋಷಿತ ಸಮುದಾಯಗಳಿಗೆ ಸರಿಯಾದ ಶಿಕ್ಷಣ ಸಿಗದೇ ಕೋಮುವಾದಿಗಳ ಕೈಗೆ ಬಲಿಯಾಗುತ್ತಿದ್ದಾರೆ ಎಂದರು.
ಗುಜರಾತ್ನಲ್ಲಿ ನಡೆದ ಗೋದ್ರಾ ನರಮೇಧ ಸೇರಿದಂತೆ ದೇಶದಲ್ಲಿ ನಡೆದ ಕೋಮುವಾದಿ, ಮೂಲಭೂತವಾದಿ ಕೃತ್ಯಗಳಲ್ಲಿ ಶೋಷಿತ ಸಮುದಾಯದವರೇ ಹೆಚ್ಚು ಬಲಿಯಾಗಿದ್ದಾರೆ. ಶೋಷಿತರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ಶೋಷಿತರು ಎಚ್ಚರಗೊಳ್ಳಬೇಕು. ಆನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ಡಾ.ಅಂಬೇಡ್ಕರ್ ಬರೆಯಲಿಲ್ಲ ಎಂದಿದ್ದರೆ, ಶೋಷಿತರಲ್ಲಿ ಇಂದಿನ ಕನಿಷ್ಠ ಜಾಗೃತಿಯೂ ಇರುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ವಿಚಾರಗಳನ್ನು ಹತ್ಯೆ ಮಾಡಲಾಗುತ್ತಿದೆ. ಈ ಮೂಲಕ ಅಂಬೇಡ್ಕರ್ ಅವರ ಬರಹಗಳನ್ನು ನಾಶ ಮಾಡುವ ವ್ಯವಸ್ಥಿತ ಹುನ್ನಾರ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಪ್ಪತ್ತು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಪುನರುತ್ಥಾನ ಗೊಳಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಅನೇಕ ಕೃತಿಗಳು ಹೊರಬಂದಿವೆ. ಇಂದಿನ ತಂತ್ರಜ್ಞಾನವನ್ನು ಬಳಕೆ ಮಾಡಿ, ನಿರ್ಲಕ್ಷಕ್ಕೊಳಪಟ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಇದನ್ನು ಮಾಡಲಾಗುತ್ತಿದೆ. ಹೀಗಾಗಿ, ಶೋಷಿತ ಸಮುದಾಯಗಳ ಕುರಿತು ಅಧ್ಯಯನ ಮತ್ತು ಸಂಶೋಧನೆ ಮುಂದಿಟ್ಟುಕೊಂಡು ವರ್ತಮಾನವನ್ನು ಅಳೆಯಬೇಕು ಎಂದು ಸಲಹೆ ನೀಡಿದರು. ಸಂಶೋಧನೆಗಳನ್ನು ಪಿಎಚ್ಡಿ ಪದವಿ ಪಡೆಯಲು ಅಗತ್ಯವಿರುವಷ್ಟಕ್ಕೇ ಸೀಮಿತ ಮಾಡಿಕೊಳ್ಳಲಾಗಿದೆ. ಆದರೆ, ಸಂಶೋಧನೆಗಳನ್ನು ಅಭ್ಯಾಸವಾಗಿ ಮಾಡಿಕೊಳ್ಳಬೇಕು. ಆ ಮೂಲಕ ಆಳವಾದ ಅಧ್ಯಯನದ ಮೂಲಕ ನಶಿಸಿ ಹೋಗಿರುವ ವಲಯಗಳ ಗುರುತಿಸಬೇಕಿದೆ. ಈ ನಿಟ್ಟಿನಲ್ಲಿ ಲೇಖಕ ಮಾಯಣ್ಣ ಸ್ವಾಮಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ವರ್ತಮಾನದಲ್ಲಿ ಉಸಿರಾಡುತ್ತಾ ಇಂದಿಗೂ ನಮ್ಮ ಹಿಂದಿನ ಪರಂಪರೆ ಜೀವಂತವಾಗಿದೆ. ಅದು ಎಲ್ಲಿಯೂ ನಿಲ್ಲದೇ ನಿರಂತರವಾಗಿ ಹರಿಯುತ್ತಿರುತ್ತದೆ. ಆದರೆ, ಅದನ್ನು ಚರಿತ್ರೆ ನಿರ್ದಿಷ್ಟವಾಗಿ ಗುರುತಿಸಲು ಆಗಿಲ್ಲ. ಹೀಗಾಗಿ, ನಮ್ಮ ಪರಂಪರೆ ಮೇಲೆ ಆಕ್ರಮಣ ಮಾಡಿದರೆ, ನಮ್ಮ ಸ್ವಹಿತಾಸಕ್ತಿಗಳ ಮೇಲೆ ಹೇರಿಕೊಂಡಂತೆ ಎಂದರು.
ಬಸವಣ್ಣರಿಗೆ ಬಿಜ್ಜಳ ರಾಜನ ಬೆಂಬಲ ಇಲ್ಲದಿದ್ದಿದ್ದರೆ ಅವರು ಸಂಘಟನೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಅದನ್ನು ಯಾವ ಇತಿಹಾಸಕಾರರು, ಸಾಹಿತಿ, ಸಂಶೋಧಕರು ತಿಳಿಸಿಲ್ಲ. ಈ ಸಮಾಜದಲ್ಲಿ ಸತ್ಯ ಹೇಳುವವರಿಗೆ ಕಾಲವಿಲ್ಲ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದುತ್ವ ಹೆಸರಿನಲ್ಲಿ ಆಕ್ರಮಣಗಳು ಹೆಚ್ಚುತ್ತಿವೆ. ಇದು ಇಂದಿನ ವರ್ತಮಾನದ ದುರಂತವಾಗಿದೆ ಎಂದು ಹೇಳಿದರು.
ಚರಿತ್ರೆಯನ್ನು ವೈದಕೀಕರಣ ಮಾಡುವ ವ್ಯವಸ್ಥಿತ ಹುನ್ನಾರ ಮಾಡಲಾಗುತ್ತಿದೆ ಎಂದ ಅವರು, ಭಾರತ ದೇಶಕ್ಕಿರುವುದು ಒಂದು ಧರ್ಮ ಮಾತ್ರ, ಅದು ಅಂಬೇಡ್ಕರ್ ನೀಡಿರುವ ಸಂವಿಧಾನವೇ ಧರ್ಮ ಗ್ರಂಥ. ಆದರೆ, ಇಂದಿನ 21 ಶತಮಾನದಲ್ಲಿ ಸಂವಿಧಾನವನ್ನು ವಿರೋಧಿಸುವವರು ಇದ್ದಾರೆ. ಅಂದರೆ, ದೇಶದಲ್ಲಿ ದಿನದಿಂದ ದಿನಕ್ಕೆ ವೈದಿಕತೆಯ ಶಕ್ತಿ ಹೆಚ್ಚು ಪ್ರಬಲವಾಗುತ್ತಿದೆ. ವೈದಿಕ ಸಮುದಾಯವನ್ನು ಶೋಷಿತ ಸಮುದಾಯ ನಿರ್ಲಕ್ಷಿಸಿಕೊಂಡು ಬಂದಿರುವುದೇ ಇದಕ್ಕೆ ಕಾರಣವಾಗಿದೆ. ಹೀಗಾಗಿ, ವೈದಕೀಕರಣದಿಂದ ಚರಿತ್ರೆಯನ್ನು ಶೋದಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಲೇಖಕ ಮಾಯಣ್ಣ ಸ್ವಾಮಿ ಕಿರಂಗೂರು ಉಪಸ್ಥಿತರಿದ್ದರು.







