ಎಟಿಎಂ ಪಿನ್ ನೀಡುವಂತೆ ‘ಬ್ಯಾಂಕ್ ಮೆನೇಜರ್’ನಿಂದ ಬ್ಲಾಕ್ಮೇಲ್ ಕರೆ
ಮೂಡುಬಿದಿರೆ, ಜು. 8: ಎಟಿಎಂ ಪಿನ್ ನೀಡುವಂತೆ ಗೌತಮ್ ಎಂಬ ಹೆಸರಿನ ಬ್ಯಾಂಕ್ ಮೆನೇಜರೊಬ್ಬರು ಅಶ್ವತ್ಥಪುರದ ಮಹಿಳೆಯೊರ್ವರಿಗೆ ಕರೆ ಮಾಡಿ ಪಿನ್ ನೀಡದಿದ್ದರೆ ಕಿಡ್ನಾಪ್ ಮಾಡುವುದಾಗಿ ಬ್ಲಾಕ್ಮೇಲ್ ಮಾಡಿದ ಘಟನೆ ರವಿವಾರ ನಡೆದಿದೆ.
ಕರೆ ಸ್ವೀಕರಿಸಿದ ಮಹಿಳೆ ಮೊದಲು ಆ ವ್ಯಕ್ತಿಯ ನಾಜೂಕಾದ ಮಾತನ್ನು ನಂಬಿ ಎಟಿಎಂನ ಕೆಲವು ನಂಬ್ರಗಳನ್ನು ಹೇಳುತ್ತಿರುವಷ್ಟರಲ್ಲಿ ಪತಿ ಬಂದು ಮೊಬೈಲ್ ಪಡೆದುಕೊಂಡು ಮಾತನಾಡತೊಡಗಿದರು.
‘ಇಂದು ರವಿವಾರವಲ್ಲ ಇವತ್ತೇನು ಕರೆ ?’ ಎಂದು ವಿಚಾರಿಸಿದಾಗ, ‘ ನಮಗೆ ಓವರ್ ಡ್ಯೂಟಿ ಉಂಟು’ ಎಂದನಂತೆ ಆ ಭೂಪ. ಅಷ್ಟರಲ್ಲಿ ಮಹಿಳೆ ತಮ್ಮ ಬ್ಯಾಂಕ್ ಮೆನೇಜರ್ಗೆ ಕರೆ ಮಾಡಿ ವಿಚಾರಿಸಿದಾಗ, ಇಂಥ ಕರೆಗಳಿಗೆ ಉತ್ತರಿಸಬೇಡಿ, ಜಾಗೃತೆಯಾಗಿರಿ’ ಎಂದು ಅವರು ಎಚ್ಚರಿಸಿ ಎಟಿಎಂ ಲಾಕ್ ಮಾಡಿದ್ದಾರೆ.
ಮತ್ತೆ ಆ ವ್ಯಕ್ತಿಗೆ ಕರೆ ಮಾಡಿದ ಮಹಿಳೆ ‘ನೀವು ನಂಬ್ರ ಕೇಳಿದಿರಲ್ಲ, ಬರಕ್ಕೊಳ್ಳಿ’ ಎಂದಾಗ ಆ ವ್ಯಕ್ತಿ ಬೇಗ ಬೇಗ ಹೇಳಿ ಎಂದು ಅವಸರ ಮಾಡಿದನಂತೆ. ಜತೆಗೆ ನೀವು ಸರಿಯಾಗಿ ಹೇಳದಿದ್ದರೆ ನಿಮ್ಮನ್ನು ಕಿಡ್ನಾಪ್ ಮಾಡುತ್ತೇನೆ ಎಂದು ಬೆದರಿಸಿದನಂತೆ. ಕೂಡಲೇ ಮಹಿಳೆ ಸಂಪರ್ಕ ಕಡಿತಗೊಳಿಸಿದರು. ವ್ಯಕ್ತಿಯ ಮೊಬೈಲ್ ನಂಬ್ರಕ್ಕೆ ಮತ್ತೆ ಬೇರೆಯವರು ಕರೆ ಮಾಡಿದಾಗ ಟ್ರೂ ಕಾಲರ್ನಲ್ಲಿ ಗೌತಂ ಎಂದು ಕಾಣಿಸುತ್ತಿತ್ತೆಂದು ತಿಳಿದುಬಂದಿದೆ. ಪೋನ್ ಮಾಡಿದ ವ್ಯಕ್ತಿಗೆ ಆ ಮಹಿಳೆ ಪೂರ್ಣ ನಂಬ್ರ ಹೇಳದೆ ಬಚಾವಾಗಿದ್ದಾರೆ.
ಇಷ್ಟಕ್ಕೂ ಈ ಪ್ರಕರಣದ ಬಗ್ಗೆ ನೀವು ಪೊಲೀಸ್ ಠಾಣೆಗೆ ದೂರು ನೀಡಬಹುದಿತ್ತಲ್ಲ ಎಂದರೆ, ಸದ್ರಿ ಮಹನೀಯರು ‘ಯಾರು ಮಹರಾಯರೇ ಕೇಸು ಕೋರ್ಟು ಅಂತ ಅಲೆದಾಡುವುದು ?’ ಎಂದು ದೂರು ನೀಡಲು ನಿರಾಸಕ್ತಿ ತೋರಿದ್ದಾರೆ.