ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆಗೆ ಯತ್ನ: ನಾಲ್ವರು ಆರೋಪಿಗಳ ಬಂಧನ
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಸಹಿತ 10 ಮಂದಿಯ ವಿರುದ್ಧ ಪ್ರಕರಣ

ಬಂಟ್ವಾಳ, ಜು.8: ವಿಟ್ಲ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ನಾಲ್ವರನ್ನು ವಿಟ್ಲ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಪ್ರವೀಣ್, ಗಣೇಶ್, ಅನೀಶ್ ಹಾಗೂ ಅಕ್ಷತ್ ಬಂಧಿತ ಆರೋಪಿಗಳು.
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಶ್ರೀಕೃಷ್ಣ, ಆತನ ಸಹೋದರ ಶ್ರೀಹರಿ ಸಹಿತ 10 ಮಂದಿಯ ವಿರುದ್ಧ ಪೊಲೀಸರ ಮೇಲೆ ಹಲ್ಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಪೊಲೀಸ್ ಠಾಣಾ ಸಿಬ್ಬಂದಿ ಪ್ರಸನ್ನ ಕುಮಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ವಿಟ್ಲ ಠಾಣೆಯ ಪೊಲೀಸ್ ಸಿಬ್ಬಂದಿ ಅಶೋಕ್ ಎಸ್., ಪ್ರಸನ್ನ ಕುಮಾರ್ ಮತ್ತು ಜಯಂತ ಶನಿವಾರ ರಾತ್ರಿ 12:30ರ ಸುಮಾರಿಗೆ ಗಸ್ತು ತಿರುಗುತ್ತಿದ್ದಾಗ ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಶ್ರೀ ಕೃಷ್ಣ ಸಹಿತ 10 ಮಂದಿಯಿದ್ದ ತಂಡ ಮದ್ಯಪಾನ ಹಾಗು ಧೂಮಪಾನ ಮಾಡುತ್ತಾ ಬೊಬ್ಬೆ ಹಾಕಿ ಮೋಜು ಮಸ್ತಿಯಲ್ಲಿ ತೊಡಗಿತ್ತೆನ್ನಲಾಗಿದೆ. ತಡರಾತ್ರಿಯಲ್ಲಿ ಸಾರ್ವಜನಿಕ ಸ್ಥಳದಿಂದ ಜಾಗ ತೆರವುಗೊಳಿಸುವಂತೆ ಪೊಲೀಸರು ಸೂಚಿಸಿದರು. ಆದರೆ ಇದಕ್ಕೆ ಕ್ಯಾರೇ ಎನ್ನದ ತಂಡದಲ್ಲಿದ್ದ ವ್ಯಕ್ತಿಯೊಬ್ಬ ಸಿಗರೇಟು ಹೊಗೆಯನ್ನು ಪೊಲೀಸ್ ಸಿಬ್ಬಂದಿ ಮುಖಕ್ಕೆ ಊದಿ ಗದರಿಸಿದನೆನ್ನಲಾಗಿದೆ. ಈ ವೇಳೆ ಘಟನೆಯ ಚಿತ್ರೀಕರಣ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ಅಶೋಕ್ ಅವರ ಮೊಬೈಲ್ ಫೋನನ್ನು ಗುಂಪಿನಲ್ಲಿದ್ದ ಮತ್ತೋರ್ವ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿ ಪಡಿಸಿದನೆನ್ನಲಾಗಿದೆ. ತಂಡದಲ್ಲಿದ್ದವರು ಹಲ್ಲೆಗೂ ಮುಂದಾಗಿದ್ದಾರೆಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣದ ಗಂಭೀರತೆಯನ್ನು ಅರಿತು ಠಾಣೆಯಿಂದ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಳ್ಳುತ್ತಿದ್ದಂತೆ ತಂಡದವರು ಪೊಲೀಸರ ಕೈಯಿಂದ ಕಸಿದುಕೊಂಡ ಮೊಬೈಲ್ ಅನ್ನು ಅಲ್ಲೇ ಎಸೆದು, ಕಾರು, ರಿಕ್ಷಾ, ಬೈಕ್ ಮೂಲಕ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಓರ್ವ ವಿಟ್ಲ ಪಟ್ಟಣ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯನಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ಘಟನೆಯ ಬಗ್ಗೆ ಜಿಲ್ಲಾ ಎಸ್ಪಿ ರವಿಕಾಂತೇಗೌಡು ಮಾಹಿತಿ ನೀಡಿದ್ದಾರೆ.