ನೇಕಾರರ ಕಡೆಗಣನೆ: ಮಹಾಸಭಾ ಆಕ್ರೋಶ
ಬೆಂಗಳೂರು, ಜು.9: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ನಲ್ಲಿ ರೈತರ ಸಾಲಮನ್ನಾ ಸ್ವಾಗತಾರ್ಹವಾದರೂ, ನೇಕಾರ ಸಮುದಾಯವನ್ನು ಕಡೆಗಣಿಸಿರುವುದು ಖಂಡನೀಯ ಎಂದು ರಾಜ್ಯ ನೇಕಾರ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಬಿ.ಎಸ್.ಸೋಮಶೇಖರ್, ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿರುವುದು ಶ್ಲಾಘನೀಯ. ಅದನ್ನು ಸಂಘವು ಸ್ವಾಗತಿಸುತ್ತದೆ. ಆದರೆ, ಇದೇ ಸಂದರ್ಭದಲ್ಲಿ ನೇಕಾರರ ಸಾಲ ಮನ್ನಾಮಾಡುವ ಭರವಸೆಯನ್ನು ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನು ಮಾಡದಿರುವುದು ಎಷ್ಟು ಸರಿ ಎಂದರು.
ರೈತರು ಹಾಗೂ ನೇಕಾರರು ತನ್ನ ಎರಡು ಕಣ್ಣುಗಳು ಇದ್ದಂತೆ ಎಂದು ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಇದೀಗ ಬಜೆಟ್ನಲ್ಲಿ ನಮ್ಮ ಸಾಲ ಮನ್ನಾದ ಬಗ್ಗೆ ಯಾವುದೇ ಪ್ರಸ್ತಾಪ ಮಂಡಿಸದೇ ನಿರ್ಲಕ್ಷಿಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರೈತರ ಮತ್ತು ನೇಕಾರರ ಮೇಲಿನ ಒಂದು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವ ಕುರಿತು ಘೋಷಣೆ ಮಾಡಿದ್ದರು. ಆದರೆ, ಕುಮಾರಸ್ವಾಮಿ ನೇಕಾರ ಸಮುದಾಯದ ಅಸ್ತಿತ್ವವನ್ನೇ ಮರೆತವರಂತೆ ವರ್ತಿಸುವ ಮೂಲಕ ನಮ್ಮನ್ನು ಅವಮಾನಿಸಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ನಮ್ಮವರಿದ್ದು, 50 ಲಕ್ಷದಷ್ಟು ಜನಸಂಖ್ಯೆಯುಳ್ಳ ನೇಕಾರ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದರು.
ನೇಕಾರರ ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ರಾಜ್ಯಾದ್ಯಂತ 200 ಕೋಟಿ ರೂ.ಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ನೇಕಾರರ ಸಾಲವಿದೆ. ಸಮ್ಮಿಶ್ರ ಸರಕಾರಕ್ಕೆ ನೇಕಾರ ಸಮುದಾಯಕ್ಕೆ ಉತ್ತೇಜನ ನೀಡಬೇಕು ಎಂಬ ಮನಸ್ಸಿದ್ದರೆ ಮುಂದಿನ ಒಂದು ವಾರದೊಳಗೆ ನಮ್ಮ ಮನವಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.







