ಬೆಳ್ತಂಗಡಿ: ಚಲಿಸುತ್ತಿದ್ದ ಲಾರಿಯ ಮೇಲೆ ಮರ ಬಿದ್ದು ಸಂಚಾರದಲ್ಲಿ ವ್ಯತ್ಯಯ

ಬೆಳ್ತಂಗಡಿ, ಜು. 9: ತಾಲೂಕಿನಲ್ಲಿ ಸೋಮವಾರವೂ ಮುಂದುವರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಮರಗಳು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದ್ದು, ನೆರಿಯದಲ್ಲಿ ದನದ ಕೊಟ್ಟಿಗೆ ಧರಾಶಾಹಿಯಾಗಿದೆ. ನಗರದಲ್ಲಿ ಮಳೆಯಿಂದ ಜನ ವಿರಳವಾಗಿತ್ತು. ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಸೋಮವಾರವೂ ತಾಲೂಕಿನ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಮಂಗಳೂರು-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಸಮೀಪದ ಟಿ.ಬಿ. ಕ್ರಾಸ್ ಎಂಬಲ್ಲಿ ಚಲಿಸುತ್ತಿದ್ದ ಲಾರಿಯ ಮೇಲೆ ಮರ ಬಿದ್ದು ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆ ಸಂಚಾರದಲ್ಲಿ ವ್ಯತ್ಯಯವಾಯಿತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದ ಕಾರಣ ಎರಡು ಕಡೆಯಿಂದಲೂ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಮರವನ್ನು ತೆರವು ಗೊಳಿಸಿದ ಸಾರ್ವಜನಿಕರು ವಾಹನ ಸಂಚಾರಕ್ಕೆ ಮತ್ತೆ ಅನುವು ಮಾಡಿ ಕೊಟ್ಟರು. ಲಾರಿ ಮೇಲೆ ಮರ ಬಿದ್ದ ಸ್ಥಳದಲ್ಲೇ ತೆರವು ಮಾಡಿದ ಒಂದು ಗಂಟೆಯ ಬಳಿಕ ಮತ್ತೆ ಮರವೊಂದು ರಸ್ತೆಗೆ ಬಿದ್ದಿದೆ. ಅದನ್ನೂ ಸಾರ್ವಜನಿಕರೇ ತೆರವು ಮಾಡಿ ವಾಹನ ಸಂಚಾರಕ್ಕೆ ಮುಕ್ತವಾಗಿಸಿದ್ದಾರೆ. ಕಕ್ಕಿಂಜೆ ಶಾಲೆಯ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಮರ ಉರುಳಿ ಬಿದ್ದು ಸುಮಾರು ಒಂದುಗಂಟೆಯ ಕಾಲ ವಾಹನ ಸಂಚಾರ ಅಸ್ತ್ಯವ್ಯಸ್ತಗೊಂಡಿದ್ದು ಸಾರ್ವಜನಿಕರು ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ನೆರಿಯ ಗ್ರಾಮದ ಬಾಂದಡ್ಕದ ಸದಾಶಿವ ಎಂಬವರ ತಗಡಿನ ಶೀಟಿನಿಂದ ಮಾಡಲಾಗಿದ್ದ ದನದ ಹಟ್ಟಿ ಕುಸಿದಿದೆ. ಅದರೊಳಗಿದ್ದ ನಗಳಿಗೆ ಚಿಕ್ಕಪುಟ್ಟ ಗಾಯವಾಗಿದೆ.