ಅಡ್ಯಾರ್ ಪದವು: ಕಲ್ಲಿನ ಕೋರೆ ಮುಚ್ಚಿಸಲು ಒತ್ತಾಯಿಸಿ ಪ್ರತಿಭಟನೆ

ಮಂಗಳೂರು, ಜು.10: ಈಜಲು ತೆರಳಿದ್ದ ಬಾಲಕನೊಬ್ಬ ಕಲ್ಲಿನ ಕೋರೆಯಲ್ಲಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಅಡ್ಯಾರ್ ಪದವಿನ ಸಾರ್ವಜನಿಕರು ಮಂಗಳವಾರ ಬೆಳಗ್ಗೆ ಕಲ್ಲಿನ ಕೋರೆಯನ್ನು ಮುಚ್ಚುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೆ ಈ ಕಲ್ಲಿನ ಕೋರೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಇದೀಗ ಹಸನಬ್ಬ ಅವರ ಪುತ್ರ 13ರ ಹರೆಯದ ಮುಹಮ್ಮದ್ ತಮೀಮ್ ಕೂಡ ಕಲ್ಲಿನ ಕೋರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಕಲ್ಲಿನ ಕೋರೆಯನ್ನು ಮುಚ್ಚಿಸದಿದ್ದರೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಶೀಘ್ರ ಇದನ್ನು ಮುಚ್ಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಅಲ್ಲದೆ, ಮಂಗಳೂರು ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಅದರಂತೆ ತಹಶೀಲ್ದಾರ್ ಆಗಮಿಸಿ ಕಲ್ಲಿನ ಕೋರೆ ಮುಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸ್ಥಳೀಯ ಪ್ರಮುಖರಾದ ನವಾಝ್ ಸಖಾಫಿ, ಅಶೋಕ್ ಸುವರ್ಣ ಕಲ್ಲಿನ ಕೋರೆಯ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಪ್ರತಿಮಾ, ಸದಸ್ಯರಾದ ಕೃಷ್ಣಪೂಜಾರಿ, ಸುಂದರ, ಯಾಕೂಬ್ ಮತ್ತಿತರರು ಪಾಲ್ಗೊಂಡಿದ್ದರು.