ಜು.13: ದ.ಕ., ಉಡುಪಿ ಚಿತ್ರ ಮಂದಿರದಲ್ಲಿ ‘ಪಡ್ಡಾಯಿ’ ಚಲನಚಿತ್ರ ಪ್ರದರ್ಶನ

ಮಂಗಳೂರು, ಜು.10: ರಾಷ್ಟ್ರಮಟ್ಟದಲ್ಲಿ ಚಲನಚಿತ್ರ ಪ್ರಶಸ್ತಿ ಪಡೆದ ತುಳು ಭಾಷೆಯ 100 ನಿಮಿಷ ಸಮಯದ ಚಲನಚಿತ್ರ ‘ಪಡ್ಡಾಯಿ’ ಜುಲೈ 13ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಚಲನನಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಚಲನ ಚಿತ್ರದ ನಿರ್ದೇಶಕ ಅಭಯ ಸಿಂಹ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪ್ರಸಿದ್ಧ ಆಂಗ್ಲ ಭಾಷಾ ನಾಟಕಕಾರ ಶೇಕ್ಸ್ ಪಿಯರ್ ರಚಿಸಿದ ಮ್ಯಾಕ್ಭೆತ್ ನಾಟಕದ ಕಥೆಯನ್ನಾಧರಿಸಿದ ತುಳು ಭಾಷೆಯಲ್ಲಿ ಅಳವಡಿಸಲಾದ ಚಲನಚಿತ್ರ ಪಡ್ಡಾಯಿ ಮಲ್ಪೆಯ ಕಡಲ ತೀರದ ಮೀನುಗಾರರ ಬದುಕಿನ ಸುತ್ತ ನಡೆಯುವ ಕಥೆಯಾಗಿದೆ. ಮಾಧವ ಹಾಗೂ ಸುಗಂಧಿಯವರ ಉತ್ಕಟ ಪ್ರೇಮದೊಂದಿಗೆ ಆರಂಭವಾಗುವ ತಮ್ಮ ಉಜ್ವಲ ಬದುಕಿನ ಕನಸುಗಳನ್ನು ಶ್ರೀಮಂತಿಕೆಯ ಕನಸು ಕಾಣುತ್ತಿರುವ ಈ ಜೋಡಿಗೆ ಅವರ ದೋಣಿಗಳ ಮಾಲಕ ದೀನೇಶಣ್ಣನ ಪ್ರೀತಿ ಬೆಂಬಲಗಳಿವೆ. ಅವರ ಕೃಪೆಯಿಂದ ಸ್ವಂತ ದೋಣಿ ಹೊಸ ಮನೆ ಇತ್ಯಾದಿ ಸಿಗುತ್ತಿದ್ದಂತೆ ಇನ್ನಷ್ಟು ಆಸೆ ಹುಟ್ಟುತ್ತದೆ. ಮಾಧವ -ಸುಗಂಧಿಯವರ ಬದುಕಿನಲ್ಲಿ ಇಂತಹ ಘಟನೆಗಳೇ ನಡೆಯುತ್ತದೆ. ಭವಿಷ್ಯದ ಉಜ್ಜಲ ಬೆಳಕಿನ ಹಾದಿಗೆ ಬೆನ್ನು ತಿರುಗಿಸಿ ಕತ್ತಲ ಮಾರ್ಗದಲ್ಲಿ ಈ ಜೋಡಿ ಕ್ರಮಿಸುತ್ತದೆ. ಕೊಲೆ, ಸುಳ್ಳು, ಭಯ, ಪಶ್ಚಾತ್ತಾಪ, ದುರಾಸೆಗಳ ಪರಿಧಿಯಲ್ಲಿ ಸುಳಿದಾಡುವ ಚಲನಚಿತ್ರ ಆಧುನಿಕ ಬದುಕಿನ ತಲ್ಲಣಗಳ ಚಿತ್ರಣ ನೀಡುತ್ತದೆ. ನೈತಿಕ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ ಎಂದು ಅಭಯ ಸಿಂಹ ತಿಳಿಸಿದರು. ಬಹಳ ಮುಖ್ಯವಾಗಿ ಕರಾವಳಿಯ ಬದುಕಿನ ಸಾಹಸಮಯ ಸನ್ನಿವೇಶದ ಚಿತ್ರಣದೊಂದಿದೆಗೆ ಕಥೆ ಪ್ರಾದೇಶಿಕ ಸೊಗಡನ್ನು ಉಳಿಸಿಕೊಂಡು ಸಮರ್ಥ ಸಂಗೀತ ಸಂಯೋಜನೆಯೊಂದಿಗೆ ಪಡ್ಡಾಯಿ ನಿರ್ಮಾಣಗೊಂಡಿದೆ ಎಂದು ಅಭಯ ಸಿಂಹ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ನಿತ್ಯಾನಂದ ಪೈ. ಛಾಯಾಗ್ರಾಹಕ ವಿಷ್ಣು ಪ್ರಸಾದ್,ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್, ಧ್ವನಿ ನಿರ್ವಹಣೆ ಮಾಡಿದ ಜೇಮಿ.ಡಿ ಸಿಲ್ವ, ನಿರ್ಮಾಣ ನಿರ್ವಹಣೆ ಮಾಡಿದ ರಾಜೇಶ್ ಕುಡ್ಲ, ಕಲಾವಿದರಾದ ಮೋಹನ್ ಶೇಣಿ, ಬಿಂದು ರಕ್ಷಿದಿ, ಚಂದ್ರಹಾಸ ಉಳ್ಳಾಲ, ರವಿಭಟ್, ಗೋಪಿನಾಥ್ ಭಟ್ ಮೊದಲಾದವರು ಉಪಸ್ಥಿತರಿದ್ದರು.