ಮಂಗಳೂರು ಮಹಾನಗರ ಪಾಲಿಕೆಯಲ್ಲಿ 26.41 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿ
ಮೇಯರ್ರಿಂದ ಕಾಮಗಾರಿಗಳ ಪರಿಶೀಲನೆ

ಮಂಗಳೂರು, ಜು.11: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ಕಾಂಕ್ರಿಟೀಕರಣ, ಸೇತುವೆ ನಿರ್ಮಾಣ, ಫುಟ್ಪಾತ್ ಅಭಿವೃದ್ಧಿ ಸೇರಿದಂತೆ 2,641.15 ಲಕ್ಷ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮೇಯರ್ ಭಾಸ್ಕರ ಮೊಯ್ಲಿಯವರನ್ನೊಳಗೊಂಡ ತಂಡ ಇಂದು ಕಾಮಗಾರಿಗಳ ಪರಿಶೀಲನೆ ನಡೆಸಿತು.
ಉಪ ಮೇಯರ್ ಮುಹಮ್ಮದ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ಮುಖ್ಯಸಚೇತಕ ಶಶಿಧರ ಹೆಗ್ಡೆ, ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಆಯುಕ್ತ ಮುಹಮ್ಮದ್ ನಝೀರ್ ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ನಗರದ ವಿವಿಧ ಕಡೆಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿತು.
ವಾಮಂಜೂರು- ಬೊಂದೇಲ್ ಸಂಪರ್ಕ ರಸ್ತೆ ಅಗಲೀಕರಣ
ವಾಮಂಜೂರಿನಿಂದ ಬೊಂದೇಲ್ ಮೂಲಕ ಮಂಗಳೂರನ್ನು ಸಂಪರ್ಕಿಸುವ ಸುಮಾರು ನಾಲ್ಕು ಕಿ.ಮೀ. ಉದ್ದದ ರಸ್ತೆಯನ್ನು ಅಗಲೀಕರಣಗೊಳಿಸಿ, ಹಲೆವೆಡೆ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪಚ್ಚನಾಡಿ ಘನತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾಪ್ರದೇಶಕ್ಕೆ ಹೋಗುವ ಮುಖ್ಯ ರಸ್ತೆಯಿಂದ ಬೊಂದೇಲ್ವರೆಗಿನ ರಸ್ತೆ 11 ಮೀಟರ್ ಅಗಲೀಕರಣಗೊಂಡಿದೆ. ಪಚ್ಚನಾಡಿ ಸೇತುವೆ ನಿರ್ಮಾಣ ಕಾಮಗಾರಿ ಸೇರಿದಂತೆ ಈಗಾಗಲೇ 3.69 ಕೋಟಿ ರೂ.ಗಳಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ರಸ್ತೆಯ ಸಂಪೂರ್ಣ ಅಭಿವೃದ್ಧಿಗೆ ಹೆಚ್ಚುವರಿ 3.5 ಕೋಟಿ ರೂ.ಗಳ ಅಗತ್ಯವಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ತಿಳಿಸಿದರು.
ಗುರುಪುರದಿಂದ ವಾಮಂಜೂರು ಮಾರ್ಗವಾಗಿ ಮಂಗಳೂರಿಗೆ ಸೇರಲು ಇದು ಹತ್ತಿರ ರಸ್ತೆಯಾಗಿದ್ದು, ಈ ರಸ್ತೆ ಇನ್ನಷ್ಟು ಅಭಿವೃದ್ಧಿಯಾದಲ್ಲಿ, ಮಂಗಳೂರಿಗೆ ಪರ್ಯಾಯ ರಸ್ತೆಯಾಗಿ ಬಳಕೆಯಾಗಲಿದೆ. ಮಾತ್ರವಲ್ಲದೆ ಇದರಿಂದ ಗುರುಪುರ- ವಾಮಂಜೂರು- ಬಿಕರ್ನಕಟ್ಟೆ- ನಂತೂರು ಮಾರ್ಗದಲ್ಲಿನ ವಾಹನ ದಟ್ಟಣೆ ಸಾಕಷ್ಟು ಕಡಿಮೆಯಾಗಿ ಸುಗಮ ಸಂಚಾರಕ್ಕೆ ಸಹಕಾರಿಯಾಗಲಿದೆ.
ದಾಖಲೆ ಅವಧಿಯಲ್ಲಿ ನಿರ್ಮಾಣಗೊಂಡ ಸೇತುವೆ
ಪಚ್ಚನಾಡಿ ಬಳಿ ನಿರ್ಮಿಸಲಾಗಿರುವ ಸೇತುವೆ 12 ಮೀಟರ್ ಅಗಲವಾಗಿದ್ದು, ಇದು ಎರಡು ತಿಂಗಳ ದಾಖಲೆ ಅವಧಿಯಲ್ಲಿ ನಿರ್ಮಾಣಗೊಂಡು ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತಗೊಂಡಿದೆ. 150 ಲಕ್ಷ ರೂ.ಗಳಲ್ಲಿ ಈ ಸೇತುವೆ ನಿರ್ಮಾಣವಾಗಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ತಿಳಿಸಿದರು.
ಅಮೃತ್ ಯೋಜನೆಯಡಿ ಕದ್ರಿ ಪಾರ್ಕ್ ಅಭಿವೃದ್ಧಿ
ಕದ್ರಿ ಪಾರ್ಕ್ನಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಸಾರ್ವಜನಿಕ ಶೌಚಾಲಯವನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಮೇಯರ್ ಭಾಸ್ಕರ ಮೊಯ್ಲಿ, ಕದ್ರಿ ಪಾರ್ಕ್ನಲ್ಲಿ ಅಮೃತ ಯೋಜನೆಯಡಿ 1.16 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದಾಗಿ ಹೇಳಿದರು. ಪಾರ್ಕ್ನಲ್ಲಿ ತೆರೆದ ಜಿಮ್, ನಡೆದಾಡುವ ಪಥ(ವಾಕಿಂಗ್ ಟ್ರಾಕ್)ದಲ್ಲಿ ಎದ್ದು ಹೋಗಿರುವ ಇಂಟರ್ಲಾಕ್ಗಳ ಮರು ಜೋಡಣೆ, ಬದಿಯಲ್ಲಿ ಮಣ್ಣಿನ ಟ್ರಾಕ್ ನಿರ್ಮಾಣ, ವಿಶೇಷ ಮಕ್ಕಳಿಗೆ ಅನುಕೂಲವಾಗುವ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಅವರು ವಿವರಿಸಿದರು.
ಫುಟ್ಪಾತ್ನಲ್ಲಿ ಹಸಿರೀಕರಣ!
ಬಳ್ಳಾಲ್ಬಾಗ್ನಿಂದ ದುರ್ಗಾ ಮಹಲ್ವರೆಗಿನ 680 ಮೀಟರ್ ಉದ್ದದ ರಸ್ತೆ ಅಗಲೀಕರಣ ಮತ್ತು ಚರಂಡಿ ಹಾಗೂ ಫುಟ್ಪಾತನ್ನು 117 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ರಸ್ತೆಯ ಫುಟ್ಪಾತನ್ನು ಸುಂದರಗೊಳಿಸಲಾಗಿದ್ದು, ಜತೆಯಲ್ಲೇ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಟ್ಟು ಹಸರೀಕರಣಗೊಳಿಸುವ ಪ್ರಯತ್ನ ಮಾಡಲಾಗಿದೆ. ಇದೇ ವೇಳೆ ಮಿಶನ್ಗೋರಿ ರಸ್ತೆಯ ಸುಮಾರು 600 ಮೀಟರ್ನಷ್ಟು ರಸ್ತೆ ಅಗಲೀಕರಣ ಹಾಗೂ ಪೂರಕ ಕಾಮಗಾರಿಗಳನ್ನು 70 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಪಡೀಲ್- ಬಜಾಲ್ ರಸ್ತೆ ಅಗಲೀಕರಣ
ಪಡೀಲ್-ಬಜಾಲ್ ರಸ್ತೆಯು ಬಜಾಲ್ ಕಾನ್ವೆಂಟ್ನಿಂದ ಬೊಳ್ಳ ರಸ್ತೆಯವರೆಗೆ 148.42 ಲಕ್ಷ ರೂ. ವೆಚ್ಚದಲ್ಲಿ ಅಗಲೀಕರಣಗೊಳಿಸಲಾಗುತ್ತಿದ್ದು, ಪಡೀಲ್ನಿಂದ ಜಪ್ಪಿನಮೊಗರು ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ.
ಕಂಕನಾಡಿ ರೈಲ್ವೇ ನಿಲ್ದಾಣ ರಸ್ತೆ ಅಗಲೀಕರಣ
ಕಂಕನಾಡಿ ರೈಲ್ವೇ ನಿಲ್ದಾಣ ರಸ್ತೆಯನ್ನು 205 ಲಕ್ಷ ರೂ. ವೆಚ್ಚದಲ್ಲಿ ಅಗಲೀಕರಣಗೊಳಿಸಲಾಗುತ್ತಿದ್ದು, ಅದರ ಜತೆ ಪೂರಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪಕ್ಕಲಡ್ಕ ಕೆಎಚ್ಬಿ ಮೈದಾನದ ಬಳಿ ತಲಾ 7 ಲಕ್ಷ ರೂ. ವೆಚ್ಚದಲ್ಲಿ ಎರಡು ಇ ಟಾಯ್ಲೆಟ್ ನಿರ್ಮಾಣ ಮಾಡಲಾಗಿದೆ. ಪಂಪ್ವೆಲ್ ಜಂಕ್ಷನ್ನಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ, ಜೆಪ್ಪು ಕುಡ್ಪಾಡಿ ರಸ್ತೆ ಅಗಲೀಕರಣ ಹಾಗೂ ಪೂರಕ ಕಾಮಗಾರಿಗಳು 43.27 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಎಸ್.ಎಲ್. ಮಥಾಯಿಸ್ ರಸ್ತೆ ಅಗಲೀಕರಣ ಮತ್ತು ಚರಂಡಿ, ಫುಟ್ಪಾತ್ ಅಭಿವೃದ್ಧಿ 442.56 ಲಕ್ಷ ರೂ., ಬಲ್ಮಠ ವೃತ್ತದಿಂದ ಅಪ್ಪರ್ ಬೆಂದೂರು ರಸ್ತೆ ಅಗಲೀಕರಣ ಮತ್ತು ಚರಂಡಿ, ಫುಟ್ಪಾತ್ ನಿರ್ಮಾಣವನ್ನು 250 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ಹೇಳಿದರು.
ವಿವಿಧ ವಾರ್ಡ್ಗಳಿಗೆ ಸಂಬಂಧಿಸಿದ ಕಾಮಗಾರಿಗಳ ವೀಕ್ಷಣೆಯ ಸಂದರ್ಭ ಸ್ಥಳೀಯ ಕಾರ್ಪೊರೇಟರ್ಗಳಾದ ಜಯಂತಿ ಆಚಾರ್, ರೂಪಾ ಡಿ. ಬಂಗೇರ, ಜೆಸಿಂತಾ ವಿಜಯಾ ಆಲ್ಫ್ರೆಡ್ ಮೊದಲಾದವರು ಉಪಸ್ಥಿತರಿದ್ದರು.
ಕಂಕನಾಡಿ - ಕೋಟಿ ಚನ್ನಯ ವೃತ್ತ ಮಾದರಿ ರಸ್ತೆಯಾಗಿ ಅಭಿವೃದ್ಧಿ
ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ನಂದಿಗುಡ್ಡ (ಕೋಟಿ-ಚನ್ನಯ ವೃತ್ತ)ವರೆಗಿನ ರಸ್ತೆ ಅಗಲೀಕರಣದೊಂದಿಗೆ ಮಾದರಿ ರಸ್ತೆಯನ್ನಾಗಿ ರೂಪಿಸಲಾಗುತ್ತಿದೆ. ಈ ರಸ್ತೆಯಲ್ಲಿ ಈಗಾಗಲೇ ವಿಶೇಷ ವಿನ್ಯಾಸದೊಂದಿಗೆ ಡಿವೈಡರ್ಗಳನ್ನು ಅಳವಡಿಸಿ ಅದರಲ್ಲಿ ಪೊನಿಕಲ್ ಪೋಲ್ಸ್ ಇಲೆಕ್ಟ್ರಿಕಲ್ ಲೈಟ್ಸ್ಗಳನ್ನು ಅಳವಡಿಸಲಾಗಿದೆ. ಬೆಳಗಾವಿಯ ರಸ್ತೆಯ ಮಾದರಿಯಲ್ಲಿ ಈ ರಸ್ತೆ ಅಭಿವೃದ್ಧಿಪಡಿಸಲಾಗಿದ್ದು, ಈ ರಸ್ತೆಯುದ್ದಕ್ಕೂ 48 ವಿಶೇಷ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಈ ಕಂಬಗಳ ಮಧ್ಯದಲ್ಲಿ ಬಹುವರ್ಣದ ದೀಪಗಳನ್ನು ಅಳವಡಿಸಲಾಗಿದ್ದು, ಸುಮಾರು 90 ಲಕ್ಷ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಲಾಗಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ಹೇಳಿದರು.
ಹೈಜಿನಿಕ್ ಆಗಲಿದೆ ಮನಪಾ ಈಜುಕೊಳ!
ಮಂಗಳೂರು ಮಹಾ ನಗರ ಪಾಲಿಕೆಯ ಮಂಗಳಾ ಈಜುಕೊಳ ನವೀಕರಣಗೊಳ್ಳುತ್ತಿದ್ದು, ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಈಜುಕೊಳದ ನೀರಿನ ಶುದ್ಧೀಕರಣಕ್ಕೆ ಅತ್ಯಾಧುನಿಕ ಮಾದರಿಯ ಓರೆನಿಕ್ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಈಜುಕೊಳದ ಬಳಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಿರ್ಮಾಣಗೊಂಡ ಸುಸಜ್ಜಿತ ಬಾತ್ರೂಂ, ಶೌಚಾಲಯವನ್ನು ವೀಕ್ಷಿಸಿದ ಮೇಯರ್ ಭಾಸ್ಕರ ಮೊಯ್ಲಿ ಅವರು ಈ ವಿಷಯ ತಿಳಿಸಿದರು.
ಮಂಗಳಾ ಈಜುಕೊಳದಲ್ಲಿ ನೀರಿನ ಶುದ್ಧತೆಗೆ ವಿಶೇಷ ಮುತುವರ್ಜಿ ವಹಿಸಲಾಗುತ್ತಿದೆ. ಇದಕ್ಕಾಗಿ ಇದೀಗ ಹೊಸತಾಗಿ ಓರೆನಿಕ್ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ. ಕಳೆದ 30 ವರ್ಷಗಳಿಂದ ಬೃಹತ್ ಫಿಲ್ಟರ್ ವ್ಯವಸ್ಥೆ ಹಾಗೂ ಕ್ಲೋರಿನ್ ಬಳಸಿ ನೀರು ಶುದ್ಧೀಕರಣ ಮಾಡಲಾಗುತ್ತಿದೆ. ಹಳೆ ವ್ಯವಸ್ಥೆ ಬದಲು ಆಧುನಿಕ ರೀತಿಯ ಓರೆನಿಕ್ ವ್ಯವಸ್ಥೆ ಅಳವಡಿಸಿ ಈಜುಕೊಳವನ್ನು ಆರೋಗ್ಯಕರವನ್ನಾಗಿಸಲು ತೀರ್ಮಾನಿಸಲಾಗಿದೆ. ಓರೆನಿಕ್ ವ್ಯವಸ್ಥೆಯಿಂದ ಶುದ್ಧೀಕರಣವಾದ ನೀರು ಪ್ರಬಲ ರೋಗ ನಿರೋಧಕ ಶಕ್ತಿ ಹೊಂದಿದ್ದು, ಯಾವುದೇ ಅಂಟುರೋಗ ಹರಡುವುದನ್ನು ಸಂಪೂರ್ಣ ತಡೆಯುತ್ತದೆ. ನೀರಿನಲ್ಲಿರುವ ಕಲ್ಮಶ, ವೈರಸ್ ಸಂಪೂರ್ಣ ನಾಶವಾಗಲಿದ್ದು, ಕಣ್ಣು ಮತ್ತು ಚರ್ಮಕ್ಕೆ ಈ ನೀರು ಅತ್ಯಂತ ಸುರಕ್ಷಿತವಾಗಿದೆ ಎಂದು ಆಯುಕ್ತ ಮುಹಮ್ಮದ್ ನಝೀರ್ ಮಾಹಿತಿ ನೀಡಿದರು.