ನಿಲುಗಡೆ ಇಲ್ಲದ ಹಮ್ ಸಫರ್ ರೈಲು; ಉಡುಪಿ ರೈಲ್ವೆ ಯಾತ್ರಿ ಸಂಘ ಆಕ್ರೋಶ
ಉಡುಪಿ, ಜು.12: ಈ ತಿಂಗಳ ಮೊದಲ ವಾರ ಪ್ರಾರಂಭಗೊಂಡ ನಂ.19 04/19423 ಗಾಂಧಿಧಾಮ್-ತಿರುವನ್ವೇಲಿ ಹಮ್ ಸಫರ್ ವಾರಕ್ಕೊಮ್ಮೆ ಚಲಿಸುವ ರೈಲಿನ ವೇಳಾಪಟ್ಟಿಯ ಪುಸ್ತಕದ ಪ್ರಕಾರ ಉಡುಪಿಯಲ್ಲಿ ಈ ರೈಲು ಸಂಜೆ 5:40ಕ್ಕೆ ನಿಲ್ಲಬೇಕಾಗಿದೆ. ಆದರೆ ಈಗ ಈ ರೈಲು ಉಡುಪಿಯಲ್ಲಿ ನಿಲುಗಡೆಯಾಗದೆ ಚಲಿಸುತ್ತಿದ್ದು ಈ ಬಗ್ಗೆ ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್ ಎಲ್ ಡಾಯಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಶ್ರೀಕೃಷ್ಣ ಮಠವಿದ್ದು ಭಾರತಾದ್ಯಂತ ನೂರಾರು ಭಕ್ತರು ದೇವರ ದರ್ಶನಕ್ಕೆ ಬರುತ್ತಾರೆ. ಮಣಿಪಾಲದಲ್ಲಿ ಮೆಡಿಕಲ್ ಮತ್ತು ಇಂಜಿನಿಯ ರಿಂಗ್ ಕಾಲೇಜುಗಳಿದ್ದು, ವಿಶ್ವದಾದ್ಯಂತದವಿದ್ಯಾರ್ಥಿಗಳು ಹಾಗೂ ಪೋಷಕರು ಇಲ್ಲಿಗೆ ಬರುತ್ತಾರೆ. ಉದ್ಯಾವರದಲ್ಲಿ ಶ್ರೀಧರ್ಮಸ್ಥಳ ಆಯುರ್ವೇದಿಕ್ ಆಸ್ಪತ್ರೆ ಹಾಗು ಮಣಿಪಾಲದಲ್ಲಿ ಕಸ್ತೂರ್ಬಾ ಆಸ್ಪತ್ರೆಗಳಿದ್ದು ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂತಹ ಅತಿ ಪ್ರಾಮುಖ್ಯತೆ ಇರುವ ಉಡುಪಿಯಲ್ಲಿ, ವೇಳಾಪಟ್ಟಿಯಲ್ಲಿ ಮುದ್ರಿತವಾಗಿದ್ದರೂ, ಈ ರೈಲಿಗೆ ನಿಲುಗಡೆ ಕೊಡದೆ ರೈಲ್ವೆ ಇಲಾಖೆಯು ಉಡುಪಿಯ ಜನತೆಗೆ ದ್ರೋಹ ಬಗೆದಿದೆ. ಸಾರ್ವಜನಿಕರು, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ನಮ್ಮ ಜನಪ್ರತಿನಿಧಿಗಳು ರೈಲ್ವೆ ಮಂತ್ರಿಯವರಿಗೆ ಪತ್ರ ಬರೆದು ಉಡುಪಿಗೆ ನಿಲುಗಡೆ ನೀಡಲು ಒತ್ತಾಯಿಸುವಂತೆ ಡಾಯಸ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.