ತಂಡದಿಂದ ತಂಡಕ್ಕೆ ಹಾರುವುದು ಕಲಾವಿದರಿಗೆ ಶೋಭೆಯಲ್ಲ : ಸೀತಾರಾಮ ಕುಲಾಲ್
ನಾಟಕಗಳಿಗೆ ಮುಹೂರ್ತ ಕಾರ್ಯಕ್ರಮ

ಮಂಗಳೂರು, ಜು.12: ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಹಾರುವುದು ಕಲಾವಿದರಿಗೆ ಶೋಭೆ ತರುವಂತದ್ದಲ್ಲ. ಕಲಾವಿದನಿಗೆ ತಂಡದಲ್ಲಿ ಸಮಸ್ಯೆಗಳಿದ್ದರೆ ಅದನ್ನು ವ್ಯವಸ್ಥಾಪಕ ಅಥವಾ ಸಂಘಟಕರಲ್ಲಿ ತಿಳಿಸಿ ಸರಿ ಮಾಡಿಕೊಳ್ಳಬೇಕು ಎಂದು ಹಿರಿಯ ನಾಟಕಕಾರ, ನಿರ್ದೇಶಕ ಎಂ.ಸೀತಾರಾಮ ಕುಲಾಲ್ ತಿಳಿಸಿದರು.
ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಲಕುಮಿ ಮತ್ತು ಶ್ರೀಲಲಿತೆ ನಾಟಕ ತಂಡದ ನಾಲ್ಕು ನಾಟಕಗಳಿಗೆ ಮುಹೂರ್ತ ನೆರವೇರಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ನಾಟಕಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಅದರಲ್ಲೂ ಲಕುಮಿ ಮತ್ತು ಶ್ರೀಲಲಿತೆ ತಂಡದಿಂದ ಬಹಳಷ್ಟು ಸಂದೇಶ ಭರಿತ ನಾಟಕಗಳು ಪ್ರದರ್ಶನಗೊಂಡಿವೆ. ಜಿಲ್ಲೆಯಲ್ಲಿ ಬಹುಬೇಡಿಕೆಯ ನಾಟಕ ತಂಡಗಳಲ್ಲಿ ಲಕುಮಿ ತಂಡ ಕೂಡಾ ಒಂದಾಗಿದೆ. ಅದರ ವ್ಯವಸ್ಥಾಪಕ, ನಿರ್ದೇಶಕ ಕಿಶೋರ್ ಡಿ. ಶೆಟ್ಟಿಯವರ ಪರಿಶ್ರಮ ಮೆಚ್ಚುವಂತದ್ದು ಎಂದು ಸೀತಾರಾಮ ಕುಲಾಲ್ ತಿಳಿಸಿದರು.
ಕಿಶೋರ್ ಡಿ ಶೆಟ್ಟಿ ಸಂಚಾಲಕತ್ವದ ಲಕುಮಿ ತಂಡದ ಕಲಾವಿದ ಸುರೇಶ್ ಮಂಜೇಶ್ವರ ರಚನೆಯ ‘ಮಂಗೆ ಮಲ್ಪೊಚ್ಚಿ’, ಮಣಿ ಕೋಟೆಬಾಗಿಲು ರಚನೆಯ ‘ಗುಟ್ಟು ಗೊತ್ತಾಂಡ್’ ಹಾಗೂ ಶ್ರೀಲಲಿತೆ ತಂಡದ ವಸಂತ ಅಮೀನ್ ರಚನೆಯ ಹೊಸ ಪೌರಾಣಿಕ ನಾಟಕ ‘ತಿರುಪತಿ ತಿಮ್ಮಪ್ಪ’ ಹಾಗೂ ಶಶಿರಾಜ್ ಕಾವೂರು ರಚನೆಯ ಸಾಮಾಜಿಕ ಹಾಸ್ಯ ಮಿಶ್ರಿತ ‘ಮಿತ್ತ್ ತಿರ್ತ್' ನಾಟಕ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಹಿರಿಯ ಕಲಾವಿದ ಅರವಿಂದ ಬೋಳಾರ್ ಮತ್ತು ನವೀನ್ ಶೆಟ್ಟಿ ಅಳಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕದ್ರಿ ನವನೀತ ಶೆಟ್ಟಿ ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ತಾರಾನಾಥ ಶೆಟ್ಟಿ ಬೋಳಾರ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮುದ್ದು ಮೂಡುಬೆಳ್ಳೆ, ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ, ಶಶಿರಾಜ್ ಕಾವೂರು, ವಸಂತ ಅಮೀನ್, ನಿಟ್ಟೆ ಶಶಿಧರ್ ಶೆಟ್ಟಿ , ಗೋಕುಲ್ ಕದ್ರಿ, ಸುರೇಶ್ ಮಂಜೇಶ್ವರ್, ಮೋಹನ್ ಕೊಪ್ಪಲ, ಮಣಿ ಕೋಟೆಬಾಗಿಲು, ಹರಿಂದ್ರನಾಥ ಶೆಟ್ಟಿ, ಮಂಜು ರೈ ಮೂಳೂರು, ರವಿ ಸುರತ್ಕಲ್, ಎಚ್ .ಕೆ. ನಯನಾಡು, ಶೋಭಾ ಶಕ್ತಿನಗರ, ರಾಜೇಶ್ ಕೆಂಚನಕೆರೆ, ಸುಜೀತ್ ಸುರತ್ಕಲ್ ಉಪಸ್ಥಿತರಿದ್ದರು. ಜೀವನ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.