ಅಪಘಾತಕ್ಕೆ ಅತಿವೇಗ, ನಿರ್ಲಕ್ಷ್ಯತನ ಕಾರಣ: ಎಎಸ್ಸೈ ಜ್ಞಾನಶೇಖರ
ಸಂಚಾರ ನಿರ್ವಹಣೆ-ರಸ್ತೆ ಸುರಕ್ಷಾ ಕಾರ್ಯಕ್ರಮ

ಮಂಗಳೂರು, ಜು.12: ಚಾಲಕನ ನಿರ್ಲಕ್ಷ್ಯತನ ಮತ್ತು ಮಿತಿಮೀರಿದ ವೇಗದಿಂದ ಭಾರತದಲ್ಲಿ ಅಧಿಕ ಅಪಘಾತಗಳು ಉಂಟಾಗುತ್ತಿವೆ ಎಂದು ಮಂಗಳೂರು ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಸೈ ಜ್ಞಾನಶೇಖರ ತಿಳಿಸಿದ್ದಾರೆ.
ನಗರದ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಥಬೀದಿಯಲ್ಲಿನ ಯುವ ರೆಡ್ಕ್ರಾಸ್, ರೇಂಜರ್ಸ್/ರೋವರ್ಸ್ ಮತ್ತು ಪಶ್ಚಿಮ ಪೊಲೀಸ್ ಠಾಣೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ ಕಾರ್ಯಕ್ರಮ’ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ರಸ್ತೆಯಲ್ಲಿ ಸಂಚರಿಸುವಾಗ ಪಾಲಿಸಬೇಕಾದ ಸುರಕ್ಷಾ ನೀತಿಗಳನ್ನು ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗುವ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವುದು ಆವಶ್ಯಕ. ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಮತ್ತು ರಸ್ತೆಯನ್ನು ದಾಟುವಾಗ ಅತ್ಯಂತ ಜಾಗರೂಕರಾಗಿರಬೇಕು ಎಂದು ಹೇಳಿದರು. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಬ್ಇನ್ಸ್ಪೆಕ್ಟರ್ ಉದಯ್, ಮಣಿಕಂಠ, ಯುವ ರೆಡ್ಕ್ರಾಸ್ ಮತ್ತು ರೋವರ್ಸ್ ಘಟಕ ಸಂಯೋಜಕ ಡಾ.ಮಹೇಶ್ ಕೆ.ಬಿ. ಮತ್ತು ಪ್ರೊ.ಪುರುಷೋತ್ತಮ ಭಟ್ ಉಪಸ್ಥಿತರಿದ್ದರು.
ರೇಂಜರ್ಸ್ ಘಟಕ ಸಂಯೋಜಕಿ ಡಾ.ಶೈಲಾರಾಣಿ ಬಿ. ಕಾರ್ಯಕ್ರಮ ನಿರೂಪಿಸಿದರು.







