ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಮಾಡಿದ ನಮ್ಮ ಪೂರ್ವಿಕರಿಗೆ ಸಲಾಮು: ಕೆ.ಬಿ.ಶಾಣಪ್ಪ
ಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ, ತಾರಾಗೆ ಸದನದ ಅಭಿನಂದನೆ
.jpg.jpg)
ಬೆಂಗಳೂರು, ಜು.12: ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರಣದಿಂದಾಗಿ ನನ್ನಂತಹ ಸಾಮಾನ್ಯ ವ್ಯಕ್ತಿ ಜನಪ್ರತಿನಿಧಿಯಾಗಿ ಸದನದಲ್ಲಿ ಕುಳಿತಿರುವುದಕ್ಕೆ ಸಾಧ್ಯವಾಗಿದೆ. ಇಂತಹ ವ್ಯವಸ್ಥೆಯ ಜಾರಿಗೆ ಕಾರಣರಾದ ನಮ್ಮ ಪೂರ್ವಿಕರಿಗೆ ನನ್ನ ದೊಡ್ಡ ಸಲಾಮು ಎಂದು ಪರಿಷತ್ನ ಹಿರಿಯ ಸದಸ್ಯ ಕೆ.ಬಿ.ಶಾಣಪ್ಪ ಕೃತಜ್ಞತೆ ಸಲ್ಲಿಸಿದರು.
ಗುರುವಾರ ವಿಧಾನಪರಿಷತ್ನಲ್ಲಿ ಮುಂದಿನ ಆಗಸ್ಟ್ನಲ್ಲಿ ಪರಿಷತ್ನಿಂದ ನಿವೃತ್ತಿಯಾಗುತ್ತಿರುವ ಪರಿಷತ್ನ ಹಿರಿಯ ಸದಸ್ಯ ಕೆ.ಬಿ.ಶಾಣಪ್ಪ ಹಾಗೂ ತಾರಾ ಅನೂರಾಧಾಗೆ ಸದನದ ಸದಸ್ಯರು ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಕೆ.ಬಿ.ಶಾಣಪ್ಪ ತಮ್ಮ 30ವರ್ಷಕ್ಕೂ ಹೆಚ್ಚು ರಾಜಕೀಯ ಜೀವನವನ್ನು ಮೆಲುಕು ಹಾಕಿ, ಸದನದಲ್ಲಿರುವ ಇಷ್ಟು ಮಂದಿಯ ಪ್ರದೇಶ, ಊರು, ಜಾತಿ, ಧರ್ಮಗಳ ಹಿನ್ನೆಲೆಗಳು ಏನೇ ಇದ್ದರೂ ನಾವೆಲ್ಲರೂ ಒಟ್ಟಾಗಿ ಕೂತು ರಾಜ್ಯದ ಆಗುಹೋಗುಗಳ ಕುರಿತು ಚರ್ಚಿಸುತ್ತಿದ್ದೇವೆ. ಇದೇ ಪ್ರಜಾಪ್ರಭುತ್ವ ವೈಶಿಷ್ಟವೆಂದು ಬಣ್ಣಿಸಿದರು.
ನನ್ನ ಹುಟ್ಟಿದ ದಿನಾಂಕವನ್ನು ಬರೆದಿಡಲು ಅರಿವಿಲ್ಲದ ಕುಟುಂಬದಿಂದ ಬಂದ ನಾನು ಜನಪ್ರತಿನಿಧಿಯಾಗಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಾರಣವಾಗಿದೆ. ಇಂತಹ ಜನಪರವಾದ ವ್ಯವಸ್ಥೆಯು ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ತ್ಯಾಗ, ಪರಿಶ್ರಮದಿಂದಾಗಿ ಕಟ್ಟಲ್ಪಟ್ಟಿದೆ. ಇದಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಅವರು ಹೇಳಿದರು.
1980ದಶಕದಲ್ಲಿ ವೀರೇಂದ್ರ ಪಾಟೀಲ್, ನಝೀರ್ ಸಾಬ್, ನಾಣಯ್ಯ, ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಹಿರಿಯ ಮುತ್ಸದ್ದಿಗಳು ವಿಧಾನಸಭೆ, ವಿಧಾನಪರಿಷತ್ನ ಘನತೆಯನ್ನು ಹೆಚ್ಚಿಸಿದ್ದಾರೆ. ಅವರೊಂದಿಗೆ ಒಡನಾಟದಿಂದ ನನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದೇನೆಂದು ಅವರು ಮೆಲುಕು ಹಾಕಿದರು. ರಾಜಕೀಯ ಜೀವನವು ಕಮ್ಯುನಿಸ್ಟ್ ಚಳವಳಿಯಿಂದ ಪ್ರಾರಂಭಗೊಂಡು, ಜನತಾದಳದಲ್ಲಿ ರಾಜಕೀಯ ನೆಲೆಯನ್ನು ಕಂಡೆ. ನಾನು ಕಮ್ಯುನಿಸ್ಟ್ ಹಿನ್ನೆಲೆಯಿಂದ ಬಂದಿದ್ದರು ಮೊದಲ ಬಾರಿಗೆ ಜೆ.ಎಚ್.ಪಟೇಲ್ರವರು ಸಚಿವ ಸ್ಥಾನ ನೀಡಿದ್ದರು. ಅಂತಹ ಹೃದಯವಂತರಿಂದ ಸದನವು ಕಳೆಗಟ್ಟುತ್ತಿತ್ತು ಎಂದು ಅವರು ಸ್ಮರಿಸಿದರು.
ಬಿಜೆಪಿ ಸದಸ್ಯ ತಾರಾ ಅನೂರಾಧಾ ಮಾತನಾಡಿ, 2012ರಲ್ಲಿ ವಿಧಾನಪರಿಷತ್ಗೆ ಆಯ್ಕೆಯಾದ ನಂತರ ಗಂಭೀರವಾಗಿ ಓದಲು ಪ್ರಾರಂಭಿಸಿದೆ. ಸಿನೆಮಾದಲ್ಲಿ ಪಾತ್ರಗಳ ಮೂಲಕ ಬೆಳೆಯಲು ಸಾಧ್ಯವಾಗಿದ್ದ ನನಗೆ ವಿಧಾನಪರಿಷತ್ ಸದನದ ಕಾರ್ಯಕಲಾಪಗಳು ನನ್ನನ್ನು ನಾನಾಗಿ ಬೆಳೆಯಲು ಕಲಿಸಿತು ಎಂದು ತಿಳಿಸಿದರು.
ವಿಧಾನಪರಿಷತ್ನ ಪ್ರತಿಯೊಬ್ಬ ಹಿರಿಯ ಸದಸ್ಯರು ನನಗೆ ಮಾರ್ಗದರ್ಶನ ನೀಡಿದ್ದಾರೆ. ಸದನದಲ್ಲಿ ಪ್ರಶ್ನೆಗಳನ್ನು ಕೇಳಿದಾಗ, ಇತರೆ ಸದಸ್ಯರು ನನ್ನ ಪ್ರಶ್ನೆಗೆ ಪೂರಕವಾಗಿ ಮಾತನಾಡಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದರು. ಇದು ನನ್ನಲ್ಲಿ ಮತ್ತಷ್ಟು ಪ್ರಶ್ನೆಗಳನ್ನು ಕೇಳುವಂತೆ ಪ್ರೇರೇಪಿಸುತ್ತಿತ್ತು ಎಂದು ಅವರು ಹೇಳಿದರು. ಪರಿಷತ್ಗೆ ಆಯ್ಕೆಯಾಗುವ ನಾನು 5ತಿಂಗಳ ಗರ್ಭೀಣಿಯಾಗಿದ್ದೆ. ನನ್ನ ಮೊದಲ ಅಧಿವೇಶನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಪರಿಷತ್ನ ಸದಸ್ಯರ ಹಾಗೂ ನನ್ನ ಕುಟುಂಬದ ನೆರವನ್ನು ಮರೆಯಲಾರೆ. ನಂತರ ದಿನಗಳಲ್ಲಿ ನನ್ನ ಮಗುವನ್ನು ಕರೆದುಕೊಂಡು ಪರಿಷತ್ಗೆ ಬರುತ್ತಿದ್ದೆ. ಆ ಸಂದರ್ಭದಲ್ಲಿ ಮಹಿಳಾ ಮಾರ್ಷಲ್ಗಳು ನೆರವಿಗೆ ಬರುತ್ತಿದ್ದರು. ಹಾಗೂ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ನನ್ನ ಮಗುವಿನ ಆರೈಕೆಗೆ ತಮ್ಮ ಖಾಸಗಿ ಕೊಠಡಿಗಳನ್ನು ಬಿಟ್ಟುಕೊಟ್ಟಿದ್ದರು. ಅವರು ನನಗೆ ತಂದೆಯಾಗಿ, ಅಣ್ಣನಾಗಿ ಸದಾ ನೆರವಿಗೆ ಬರುತ್ತಿದ್ದರು ಎಂದು ಅವರು ನೆನೆದರು.
ಮುಂದಿನ ಆಗಸ್ಟ್ನಲ್ಲಿ ಪರಿಷತ್ನ ಸದಸ್ಯ ಸ್ಥಾನದಿಂದ ನಿವೃತ್ತಿಯಾಗುತ್ತಿರುವ ಕೆ.ಬಿ.ಶಾಣಪ್ಪರವರ ವ್ಯಕ್ತಿತ್ವ ಸದಾ ಮಾದರಿಯಾಗುವಂತಹದ್ದು. ಆಡಳಿತ ಇಲ್ಲವೆ ವಿರೋಧ ಪಕ್ಷದ ಸ್ಥಾನದಲ್ಲಿರಲಿ. ಸತ್ಯವನ್ನು ದಾಟಿ ಹೋಗುತ್ತಿರಲಿಲ್ಲ. ಹಾಗೆಯೆ ಪರಿಷತ್ನ ಸದಸ್ಯೆ ತಾರಾ ಅನೂರಾಧಾರವರು ಎಂದಿಗೂ ಅಹಂಕಾರವನ್ನು ಪ್ರದರ್ಶಿಸಿದವರಲ್ಲ. ಎಲ್ಲರಿಂದಲೂ ಕಲಿಯುತ್ತಾ ಉತ್ತಮ ಸದಸ್ಯೆಯಾಗಿ ಬೆಳೆದಿದ್ದರು. ಅವರಿಬ್ಬರು ಮತ್ತೊಮ್ಮೆ ಪರಿಷತ್ಗೆ ಆಯ್ಕೆಯಾಗಲಿ.
-ಜಯಮಾಲಾ, ಪರಿಷತ್ನ ಸಭಾನಾಯಕಿ
ಕೆ.ಬಿ.ಶಾಣಪ್ಪ ರಾಜಕೀಯ ಜೀವನ ಆದರ್ಶವಾದದ್ದು. ರಾಜಕಾರಣದಲ್ಲಿ ಪ್ರಾಮಾಣಿಕತೆ, ನಿಷ್ಕಳಂಕ, ಸಜ್ಜನಿಕೆ, ಹಾಸ್ಯ ಪ್ರಜ್ಞೆಯಿಂದ ಕೂಡಿದ ಜನಪ್ರತಿನಿಧಿ ಅಪರೂಪ. ಕಮ್ಯುನಿಸ್ಟ್ ವಿಚಾರಧಾರೆಯಿಂದ ಬಂದಿದ್ದರು ಬಿಜೆಪಿಗೆ ಸೇರಿ ನಮ್ಮೊಳಗೆ ಒಬ್ಬರಾಗಿ, ಮಾರ್ಗದರ್ಶಕರಾಗಿದ್ದಾರೆ. ಹಾಗೆಯೆ ತಾರಾ ಅನೂರಾಧಾರವರು ಪರಿಷತ್ಗೆ ಆಯ್ಕೆಯಾದ ದಿನದಿಂದಲೆ ಉತ್ತಮ ಪ್ರಶ್ನೆಗಳನ್ನು ಕೇಳುವ ಮೂಲಕ ಸದನವನ್ನು ಚರ್ಚೆಗೆ ಗ್ರಾಸ ಮಾಡುತ್ತಿದ್ದರು. ಅವರು ಉತ್ತಮ ಪ್ರತಿಭೆ ಉಳ್ಳವರಾಗಿದ್ದಾರೆ. ಹೀಗಾಗಿ ಇವರಿಬ್ಬರು ಮತ್ತೊಮ್ಮೆ ಪರಿಷತ್ಗೆ ಆಯ್ಕೆಯಾಗಲಿ.
-ಕೋಟಾ ಶ್ರೀನಿವಾಸ ಪೂಜಾರಿ ವಿರೋಧ ಪಕ್ಷದ ನಾಯಕ







