ಉಡುಪಿ: ಅಪರೂಪದ ಪಾಡ್ದನಗಳ ದಾಖಲೀಕರಣ

ಉಡುಪಿ, ಜು.13: ಜಾನಪದ ಪ್ರಶಸ್ತಿ ವಿಜೇತೆ ಕಾರ್ಕಳ ತಾಲೂಕು ಮಾಳದ ತುಳು ಜಾನಪದ ಕಲಾವಿದೆ ಲೀಲಾ ಶೆಡ್ತಿ ಅವರು ಹಾಡಿದ ಐದು ಅಮೂಲ್ಯ ಪಾಡ್ದನಗಳನ್ನು ಇತ್ತೀಚೆಗೆ ಉಡುಪಿಯಲ್ಲಿರುವ ಮಾಹೆಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ದಾಖಲೀಕರಣ ಗೊಳಿಸಲಾಯಿತು.
ಬಾಲೆರಕು ಕುಮಾರ್ತಿ,ಬಾರಗದೇವ ಅಡಿಗೇರ್, ದಾರಮು ಪೊಂಜೋವು, ನಾಗರಾಜವು, ಕಲ್ಕುಡ ಕಲ್ಲುರ್ಟಿ ಈ ಪಾಡ್ದನಗಳು ನಮ್ಮ ಜಾನಪದ ಸಾಹಿತ್ಯಕ್ಕೆ ಮಹತ್ವದ ಸಂಪತ್ತಾಗಿವೆ. ಪಾಡ್ಡನ ರೂಪದಲ್ಲಿರುವ ಜಾನಪದ ಕತೆಗಳನ್ನು ಸಂಗ್ರಹಿಸಿ, ಕಾಪಿಟ್ಟು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಸದುದ್ದೇಶದಿಂದ ಈ ದಾಖಲೀಕರಣ ಮಾಡಿಕೊಳ್ಳಲಾಗಿದೆ. ಅಲ್ಲದೆ ಜನಪದರ ಮನಃಸ್ಥಿತಿ, ಬದುಕು, ಜೀವನಾದರ್ಶಗಳನ್ನು ಪಾಡ್ದನಗಳು ವಿವರಿಸುತ್ತವೆ ಎಂದು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ. ವರದೇಶ ಹಿರೇಗಂಗೆ ತಿಳಿಸಿದ್ದಾರೆ.
ಲೀಲಾ ಶೆಡ್ತಿಯವರ ಪಾಡ್ದನ ಪ್ರಸ್ತುತಿ ಮತ್ತು ಪ್ರಶ್ನೆಗಳಿಗೆ ಉತ್ತರಿಸುವ ಕ್ರಮವನ್ನು ಶ್ಲಾಘಿಸಿದ ಹಿರೇಗಂಗೆ, ಇಂತಹ ಜನಪದ ಅನುಭವಿಗಳಿಗೆ ಸಮಾಜದ ಪ್ರೋತ್ಸಾಹ ಅಗತ್ಯ ಎಂದರು. ಈ ದಾಖಲಾತಿಯನ್ನು ಹಿರಿಯ ಪತ್ರಕರ್ತ, ಜನಪದ ತಜ್ಞ ಕೆ.ಎಲ್.ಕುಂಡಂತಾಯ ನಿರ್ವಹಿಸಿದರು. ಆರ್ಆರ್ಸಿಯ ಲಚ್ಚೇಂ್ರ ಇವುಗಳನ್ನು ದಾಖಲಿಸಿಕೊಂಡರು.





