ಬೈಕ್ಗೆ ಲಾರಿ ಢಿಕ್ಕಿ: ಸವಾರನಿಗೆ ಗಾಯ
ಮಂಗಳೂರು, ಜು.13: ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಕೊಲ್ಯ ನಾರಾಯಣ ಗುರು ಮದುವೆ ಹಾಲ್ ಎದುರು ಶುಕ್ರವಾರ ಬೆಳಗ್ಗೆ ನಡೆದಿದೆ.
ಕೊಂಡಾಣ ನಿವಾಸಿ ಎನ್.ಎಲ್. ಸೋಮಶೇಖರ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಂಡಾಣದ ಮನೆಯಿಂದ ಬೈಕ್ನಲ್ಲಿ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಗಾಯಾಳು ಸೋಮಶೇಖರ್ ಕೊಲ್ಯ ನಾರಾಯಣ ಗುರು ಮದುವೆ ಹಾಲ್ ಸಮೀಪಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಸೋಮಶೇಖರ್ ಚಲಾಯಿಸುತ್ತಿದ್ದ ಬೈಕ್ನ ಹಿಂದೆ ಕಂಟೇನರ್ ಲಾರಿಯ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದು ಬೈಕ್ಗೆ ಢಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ವೇಳೆ ಲಾರಿ ಚಾಲಕ ಲಾರಿ ಜೊತೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸಾರ್ವಜನಿಕರು ಗಾಯಾಳುವಿಗೆ ಆಟೋರಿಕ್ಷಾದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





