ಡಾ. ವೆಂಕಟ್ರಾಜ ಪುಣಿಂಚಿತ್ತಾಯರ ಸಂಸ್ಮರಣ ಕಾರ್ಯಕ್ರಮ
ಮಂಗಳೂರು, ಜು.14: ದ.ಕ.ಜಿಲ್ಲಾ ಕಸಾಪ ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ಸಂಯುಕ್ತ ಆಶ್ರಯದಲ್ಲಿ ಡಾ. ವೆಂಕಟ್ರಾಜ ಪುಣಿಂಚಿತ್ತಾಯರ ಸಂಸ್ಮರಣ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಮಾತನಾಡಿ ಪುಣಿಂಚಿತ್ತಾಯರು ಅಪಾರವಾದ ಪಾಂಡಿತ್ಯವನ್ನು ಹೊಂದಿದ್ದು ತನ್ನ ಭಾಷಾ ಕೌಶಲ್ಯ ಹಾಗೂ ಅನುಭವದ ಆಧಾರದ ಮೇಲೆ ಮಾಡಿರುವ ಕಲಾಸೇವೆ ಶ್ಲಾಘನೀಯ. ಅವರು ತುಳು ಭಾಷೆಯ ಅಭಿವೃದ್ಧಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅಧ್ಯಾಪನ ಹಾಗೂ ಸಾಹಿತ್ಯ ಸೇವೆಯ ಮೂಲಕ ಜನಮಾನಸದಲ್ಲಿ ಸದಾ ಜೀವಂತವಾಗಿದ್ದಾರೆ ಎಂದು ಹೇಳಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ, ಸಂಘಟಕ ಜನಾರ್ದನ ಹಂದೆ, ಜಾನಪದ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕಸಾಪ ಜಿಲ್ಲಾ ಘಟಕದ ಕೋಶಾಧಿಕಾರಿ ಪೂರ್ಣಿಮಾ ಪೇಜಾವರ, ಕಸಾಪ ತಾಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ವಿದ್ಯಾಗಣೇಶ್ ಮುಂತಾದವರು ಉಪಸ್ಥಿತರಿದ್ದರು.
ಬಾಲಪ್ರತಿಭೆ ಸಮನ್ವಿತಾ ಗಣೇಶ್ ಪ್ರಾರ್ಥನೆ ಗೀತೆ ಹಾಡಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಅಕಿಲೇಶ್ ನಗುಮುಗಂ ಸ್ವಾಗತಿಸಿದರು. ಮೀಡಿಯಾ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ವಂದಿಸಿದರು.