ಮಡಿಕೇರಿ: ಬಿರುಸಿನ ಗಾಳಿಗೆ ಹಲವೆಡೆ ಧರೆಗುರುಳಿದ ಮರಗಳು
ಮಡಿಕೇರಿ ಜು.14: ಕೊಡಗು ಜಿಲ್ಲೆಯಾದ್ಯಂತ ಪುನರ್ವಸು ಮಳೆಯ ತೀವ್ರತೆ ಕೊಂಚ ಕ್ಷೀಣಿಸಿದ್ದು, ಶನಿವಾರ ಮಳೆ ಬಿಸಿಲಿನ ಕಣ್ಣಾ ಮುಚ್ಚಾಲೆಯಾಟದೊಂದಿಗೆ, ಬಿರುಸಿನ ಗಾಳಿ ಕಾಣಿಸಿಕೊಂಡಿರುವುದರಿಂದ ಹಲವೆಡೆ ಮರಗಳು ಧರೆಗುರುಳಿರುವ ಘಟನೆ ನಡೆದಿದೆ.
ಕಾವೇರಿಯ ಕ್ಷೇತ್ರ ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದ್ದರೂ, ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಅಯ್ಯಂಗೇರಿ ರಸ್ತೆಯಲ್ಲಿ ಪ್ರವಾಹದ ನೀರು ಇನ್ನೂ ಇಳಿಯದೆ ವಾಹನಗಳ ಸಂಚಾರ ಸಾಧ್ಯವಾಗುತ್ತಿಲ್ಲ. ಕಳೆದ ಒಂದು ದಿನದ ಅವಧಿಯಲ್ಲಿ ಭಾಗಮಂಡಲ ವ್ಯಾಪ್ತಿಯಲ್ಲಿ 3 ಇಂಚಿಗೂ ಹೆಚ್ಚಿನ ಮಳೆಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಶನಿವಾರ ಆಗೊಮ್ಮೆ ಈಗೊಮ್ಮೆ ಸೂರ್ಯ ಕಿರಣಗಳು ಮೂಡಿತಾದರು, ಆಗಾಗ ಭಾರೀ ಗಾಳಿಯೊಂದಿಗೆ ಮಳೆಯ ವಾತಾವರಣವೂ ಸೃಷ್ಟಿಯಾಗುತ್ತಿತ್ತು. ಭಾರೀ ಮಳೆಯಿಂದ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗಗಳಲ್ಲಿ ಮರಗಳು ಧರೆಗುರುಳಿದ, ಗುಡ್ಡ ಕುಸಿದ ಘಟನೆಗಳು ನಡೆದಿವೆ.
ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದ್ದು, ಗೊಣಿಕೊಪ್ಪಲು-ಮೈಸೂರು ರಸ್ತೆಯ ನಡುವೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದು ಸಾಕಷ್ಟು ಸಮಯ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಳಿಕ ಸಾಕಾನೆಯ ನೆರವಿನಿಂದ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ನಗರ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದರೆ ಗ್ರಾಮೀಣ ಪ್ರದೇಶ ಸಂಪೂರ್ಣ ಕಾರ್ಗತ್ತಲಿನಲ್ಲಿದೆ. ನದಿ, ಹೊಳೆ, ಕೆರೆ, ತೋಡುಗಳು ತುಂಬಿ ಹರಿಯುತ್ತಿರುವುದರಿಂದ ಗ್ರಾಮೀಣರ ಜೀವನ ಇನ್ನೂ ಕೂಡ ಸಹಜ ಸ್ಥಿತಿಗೆ ಮರಳಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಅಪಾಯದ ಪರಿಸ್ಥಿತಿಯೇ ಇದೆ. ರೈತರು ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹಾನಿ
ಧಾರಾಕಾರ ಗಾಳಿ, ಮಳೆಯಿಂದಾಗಿ ನಾಪೋಕ್ಲು ಹಳೇ ತಾಲೂಕಿನಲ್ಲಿ ಇಂದು ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಮನೆಗಳ ಸಾಮಗ್ರಿಗಳು ಸುಟ್ಟುಹೋಗಿರುವ ಘಟನೆ ನಡೆದಿದೆ.
ಅವಘಡ ಸಂಭವಿಸಿದ ಕೂಡಲೆ ಇಲಾಖೆಯ ಮೊಬೈಲ್ಗೆ ಕರೆ ಮಾಡಿದರೂ, ಯಾವುದೇ ಉತ್ತರ ಬಾರದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಬಳಿಕ ಸ್ಥಳಕ್ಕಾಗಮಿಸಿದ ಅಭಿಯಂತರ ಹರೀಶ್ರವರನ್ನು ತರಾಟೆಗೆ ತೆಗೆದು ಕೊಂಡರು.
ಈ ಭಾಗದಲ್ಲಿ ಈಗಾಗಲೇ ಹಿಂದೆ ಇದ್ದ ವಿದ್ಯುತ್ ಕಂಬದ ಬಳಿಯಲ್ಲಿಯೇ ಎಕ್ಸ್ ಪ್ರೆಸ್ ವೇ ಕಂಬಗಳು ಇರುವುದೆ ಅವಘಡಕ್ಕೆ ಕಾರಣ. ಇದಕ್ಕೆ ಚೆಸ್ಕಾಂ ನೇರ ಹೊಣೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಪಿ.ಎಂ.ಬಷೀರ್, ಸಮೀರ್ ಪಿ.ಎಂ., ಹ್ಯಾರೀಸ್ ಬಿ.ಕೆ., ಅಪ್ಪಾಜಿ, ವಿಜೂ ಸೇರಿದಂತೆ ಸುಮಾರು 20 ಕುಟುಂಬಗಳಿಗೆ ಸೇರಿದ ಮನೆಗಳ ಸಾಮಾಗ್ರಿಗಳಿಗೆ ಹಾನಿಯಾಗಿದೆ. ಇಲಾಖೆ ತಕ್ಷಣ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಶಾಸಕರ ಭೇಟಿ
ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಶನಿವಾರ ಕಾಲೂರು, ಮುಕ್ಕೋಡ್ಲು, ಹಮ್ಮಿಯಾಲ ಕಡಗದಾಳು ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಮಳೆಯಿಂದ ಉಂಟಾಗಿರುವ ಕೃಷಿ ಸೇರಿದಂತೆ ಆಸ್ತಿ ಪಾಸ್ತಿಗಳಿಗೆ ಉಂಟಾಗಿರುವ ಹಾನಿ, ಹದಗೆಟ್ಟ ರಸ್ತೆ ಅವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ವಿವರ
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 70.4 ಮಿ.ಮೀ. ಮಳೆಯಾಗಿದೆ.