ಯುಪಿಸಿಎಲ್: ಪಲಿಮಾರು ಚರ್ಚ್ ಕಾಮಗಾರಿಗೆ ಚಾಲನೆ

ಪಡುಬಿದ್ರೆ, ಜು.15: ಅದಾನಿ ಯುಪಿಸಿಎಲ್ ಸಿಎಸ್ಆರ್ ಯೋಜನೆಯಡಿ ಪಲಿಮಾರು ಗ್ರಾಪಂ ವ್ಯಾಪ್ತಿಯ ಸಂತ ಪಿಯೂಸ್ ಚರ್ಚ್ನ ಪ್ರಾಂಗಣದ ಇಂಟರ್ ಲಾಕಿಂಗ್ ಕಾಮಗಾರಿಗೆ ರವಿವಾರ ಚಾಲನೆ ನೀಡಲಾಯಿತು.
10 ಲಕ್ಷ ರೂ. ವೆಚ್ಚದ ಈ ಕಾಮಗಾರಿಗೆ ಚರ್ಚ್ನ ಧರ್ಮಗುರು ರೆ.ಫಾ. ರಾಕ್ ಡಿಸೋಜ, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುಟ್ರಾಡೋ ಮತ್ತು ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಕಿಶೋರ್ ಆಳ್ವ ಮಾತನಾಡಿ, ಅದಾನಿ ಸಮೂಹವು ಪಲಿಮಾರು ಗ್ರಾಪಂನ್ನು ವಿಶೇಷ ಸಿಎಸ್ಆರ್ ಪ್ಯಾಕೇಜ್ನಡಿ ಸೇರಿಸಿಕೊಂಡು ಮೂರು ವರ್ಷಗಳ ಅವಧಿಗೆ ಒಟ್ಟು 3 ಕೋಟಿ ರೂ. ಅನುದಾನ ಘೋಷಿಸಿದ್ದು, ಗ್ರಾಪಂ ನೀಡುವ ಕ್ರಿಯಾ ಯೋಜನೆಗೆ ಮೇರೆಗೆ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈವರೆಗೆ ಸುಮಾರು 42 ಲಕ್ಷ ರೂ. ಮೊತ್ತದ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣಗೊಳಿಸಿದ್ದು, ಈಗ 30 ಲಕ್ಷ ರೂ. ವೆಚ್ಚದಲ್ಲಿ ಚರ್ಚ್ನ ಪ್ರಾಂಗಣದ ಕಾಮಗಾರಿಯ ಜೊತೆಗೆ ಡ್ಯಾಮ್ ರಸ್ತೆ ಮತ್ತು ಹೊಯ್ಗೆ ರಸ್ತೆ ಕಾಂಕ್ರಿಟ್ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಸಂಪೂರ್ಣಗೊಳಿಸಲಾಗುವುದು ಎಂದವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಚರ್ಚ್ನ ಆವರಣದಲ್ಲಿ ಅದಾನಿ ಫೌಂಡೇಶನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ಬಳಿಕ ಭಕ್ತರಿಗೆ ಸಸಿಗಳನ್ನು ವಿತರಿಸಲಾಯಿತು. ಸಂತ ಪಿಯೂಸ್ ಚರ್ಚ್ನ ಉಪಾಧ್ಯಕ್ಷ ಟೈನಿ ಕುಟಿನೋ, ಗುತ್ತಿಗೆದಾರ ಡೇವಿಡ್ ಡಿಸೋಜ, ಅದಾನಿ ಯುಪಿಸಿಎಲ್ನ ಎಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಫೌಂಡೇಶನ್ನ ಅನುದೀಪ್ ಪೂಜಾರಿ, ವಿನೀತ್ ಅಂಚನ್, ಸುಕೇಶ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.