ಹುಸೇನಬ್ಬ ಪ್ರಕರಣ: ಸಿಐಡಿ ಎಡಿಜಿಪಿ ಚರಣ್ ರೆಡ್ಡಿಯಿಂದ ತನಿಖೆ

ಉಡುಪಿ, ಜು.17: ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ (62) ಕೊಲೆ ಪ್ರಕರಣದ ತನಿಖೆಯ ಸಂಬಂಧ ಇಂದು ಉಡುಪಿಗೆ ಆಗಮಿಸಿರುವ ಸಿಐಡಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಚರಣ್ ರೆಡ್ಡಿ, ಹಿರಿಯಡ್ಕ ಪೊಲೀಸ್ ಠಾಣೆ ಹಾಗೂ ಕೊಲೆ ನಡೆದ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಬೆಳಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಗೆ ತೆರಳಿದ ಚರಣ್ ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು. ಪ್ರಕರಣದ ದೂರುದಾರರಾದ ಮೃತ ಹುಸೇನಬ್ಬ ಅವರ ಸಹೋದರ ಇಸ್ಮಾಯಿಲ್ ಹಾಗೂ ಪುತ್ರ ಶಾಹೀದ್ ಅವರನ್ನು ಠಾಣೆಯಲ್ಲೇ ವಿಚಾರಣೆ ನಡೆಸಿ ಕೊಲೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಂಡರು.
ಬಜರಂಗದಳದ ಕಾರ್ಯಕರ್ತರು ಜಾನುವಾರು ಸಾಗಾಟದ ವಾಹನವನ್ನು ಅಡ್ಡಗಟ್ಟಿ ಹುಸೇನಬ್ಬರಿಗೆ ಹಲ್ಲೆ ನಡೆಸಿದ ಪೆರ್ಡೂರು ಗ್ರಾಮದ ಶೇನರಬೆಟ್ಟು ಹಾಗೂ ಕೊಲೆಯಾದ ಬಳಿಕ ಹುಸೇನಬ್ಬರ ಮೃತದೇಹ ಎಸೆದ ಪೆರ್ಡೂರು ಗ್ರಾಮದ ಕೊತ್ಯಾರು ಹಾಡಿಯ ಪ್ರದೇಶಕ್ಕೆ ತೆರಳಿದ ಎಡಿಜಿಪಿ ಚರಣ್ ರೆಡ್ಡಿ ಪರಿಶೀಲನೆ ನಡೆಸಿದರು.
ತನಿಖೆ ಪೂರ್ಣಗೊಳಿಸಿದ ಎಡಿಜಿಪಿ ಚರಣ್ ರೆಡ್ಡಿ ನಂತರ ಬೆಂಗಳೂರಿಗೆ ತೆರಳಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ, ಸಿಐಡಿ ಡಿವೈಎಸ್ಪಿ ಹಾಗೂ ತನಿಖಾಧಿಕಾರಿ ಚಂದ್ರ ಶೇಖರ್ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.
ಪೆರ್ಡೂರು ಶೇನರಬೆಟ್ಟು ಎಂಬಲ್ಲಿ ಮೇ 30ರಂದು ಬೆಳಗಿನ ಜಾವ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿದ್ದ ಹುಸೇನಬ್ಬ ಹಿರಿಯಡ್ಕ ಪೊಲೀಸರ ಜೀಪಿನಲ್ಲಿ ಮೃತಪಟ್ಟಿದ್ದರು. ಪ್ರಕರಣದ ತನಿಖೆಯು ಜೂ.13ರಂದು ಸಿಐಡಿಗೆ ವರ್ಗಾವಣೆಗೊಂಡಿದ್ದು, ಜೂ.17ರಿಂದ ಪ್ರಕರಣದ ತನಿಖಾಧಿಕಾರಿ ಚಂದ್ರಶೇಖರ್ ಉಡುಪಿಯಲ್ಲೇ ಬೀಡುಬಿಟ್ಟು ತನಿಖೆ ನಡೆಸುತ್ತಿದ್ದಾರೆ.