ಮೀನುಗಾರ ಮಹಿಳೆಯರಿಗೆ 50,000ರೂ. ಬಡ್ಡಿ ರಹಿತ ಸಾಲ: ಮೀನುಗಾರಿಕಾ ಸಚಿವ ನಾಡಗೌಡ ಭರವಸೆ

ಉಡುಪಿ, ಜು.18: ರಾಜ್ಯ ಸರಕಾರ ಮೀನುಗಾರ ಮಹಿಳೆಯರಿಗೆ ಮೀನು ವ್ಯಾಪಾರಕ್ಕಾಗಿ 50,000ರೂ.ವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲು ಹಾಗೂ 60 ವರ್ಷ ಮೇಲ್ಪಟ್ಟ ಮೀನುಗಾರರ ಪಿಂಚಣಿಯನ್ನು 500 ರೂ.ನಿಂದ ಒಂದು ಸಾವಿರ ರೂ.ಗಳಿಗೆ ಏರಿಸಲು ತೀರ್ಮಾನವನ್ನು ತೆಗೆದುಕೊಂಡಿದೆ ಎಂದು ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಸಚಿವರಾದ ಬಳಿಕ ಮೊದಲ ಬಾರಿ ಉಡುಪಿಗೆ ಭೇಟಿ ನೀಡಿದ ಸಚಿವರು, ಉಡುಪಿಯ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಮೀನುಗಾರ ಮಹಿಳೆಯರೊಂದಿಗೆ ಅವರ ಸಮಸ್ಯೆಗಳನ್ನು ಆಲಿಸಿ, ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದಿಂದ ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡುತಿದ್ದರು.
ಮೀನುಗಾರ ಮಹಿಳೆಯರಿಗೆ ತಮ್ಮ ಮೀನು ವ್ಯಾಪಾರಕ್ಕಾಗಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ 50ಸಾವಿರ ರೂ.ನಿಂದ ಒಂದು ಲಕ್ಷ ದವರೆಗೆ ಸಾಲ ನೀಡುವಂತೆ ಮಾಡಿದ ಮನವಿಗೆ ಉತ್ತರಿಸಿದ ಸಚಿವರು ರಾಜ್ಯ ಸರಕಾರ ಈಗಾಗಲೇ 50,000ರೂ.ವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲು ನಿರ್ಧರಿಸಿದೆ ಎಂದರು.
ಅದೇ ರೀತಿ 60 ವರ್ಷದಿಂದ ಮೇಲ್ಪಟ್ಟ ಮೀನುಗಾರ ಮಹಿಳೆಯರ ಪಿಂಚಣಿಯನ್ನು ಈಗಿನ 500ರೂ.ನಿಂದ ಒಂದು ಸಾವಿರ ರೂ.ಗೆ ಹೆಚ್ಚಿಸಲು ಈಗಾಗಲೇ ನಿರ್ಧರಿಸಲಾಗಿದೆ ಎಂದರು. ಮತ್ಸಾಶ್ರಯ ಯೋಜನೆಯಡಿ ಮನೆ ನಿರ್ಮಿಸಲು ತಲಾ ಎರಡು ಲಕ್ಷ ರೂ.ಸಹಾಯಧನ ನೀಡುವಂತೆ ಮಾಡಿದ ಮನವಿಗೆ ಉತ್ತರಿಸಿ ಅವರು ಈಗಾಗಲೇ ಪ್ರತಿ ಮನೆಗೆ 1.20ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ನಿರ್ಮಾಣದಲ್ಲಿ ವಿಳಂಬವಾಗಿದೆ ಎಂಬ ದೂರಿದೆ. ಹೀಗಾಗಿ ಇದನ್ನು ರಾಜೀವ ಗಾಂಧಿ ನಿಗಮಕ್ಕೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ಮೀನುಗಾರರಿಗೆ ಪ್ರತ್ಯೇಕ ಉಚಿತ ಆರೋಗ್ಯ ವಿಮೆ ನೀಡಲು ಮಾಡಿದ ಮನವಿಗೆ ಉತ್ತರಿಸಿದ ಸಚಿವ ನಾಡಗೌಡ, ಈಗಾಗಲೇ ಬಡವರಿಗೆ ಎರಡು ಲಕ್ಷ ರೂ.ಗಳ ವಿಮೆಯನ್ನು ನೀಡುತಿದ್ದು, ಅದರಡಿ ಮೀನುಗಾರರೂ ಬರುತ್ತಾರೆ ಎಂದು ನುಡಿದರು.
ಕರಾವಳಿಯಾದ್ಯಂತ ಯಾವುದೇ ಮೀನಿನಂಗಡಿ, ರಾಸಾಯನಿಕ ಬಳಸುವ ಶೀತಲೀಕರಣ ಘಟಕಗಳನ್ನು ಸ್ಥಾಪಿಸದಂತೆ ಮಾಡಿದ ಮನವಿಗೆ ಸ್ಪಂಧಿಸಿದ ನಾಡಗೌಡ, ಅವರೊಂದಿಗೆ ಸ್ಪರ್ಧಿಸುವುದಕ್ಕಾಗಿ ಇಲ್ಲೇ 10 ಲಕ್ಷ ರೂ.ವೌಲ್ಯದ ಶೀತಲೀಕರಣ ಘಟಕವನ್ನು ಮೀನುಗಳ ಸಂರಕ್ಷಣೆಗೆ ಸ್ಥಾಪಿಸುವುದಾಗಿ ತಿಳಿಸಿದರು.
ಇಲ್ಲಿನ ಸುಸಜ್ಜಿತ ಮೀನು ಮಾರುಕಟ್ಟೆಯ ಸಮಸ್ಯೆಗಳ ಕುರಿತಂತೆ -ಶೌಚಾಲಯ, ನೀರಿನ ಕೊರತೆ, ಚಾವಣಿ ಸೋರುತ್ತಿರುವ ಬಗ್ಗೆ- ಮೀನುಗಾರ ಮಹಿಳೆಯರು ಯಾವುದೇ ದೂರು ನೀಡಿದ್ದಾರಾ ಎಂದು ಪ್ರಶ್ನಿಸಿದಾಗ, ಈ ಬಗ್ಗೆ ಅವರು ದೂರಿಲ್ಲ. ಆದರೆ ಈ ಸಮಸ್ಯೆಗಳಿದ್ದರೆ ಮಾರುಕಟ್ಟೆಯ ನಿರ್ವಹಣೆಯನ್ನು ನಗರಸಭೆಗೆ ಒಪ್ಪಿಸುವ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಇಲಾಖಾ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ಮೀನುಗಾರ ಮಹಿಳೆಯರು ಕೇಳಿದ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದೂ ಅವರು ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟರಾವ್ ನಾಡಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾವೇರಿ ಸಮಸ್ಯೆ ಹಾಗೂ ರಾಜ್ಯದ ಇತರ ವಿಷಯದ ಕುರಿತು ಗಮನ ಹರಿಸಿದ ಬಳಿಕಮೀನುಗಾರರ ಸಮಸ್ಯೆಗಳನ್ನು ಅರಿಯಲು ಕರಾವಳಿಗೆ ಬರುತ್ತಾರೆ ಎಂದರು.
ತಾವು ಮುಖ್ಯಮಂತ್ರಿಗಳ ಪರವಾಗಿ ಮೀನುಗಾರರ ಸಮಸ್ಯೆ ತಿಳಿದುಕೊಳ್ಳಲು ಬಂದಿದ್ದೀರಾ ಎಂದು ಪ್ರಶ್ನಿಸಿದಾಗ, ನನ್ನ ಇಲಾಖೆ ನನ್ನ ಜವಾಬ್ದಾರಿ. ಮೀನುಗಾರರ ನಿಯೋಗವೊಂದು ನನ್ನನ್ನು ಭೇಟಿ ಮಾಡಿ ಸಮಸ್ಯೆಯ ಕುರಿತಂತೆ ಮನವಿ ಅರ್ಪಿಸಿದಾಗ, ಶೀಘ ಇಲ್ಲಿಗೇ ಬಂದು ಸಮಸ್ಯೆ ತಿಳಿದುಕೊಳ್ಳುವುದಾಗಿ ಮಾತು ಕೊಟ್ಟಿದೆ. ಅದರಂತೆ ಇಲ್ಲಿಗೆ ಬಂದಿದ್ದೇನೆಯೇ ಹೊರತು ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ಬಂದಿಲ್ಲ ಎಂದರು.
ಸರಕಾರ ರಾಜ್ಯದ ಸಂಸದ್ ಸದಸ್ಯರಿಗೆ ದುಬಾರಿ ಐಫೋನ್ಗಳ ಉಡುಗೊರೆ ನೀಡಿರುವ ವಿವಾದ ಕುರಿತು ಪ್ರಶ್ನಿಸಿದಾಗ, ಸರಕಾರದಿಂದ ಇದನ್ನು ನೀಡಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅದನ್ನು ತಾವು ವೈಯಕ್ತಿಕವಾಗಿ ನೀಡಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ರಾಜ್ಯ ಸರಕಾರದ ಬೊಕ್ಕಸದಿಂದ ನಯಾಪೈಸೆ ಹೋಗಿಲ್ಲ ಎಂದರು.
ತನ್ನ ಮೇಲೆ ಐಟಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿಕೆಶಿ ಈ ಉಡುಗೊರೆ ನೀಡಿರಬಹುದೇ ಎಂದು ಕೇಳಿದಾಗ, ಅದನ್ನು ನೀವು ಸಂಬಂಧ ಪಟ್ಟವರ ಬಳಿಯೇ ವಿಚಾರಿಸಿ ತಿಳಿದುಕೊಳ್ಳಿ ಎಂದರು.
ಉಡುಪಿ ತಾಲೂಕು ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಪರವಾಗಿ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್, ಕಾರ್ಯದರ್ಶಿ ಲಕ್ಷ್ಮೀ ಆನಂದ್ ಸಚಿವರಿಗೆ ಮನವಿ ಅರ್ಪಿಸಿದರು.







