21-22: ಯೇನೆಪೋಯ ಮೆಡಿಕಲ್ ಕಾಲೇಜಿನಲ್ಲಿ ರೋಬೋಟಿಕ್- 3ಡಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರ ಚಿಕಿತ್ಸಾ ಕಾರ್ಯಾಗಾರ

ಮಂಗಳೂರು, ಜು.19: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಸ್ತ್ರೀ ರೋಗ ವಿಭಾಗ, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗ ಹಾಗೂ ಮೂತ್ರ ಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಜುಲೈ 21 ಮತ್ತು 22ರಂದು ಎರಡು ದಿನಗಳ ರೋಬೋಟಿಕ್- 3ಡಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರ ಚಿಕಿತ್ಸಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಕಾರ್ಯಾಗಾರದ ಸಂಘಟನಾ ಅಧ್ಯಕ್ಷ ಹಾಗೂ ಯೆನೆಪೋಯ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಸರ್ಜನ್ ಡಾ. ಎಂ. ವಿಜಯಕುಮಾರ್ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದರು.
ರೋಬೋಟಿಕ್ ಶಸ್ತ್ರ ಚಿಕಿತ್ಸೆಯು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಉತ್ಕೃಷ್ಟ ಹಾಗೂ ಸುರಕ್ಷಿತ ಶಸ್ತ್ರ ಚಿಕಿತ್ಸೆಯಾಗಿದೆ. ಉನ್ನತ ಮಟ್ಟದ ತರಬೇತಿ ಹೊಂದಿದ ಪರಿಣಿತ ಶಸ್ತ್ರ ಚಿಕಿತ್ಸಕರಿಂದ ಇದನ್ನು ನಿರ್ವಹಿಸಲಾಗುತ್ತಿದೆ. ಪ್ರಚಲಿತವಿರುವ 2ಡಿ ಲ್ಯಾಪ್ರೋಸ್ಕೋಪಿಕ್ ಸೌಲಭ್ಯಕ್ಕಿಂತ ರೋಬೋಟಿಕ್ ಶಸ್ತ್ರ ಚಿಕಿತ್ಸೆಯು ಉನ್ನತ ಮಟ್ಟದ್ದಾಗಿದೆ. ರೋಬೋಟಿಕ್ ಶಸ್ತ್ರ ಚಿಕಿತ್ಸಾ ವಿಧಾನದಲ್ಲಿ ರೋಗಿಗಳಿಗೆ ಸಣ್ಣ ಗಾಯ, ಕಡಿಮೆ ನೋವು, ಕ್ಷಿಪ್ರ ಚೇತರಿಕೆ, ಕಡಿಮೆ ಅವಧಿಯ ಆಸ್ಪತ್ರೆ ವಾಸ ಮೊದಲಾದ ಪ್ರಯೋಜನವನ್ನು ಒದಗಿಸಲಾಗುತ್ತದೆ. ಜತೆಗೆ ಸಾಮಾನ್ಯ ಚಟುವಟಿಕೆಗಳಿಗೆ ತ್ವರಿತವಾಗಿ ಮರಳಲು ಅವಕಾಶ ಲಭ್ಯವಾಗುತ್ತದೆ ಎಂದು ಅವರು ಹೇಳಿದರು.
ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯು ರೋಬೋಟಿಕ್ ಹಾಗೂ 3ಡಿ ಲ್ಯಾಪ್ರೋಸ್ಕೋಪಿಕ್ ವಿಧಾನದಲ್ಲಿ ಮೂತ್ರಶಾಸ್ತ್ರ, ಕ್ಯಾನ್ಸರ್, ಸ್ತ್ರೀರೋಗ ಇತ್ಯಾದಿ ವಿಭಾಗಗಳಲ್ಲಿ ಸಮಸ್ಯೆ ಬಾಧಿತ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಪರಿಣಿತ ಶಸ್ತ್ರ ಚಿಕಿತ್ಸಕರನ್ನು ಹೊಂದಿರುವ ಭಾರತದ ಕೆಲವೇ ಕೆಲವು ಆಸ್ಪತ್ರೆಗಳ ಪೈಕಿ ಒಂದಾಗಿದೆ. ಕಳೆದ ಎರಡು ವರ್ಷಗಳಲ್ಲಿ ನೂರಾರು ರೊಬೊಟಿಕ್ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.
ಜು.21ರಂದು ಕ್ಯಾನ್ಸರ್ ಶಸಚಿಕಿತ್ಸಾ ವಿಭಾಗದವರಿಂದ ಅನ್ನನಾಳದ ಕ್ಯಾನ್ಸರ್, ಗುದನಾಳದ ಕ್ಯಾನ್ಸರ್, ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಜು.22ರಂದು ಮೂತ್ರ ಶಾಸ ವಿಭಾಗದವರಿಂದ ಕಿಡ್ನಿ ಕ್ಯಾನ್ಸರ್, ಮೂತ್ರಾಶಯ ಮತ್ತು ಪ್ರೋಸ್ಟೇಟ್ ಕ್ಯಾನ್ಸರ್ ಹಾಗೂ ಸೀ ರೋಗ ವಿಭಾಗದಿಂದ ಅಂಡಾಂಶಯ, ಗರ್ಭಕೋಶ ಮತ್ತು ಗರ್ಭಕೋಶ ಭಿತ್ತಿ ಪದರದ ಕ್ಯಾನ್ಸರ್ಗಳ ಬಗ್ಗೆ ನೈಜ ಪ್ರಾತ್ಯಕ್ಷಿಕೆಗಳು ನಡೆಯಲಿದೆ. ಇದರ ಹೊರತಾಗಿ ಕೊಯಂಮತ್ತೂರು ಜೆಮ್ ಆಸ್ಪತ್ರೆಯ ಡಾ. ಪಲನಿವೇಲು ಅವರಿಂದ ನೈಜ ಪ್ರಾತ್ಯಕ್ಷಿಕೆ ಅವೇಶನ ಕೂಡ ನಡೆಯಲಿದೆ ಎಂದರು.
ಜು.21ರಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಯು.ಟಿ.ಖಾದರ್ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಚಿವ ಝಮೀರ್ ಅಹ್ಮದ್ ಭಾಗವಹಿಸಲಿದ್ದಾರೆ. ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಯೆನೆಪೋಯ ಅಬ್ದುಲ್ಲ ಕುಂಞಿ ಉಪಸ್ಥಿರಿರುವರು ಎಂದವರು ಹೇಳಿದರು.
ಈ ಸಂದರ್ಭ ಡಾ. ನಿಶ್ಚಿತ್ ಡಿಸೋಜ, ಡಾ.ಜಲಾಲುದ್ದೀನ್ ಅಕ್ಬರ್ ಉಪಸ್ಥಿತರಿದ್ದರು.







