‘ಮೇಲ್ತೆನೆ’ಯಿಂದ ಬಿ.ಎ.ಮೊಹಿದೀನ್ರಿಗೆ ನುಡಿನಮನ

ಮಂಗಳೂರು, ಜು.19: ಮಾಜಿ ಸಚಿವ, ಹಿರಿಯ ಮುತ್ಸದ್ದಿ ಬಿ.ಎ.ಮೊಹಿದೀನ್ ಅವರಿಗೆ ನುಡಿನಮನ ಕಾರ್ಯಕ್ರಮವು ದೇರಳಕಟ್ಟೆಯ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ಬುಧವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಜಿ ಯೂಸುಫ್ ಬಾವಾ, ಬೆಳ್ಮ ಗ್ರಾಪಂ ಸದಸ್ಯ ಹಾಜಿ ಕಬೀರ್ ದೇರಳಕಟ್ಟೆ ಅವರು ಬಿ.ಎ.ಮೊಹಿದೀನ್ ಅವರ ಬದುಕಿನ ದಿನಗಳನ್ನು ಮೆಲುಕು ಹಾಕಿದರು.
ಮೇಲ್ತೆನೆಯ ಸದಸ್ಯ ಇಸ್ಮತ್ ಪಜೀರ್ ಮಾತನಾಡಿ ‘ಬಿ.ಎ.ಮೊಹಿದೀನ್ ಈ ನಾಡುಕಂಡ ಮುತ್ಸದ್ದಿ. ಸಚಿವರಾಗಿದ್ದಾಗ ಎಲ್ಲೂ, ಯಾವತ್ತೂ ಅಧಿಕಾರ ದುರುಪಯೋಗ ಮಾಡಿಕೊಳ್ಳದ ನಿಷ್ಕಳಂಕ ವ್ಯಕ್ತಿತ್ವ ಹೊಂದಿದ್ದರು. ಅವರು ಯಾವತ್ತೂ ಕೂಡ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಂಡಾಗ ರಾಜೀನಾಮೆ ಸಲ್ಲಿಸಿ ಇತರರಿಗೆ ಆದರ್ಶ ಮೆರೆದವರು’ ಎಂದರು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಮೇಲ್ತೆನೆಯ ಕೋಶಾಧಿಕಾರಿ ರಫೀಕ್ ಪಾಣೇಲ, ಜೊತೆ ಕಾರ್ಯದರ್ಶಿ ನಿಯಾಝ್ ಪಿ., ಸದಸ್ಯರಾದ ಇಸ್ಮಾಯೀಲ್ ಟಿ., ಮನ್ಸೂರ್ ಅಹ್ಮದ್ ಸಾಮಣಿಗೆ, ಆರೀಫ್ ಕಲ್ಕಟ್ಟ, ಮುಹಮ್ಮದ್ ಬಾಷಾ ನಾಟೆಕಲ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಸ್ವಾಗತಿಸಿದರು. ಸದಸ್ಯ ಸೈಫ್ ಕುತ್ತಾರ್ ವಂದಿಸಿದರು.





