‘ಬವೇರಿಯಾ ಪ್ರತಿನಿಧಿಯಿಂದ ಪೊಲೀಸ್ ಸಿಬ್ಬಂದಿಗೆ ತರಬೇತಿ’

ಬೆಂಗಳೂರು, ಜು.19: ಬವೇರಿಯಾ ಪ್ರತಿನಿಧಿ ವೋಲ್ಕರ್ ಲೆನ್ನಾರ್ಟ್ ಪ್ಲಾನ್ ಹಾಗೂ ಅವರ ತಂಡ ಗುರುವಾರ ವಿಧಾನಸೌಧಕ್ಕೆ ಆಗಮಿಸಿ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ರಾಜ್ಯದ ಪೊಲೀಸ್ ಸಿಬ್ಬಂದಿಗೆ ತರಬೇತಿ ಕೊಡುವ ಕುರಿತು ಚರ್ಚಿಸಿದರು.
ಇದೇ ನವೆಂಬರ್ ತಿಂಗಳಲ್ಲಿ ಬೆಳಗಾವಿ ವಿಭಾಗದಲ್ಲಿ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಮೈಸೂರಿನಲ್ಲಿ ತರಬೇತಿ ನೀಡಿದ್ದೆವು. ಅದೇ ಮಾದರಿಯಲ್ಲಿ ಈಗ ಬೆಳಗಾವಿನಲ್ಲಿ ತರಬೇತಿ ನೀಡಲಾಗುವುದು ಎಂದು ಬವೇರಿಯಾ ಪ್ರತಿನಿಧಿ ವೋಲ್ಕರ್ ಲೆನ್ನಾರ್ಟ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವುದು ಸ್ವಾಗತಾರ್ಹ. ಜತೆಗೆ, ಮಹಿಳಾ ಸುರಕ್ಷತೆಗೂ ನಿಮ್ಮ ತಂಡ ಕೊಡುಗೆ ನೀಡಬೇಕು. ಪೊಲೀಸ್ ಠಾಣೆ ಹೆಚ್ವಿಸುವುದು, ಪೊಲೀಸ್ ಸಿಬ್ಬಂದಿಗಳಲ್ಲಿ ಶೇ.20ರಷ್ಟು ಮಹಿಳೆಯರು ಇರುವಂತೆ ತಯಾರು ಮಾಡಬೇಕಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿದರೆ ಒಳಿತು ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಬವೇರಿಯಾ ತಂಡ, ಮುಂದಿನ ಬಾರಿ ಈ ಬಗ್ಗೆಯೂ ಪ್ರಸ್ತಾವನೆ ತರಲಿದ್ದೇವೆ ಎಂದರು.





