ಹಿರಿಯರಿಗೆ ಗೌರವ ಸಲ್ಲಬೇಕಾದ ಕಡೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ನೋವಿನ ವಿಚಾರ : ನ್ಯಾ.ಕೆ.ಎಸ್.ಬಿಳಗಿ

ಪುತ್ತೂರು,ಜು.19; ವಿದ್ಯೆ, ಹಣ, ಸ್ವಚ್ಛತೆ, ಸಹನೆ ಎಲ್ಲದರಲ್ಲೂ ನಂಬರ್ ಒನ್ ಆಗಿರುವ ದಕ್ಷಿಣ ಕನ್ನಡ ಜಿಲ್ಲೆ ಹಿರಿಯ ನಾಗರಿಕರಿಗೆ ಗೌರವ ನೀಡುವಲ್ಲಿ ವೈಫಲ್ಯತೆ ಕಾಣುತ್ತಿರುವುದು ಖೇದಕರ ಅಂಶವಾಗಿದೆ. ಹಿರಿಯರಿಗೆ ಗೌರವ ಸಲ್ಲಬೇಕಾದ ಕಡೆ ಅವರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ನೋವು ಪಡುವಂತಹ ವಿಚಾರವಾಗಿದ್ದು, ಇದು ನಮ್ಮನ್ನು ಅಧ:ಪತನದತ್ತ ಒಯ್ಯುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಎಸ್.ಬಿಳಗಿ ಅಭಿಪ್ರಾಯಪಟ್ಟರು.
ಅವರು ಜಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಮಂಗಳೂರು, ಪುತ್ತೂರು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ,ನ್ಯಾಯವಾದಿಗಳ ಸಂಘ ಹಾಗೂ ವಿವಿಧ ಸರಕಾರಿ ಇಲಾಖೆಗಳು ಹಾಗೂ ಸರಕಾರೇತರ ಸಂಘಸಂಸ್ಥೆಗಳ ಸಂಯೋಜನೆಯೊಂದಿಗೆ ಪುತ್ತೂರು ನಾರಾಯಣಗುರು ಸಭಾಭವನದಲ್ಲಿ ಗುರುವಾರ ನಡೆದ ಹಿರಿಯ ನಾಗರಿಕರಿಗೆ ಕಾನೂನು ಮತ್ತು ಸೌಲಭ್ಯಗಳ ಅರಿವು-ನೆರವು ಮತ್ತು ಆರೋಗ್ಯ ತಪಾಸಣಾ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
60 ವರ್ಷಕ್ಕೆ ಅರಳಬೇಕಾದ ಹಿರಿಯ ನಾಗರಿಕರು ಮಾನಸಿಕವಾಗಿ ನೋವು ಉಣ್ಣುವಂತೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಶೋಚನೀಯ ವಿಚಾರವಾಗಿದೆ. ಹಿರಿಯ ಕಿರಿಯರ ನಡುವೆ ಸಾಮರಸ್ಯದ ಬದುಕಿಗೆ ಅರ್ಥ ಕಂಡುಕೊಳ್ಳುವ ಕೆಲಸಕ್ಕೆ ನಾವೆಲ್ಲಾ ಮುಂದಾಗಬೇಕು. ಸ್ವಾಭಿಮಾನದ ಬದುಕಿಗೆ ಹಿರಿಯರು ಮುನ್ನುಡಿ ಬರೆಯಬೇಕು. ಹಿರಿಯ ಜೀವಗಳನ್ನು ಅರ್ಥ ಮಾಡಿಕೊಂಡು ಕಿರಿಯರು ಸಮ್ಮಿಳನದ ಜೀವನಕ್ಕೆ ಆಧ್ಯತೆ ನೀಡಬೇಕು ಎಂದವರು ಹೇಳಿದರು.
ಹಿರಿಯರು ತಮ್ಮ ಅಹಂ ಬಿಡುವ ಮೂಲಕ ಋಣಾತ್ಮಕ ಚಿಂತನೆಗಳಿಂದ ಹೊರಬಂದು ಧನಾತ್ಮಕ ಯೋಚನೆಗಳ ಮೂಲಕ ಹೊಂದಾಣಿಕೆ ಮಾಡಿಕೊಂಡರೆ ವಿರೋಧ ಎಂಬುವುದು ನಾಶವಾಗುತ್ತದೆ. ಪುರುಷನಿಗೆ ಆನಂದ ನೀಡುವ ಪ್ರತಿಯೊಬ್ಬ ಹೆಣ್ಣು ತನ್ನ ಮನೆಯನ್ನು ನಂದನವನ ಮಾಡಿಕೊಳ್ಳಲು ಸಾಧ್ಯ. ಹಿರಿಯರ ಶಾಂತತೆ ಹಾಗೂ ಯುವಕರ ಬೋರ್ಗೆರೆಯುವ ಸಾಗರದ ಮನಸು ಒಂದಾದರೆ ಬದುಕು ಸುಂದರವಾಗಿ ಅರಳುತ್ತದೆ ಎಂದವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಧೀಶರಾದ ಶಿವಣ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ನಗರಸಭಾ ಆಯುಕ್ತೆ ರೂಪಾ ಆರ್ ಶೆಟ್ಟಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಕೆ.ಭಾಸ್ಕರ ಕೋಡಿಂಬಾಳ, ಯೇನಪೋಯ ಮೆಡಿಕಲ್ ಕಾಲೇಜಿನ ಮುಖ್ಯಸ್ಥೆ ಡಾ.ಪ್ರಭಾ ಅಧಿಕಾರಿ, ಅಲ್ಜೆಮಿನ್ ಅಸೋಶಿಯೇಷನ್ ಮ್ಯಾನೇಜಿಂಗ್ ಟ್ರಸ್ಟಿ ಜೆರಾರ್ಡಿನ್ ಡಿಸೋಜ, ಪುತ್ತೂರು ಕ್ಯಾಂಪ್ಕೊ ಅಧ್ಯಕ್ಷರಾದ ಎಸ್.ಆರ್.ಸತೀಶ್ಚಂದ್ರ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ವಾಮನ ಪೈ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಅಧ್ಯಕ್ಷ ಜಯಂತ ನಡುಬೈಲು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ವ್ಯವಹಾರಿಕಾ ನ್ಯಾಯಾಧೀಶರಾದ ಮಂಜುನಾಥ್ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯರನ್ನು ಅಲಕ್ಷಿಸುವ ಹಾಗೂ ನಿರ್ಲಕ್ಷಿಸುವ ಗುಣಗಳು ಪ್ರಸ್ತುತ ಹೆಚ್ಚಾಗುತ್ತಿದೆ. ಸಂವಿಧಾನದ 41 ಮತ್ತು 46ನೇ ವಿಧಿಗಳು ಹಿರಿಯ ರಕ್ಷಣೆಗಿದ್ದರೂ ಹಿರಿಯರಿಗೆ ಮಾನಸಿಕವಾಗಿ ನೋವುಂಟು ಮಾಡುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದನ್ನು ತಡೆಯುವ ಕೆಲಸಕ್ಕೆ ಯುವಜನತೆ ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣ ಪ್ರಸಾದ್ ರೈ ವಂದಿಸಿದರು. ದೀಪಕ್ ಹಾಗೂ ಲಿಪಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ವಾಕಿಂಗ್ ಸ್ಟಿಕ್, ಗುರುತುಚೀಟಿ, ವೃದ್ದಾಪ್ಯವೇತನದ 40 ಮಂಜೂರಾತಿ ಪತ್ರವನ್ನು ಜಿಲ್ಲಾನ್ಯಾಯಾಧೀಶರಾದ ಕೆ.ಎಸ್.ಬಿಳಗಿ ವಿತರಣೆ ಮಾಡಿದರು. ಬಳಿಕ ಹಿರಿಯರ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.







