ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಚಿವ ಝಮೀರ್ ಅಹ್ಮದ್ ಭೇಟಿ

ಮಂಗಳೂರು, ಜು.21: ಕದ್ರಿ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಶನಿವಾರ ಮಧ್ಯಾಹ್ನ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಹಜ್ ಸಚಿವ ಝಮೀರ್ ಅಹ್ಮದ್ ಖಾನ್ ಭೇಟಿ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಹಜ್ ಯಾತ್ರಿಕರ ಪ್ರಥಮ ವಿಮಾನ ಹಾರಾಟವು ಶುಕ್ರವಾರ ಮಂಗಳೂರಿನಿಂದ ಆರಂಭವಾಗಿದೆ. ಹೀಗಾಗಿ ಮಂಗಳೂರಿಗೆ ಬರುವುದಕ್ಕೆ ಅವಕಾಶ ದೊರೆಯಿತು ಎಂದರು.
ರಾಜ್ಯ ಸರಕಾರವು ಒಳ್ಳೆಯ ಕಾರ್ಯಕ್ರಮಗಳನ್ನು ಕೊಡುತ್ತಿದೆ. ಐದು ವರ್ಷಗಳ ಆಡಳಿತ ನೀಡುವುದರಲ್ಲಿ ಯಾವುದೇ ಸಂದೇಹ ಬೇಡ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಈ ಸರಕಾರವು ದೇಶಕ್ಕೇ ಮಾದರಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಮುಂದಿನ ಲೋಕಸಭಾ ಚುನಾವಣೆಯತ್ತ ನಾವು ಗಮನ ಕೊಡಬೇಕಾಗಿದೆ. ಕೇಂದ್ರದಲ್ಲಿನ ಎನ್ಡಿಎ ಸರಕಾರವನ್ನು ಕೆಳಗಿಳಿಸುವ ಮಹತ್ಕಾರ್ಯ ಆಗಬೇಕಾಗಿದೆ. ಒಟ್ಟಿನಲ್ಲಿ ನಾವೆಲ್ಲರೂ ಪಕ್ಷ ಮತ್ತು ದೇಶಕ್ಕಾಗಿ ದುಡಿಯುವವರಾಗಬೇಕು ಎಂದರು.
ಈ ಸಂದರ್ಭ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕಣಚೂರು ಮೋನು, ಬಿಬಿಎಂಪಿ ಸದಸ್ಯ ಸೈಯದ್ ಮುಜಾಹಿದ್, ಎನ್ಎಸ್ಯುಐ ಅಧ್ಯಕ್ಷ ಅಬ್ದುಲ್ಲ ಬಿನ್ನು, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿಲ್ಲಾ ಕಾರ್ಯದರ್ಶಿ ಪ್ರೇಮನಾಥ್ ಬಳ್ಳಾಲ್ಭಾಗ್, ಮಾಜಿ ತಾಪಂ ಸದಸ್ಯ ಮುಸ್ತಫಾ, ಯು.ಟಿ ಇಫ್ತಿಕಾರ್, ಜಿಲ್ಲಾ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್, ಅನ್ಸಾರ್, ಅಬ್ದುಲ್ ಸವಾದ್, ಮುದಾಸಿರ್ ಕುದ್ರೋಳಿ, ನಝೀರ್ ಮಠ, ಅಮೀರ್ ತುಂಬೆ, ಡಿ.ಎಂ. ಅಸ್ಲಾಂ, ಭೂಷಣ್ ಸನಿಲ್, ಶರೀಫ್ ಕಂಠಿ, ಸಮರ್ಥ್ ಭಟ್, ನೂರುದ್ದೀನ್ ಸಾಲಿಮಾರ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಸ್ವಾಗತಿಸಿದರು.