ಮಂಗಳೂರಿನಿಂದ ನೇರ ವಿಮಾನಕ್ಕೆ ಟೂರ್ ಆಪರೇಟರ್ ಸಂಘ ಆಗ್ರಹ
ಮಂಗಳೂರು, ಜು.22: ಉಮ್ರಾ ಹಾಗೂ ಇತರ ಯಾತ್ರಿಕರ ಅನುಕೂಲಕ್ಕಾಗಿ ಮಂಗಳೂರಿನಿಂದ ನೇರ ವಿಮಾನ ವ್ಯವಸ್ಥೆ ಮಾಡಬೇಕು ಎಂದು ದ.ಕ. ಹಜ್ ಮತ್ತು ಉಮ್ರಾ ಟೂರ್ ಅಪರೇಟರ್ ಸಂಘ ಆಗ್ರಹಿಸಿದೆ.
ಮಂಗಳೂರಿಗೆ ಭೇಟಿ ನೀಡಿರುವ ರಾಜ್ಯ ಹಜ್ ಸಚಿವ ಝಮೀರ್ ಅಹ್ಮದ್ ಖಾನ ಅವರಿಗೆ ಮನವಿ ಸಲ್ಲಿಸಿದ ಆಪರೇಟರ್ ಸಂಘಗಳ ಮುಖಂಡರನ್ನು ಒಳಗೊಂಡ ನಿಯೋಗವು ದ.ಕ. ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಮಂಗಳೂರು ಕೇಂದ್ರೀಕೃತ ದ.ಕ. ಜಿಲ್ಲೆಯಿಂದ ಅಸಂಖ್ಯಾತ ಉಮ್ರಾ ಯಾತ್ರಾರ್ಥಿಗಳು ಪವಿತ್ರ ಉಮ್ರಾ ಕಾರ್ಯ ನಿರ್ವಹಿಸಲು ಬೆಂಗಳೂರು , ಕೋಝಿಕೊಡು ಮತ್ತು ಮುಂಬೈಯ ಮೂಲಕ ಪ್ರಯಾಣ ಮಾಡುತ್ತಾರೆ. ಬಹುತೇಕ ಯಾತ್ರಾರ್ಥಿಗಳು ಹಿರಿಯ ನಾಗರಿಕರಾಗಿರುವುದರಿಂದ ಮತ್ತು ಮಂಗಳೂರಿನಿಂದ ಬೆಂಗಳೂರು, ಮುಂಬೈಗೆ ತೆರಳಿ ಯಾತ್ರೆ ಹೊರಡುವುದು ಪ್ರಯಾಸಕರವಾಗಿದೆ. ಹಾಗಾಗಿ ಹಜ್-ಉಮ್ರಾ ಯಾತ್ರಾರ್ಥಿಗಳ, ಅನಿವಾಸಿ ಭಾರತೀಯರ ಅನುಕೂಲಕ್ಕಾಗಿ ವಾರದಲ್ಲಿ ಕನಿಷ್ಠ 2 ವಿಮಾನಗಳನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆದ್ದಾಕ್ಕೆ ಅಥವಾ ಮದೀನಾಕ್ಕೆ ನೇರ ಯಾನ ಹೊರಡುವಂತೆ ವ್ಯವಸ್ಥೆಗೊಳಿಸಲು ಒತ್ತಾಯಿಸಿದೆ.
ಸಂಘದ ಸ್ಥಾಪಕ ಝಾಕೀರ್ ಇಕ್ಲಾಸ್, ಪ್ರಧಾನ ಕಾರ್ಯದರ್ಶಿ ಝಕೀರ್ ಹುಸೇನ್ ಕೃಷ್ಣಾಪುರ, ಅಧ್ಯಕ್ಷ ಅನ್ಸಾರ್ ತಂಙಳ್, ಹಸನ್ ಸಾಗ್, ಮೊಯ್ದಿನ್ ಮುಕ್ಕ, ಚೈಬಾವು ಕ್ಲಾಸಿಕ್ ಮತ್ತಿತರರು ಉಪಸ್ಥಿತರಿದ್ದರು.