ಸಂಘಪರಿವಾರದ ಬೆದರಿಕೆಯಿಂದ ಕಾದಂಬರಿ ಹಿಂಪಡೆದದ್ದು ಪ್ರಬುದ್ಧ ಕೇರಳಕ್ಕಾದ ಅವಮಾನ: ರಮೇಶ್ ಚೆನ್ನಿತ್ತಲ
ತಿರುವನಂತಪುರಂ,ಜು. 22: ಮಾತೃಭೂಮಿ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಎಸ್. ಹರೀಶ್ರ 'ಮೀಶ' ಎಂಬ ಕಾದಂಬರಿಯನ್ನು ಸಂಘಪರಿವಾರದ ಬೆದರಿಕೆಯ ಹಿನ್ನೆಲೆಯಲ್ಲಿ ಹಿಂಪಡೆದಿರುವುದು 'ಪ್ರಬುದ್ಧ ಕೇರಳ'ಕ್ಕೆ ದೊಡ್ಡ ನಾಚಿಗೆಕೇಡು ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದರು.
ತಮಗಿಷ್ಟವಿಲ್ಲದ್ದನ್ನು ಬರೆಯುವವರನ್ನು ಬೆದರಿಸಿ ಮೌನಕ್ಕೆ ದೂಡಲು, ಬಲಪ್ರಯೋಗಿಸಿ ಇಲ್ಲದಾಗಿಲು ಸಂಘಪರಿವಾರ ಹಿಂಜರಿಯುವುದಿಲ್ಲ. ಕಲ್ಬುರ್ಗಿ, ಗೌರಿ ಲಂಕೇಶ್ರಿಂದ ಹಿಡಿದು ಪೆರುಮಾಳ್ ಮುರುಗನ್ ವರೆಗೆ ಬಲಪ್ರಯೋಗಿಸಿ ಇಲ್ಲವಾಗಿಸುವುದು ಮತ್ತು ಮೌನಕ್ಕೆ ಸರಿಯುವಂತೆ ಮಾಡಲಾಗಿದೆ. ಆದರೆ ಕೇರಳದಲ್ಲಿ ಈ ಶಕ್ತಿಗಳಿಗೆ ಪ್ರಭಾವ ಬೀರಲು ಸಾಧ್ಯವಾಗುತ್ತಿದೆ ಎನ್ನುವುದು ಅತ್ಯಂತ ಅಪಾಯಕಾರಿ ಎಂದವರು ಹೇಳಿದರು.
ಕೇರಳ ಫ್ಯಾಶಿಸ್ಟ್ ಬೆದರಿಕೆಯ ಕೊಡೆಯ ಕೆಳಗಿದೆ ಎನ್ನುವ ಅರಿವು ನಮ್ಮಲ್ಲಿ ಹೆದರಿಕೆಯುಂಟು ಮಾಡುತ್ತಿದೆ. ಕಾದಂಬರಿಕಾರ ಹರೀಶ್ ಮತ್ತು ಅವರ ಕುಟುಂಬ ಸದಸ್ಯರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟದಾಗಿ ಚಿತ್ರೀಕರಿಸಲಾಗುತ್ತಿದೆ. ಹೀಗಿದ್ದರೂ ಇವರ ವಿರುದ್ಧ ಕ್ರಮ ಜರಗಿಸಲು ಹಿಂಜರಿದ ಗೃಹ ಇಲಾಖೆಯ ನಿಲುವು ನಿಗೂಢ ಎಂದು ರಮೇಶ್ ಚೆನ್ನಿತ್ತಲ ಹೇಳಿದರು.