ಅಧ್ಯಕ್ಷರಿಲ್ಲದೆ ಅನಾಥವಾಗಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಬೆಂಗಳೂರು, ಜು.23: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿದ್ದ ಕೃಪಾ ಅಳ್ವಾ ಅವರ ಅಧಿಕಾರ ಅವಧಿ ಜೂ.30ಕ್ಕೆ ಕೊನೆಗೊಂಡಿದ್ದು, ಇದುವರೆಗೂ ಅಧ್ಯಕ್ಷರನ್ನು ನೇಮಕ ಮಾಡಿಲ್ಲ.
ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಆಯೋಗದ ಸಿಬ್ಬಂದಿ, ಪ್ರತಿನಿತ್ಯ 10 ರಿಂದ 15 ದೂರುಗಳೂ ಬರುತ್ತಿವೆ. ಆದರೆ, ಮುಖ್ಯಸ್ಥರಿಲ್ಲದೆ ಯಾವುದೇ ಆದೇಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರ್ಟಿಐ ಅಡಿಯಲ್ಲಿ ಪ್ರವೇಶ ನಿರಾಕರಣೆ, ಪ್ರವೇಶ ಶುಲ್ಕ ಸಂಬಂಧಿಸಿದ ದೂರುಗಳೇ ಹೆಚ್ಚಾಗಿ ಬರುತ್ತಿವೆ. ಆದರೆ, ಸಮಿತಿಯಲ್ಲಿನ ಸದಸ್ಯರೊಬ್ಬರನ್ನು ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿದರೂ, ಈ ಸಂಬಂಧ ಅಧಿಕೃತ ಆದೇಶ ದೊರೆತಿಲ್ಲ. ಇದರ ಪರಿಣಾಮವಾಗಿ ಹಂಗಾಮಿ ಮುಖ್ಯಸ್ಥರಾಗಲೀ ಅಥವಾ ಬೇರೆ ಯಾರಾಗಲೀ ದೂರುಗಳ ವಿಚಾರಣೆ ನಡೆಸಿ ಆದೇಶ ನೀಡಲು ಸಾಧ್ಯವಾಗುತ್ತಿಲ್ಲ.
ಸಮಿತಿಯ ಸದಸ್ಯರೊಬ್ಬರು ಮಾತನಾಡಿ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಆಯೋಗ ಪ್ರಾಮುಖ್ಯತೆ ನೀಡುವುದರಿಂದ ಶೀಘ್ರದಲ್ಲಿಯೇ ಆಯೋಗದ ಮುಖ್ಯಸ್ಥರನ್ನು ಸರಕಾರ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆಯೋಗದ ಅಧ್ಯಕ್ಷರನ್ನು ಶೀಘ್ರದಲ್ಲಿಯೇ ನೇಮಿಸಬೇಕು. ನೇಮಕ ಮಾಡುವವರೆಗೂ ಹಂಗಾಮಿ ಮುಖ್ಯಸ್ಥರಿಗೆ ಅಧಿಕಾರ ನೀಡುವಂತೆ ಮನವಿ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಲು ಆಯೋಗದ ಸದಸ್ಯರು ತೀರ್ಮಾನ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.







